ವಿದ್ಯುತ್ ಹರಿದು ಇಬ್ಬರು ಯುವಕರು ಸಾವಿಗೀಡಾದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಪಾವಗಡ ತಾಲೂಕಿನ ಟಿ.ಎನ್.ಬೆಟ್ಟದ ಹೊರವಲಯದ ಸರ್ವೇ ನಂಬರ್ 293ರ ಜಮೀನಿನಲ್ಲಿ ನಡೆದಿರುವ ಹೃದಯ ವಿದ್ರಾವಕ ಘಟನೆ ಇದಾಗಿದೆ. 29 ವರ್ಷದ ಅನಿಲ್ ಕುಮಾರ್ ಮತ್ತು 35 ವರ್ಷದ ಪುಟ್ಟರಾಜು ಅವಘಡಕ್ಕೆ ತುತ್ತಾಗಿದ್ದಾರೆ.
ಸುಮಾರು ಮೂರು ಎಕರೆ ಜಮೀನಿನಲ್ಲಿ ಶೇಂಗಾ ಬಿತ್ತನೆ ಮಾಡಿದ್ದ ರಾಮರಾಜಪ್ಪನ ಕುಟುಂಬಸ್ಥರು ಕಾಡು ಪ್ರಾಣಿಗಳ ಕಾವಲಿಗೆ ಎಂದು ಪ್ರತಿದಿನ ರಾತ್ರಿ ಹೊಲಕ್ಕೆ ಬರುತ್ತಿದ್ದರು. ನೀರು ಹಾಯಿಸುತ್ತಿದ್ದರು. ಎಂದಿನಂತೆ ಶುಕ್ರವಾರ ರಾತ್ರಿಯೂ ಪುಟ್ಟರಾಜು ಜೊತೆ ಅನಿಲ್ ಕುಮಾರ್ ಹೊಲಕ್ಕೆ ಹೋಗಿದ್ದಾರೆ.
ಆ ದಿನ ವಿಪರೀತ ಮಳೆ ಸುರಿದಿದೆ. ಈ ಸಮಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಮಾಹಿತಿ ತಿಳಿದ ಕೂಡಲೇ ಪಾವಗಡ, ಅರಸೀಕೆರೆ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ತಾರಾಸಿಂಗ್ ಮತ್ತು ಮುಖ್ಯಪೇದೆ ಸಿದ್ದೇಶ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೃತ ದೇಹ ಸಾಗಿಸಿದ್ದಾರೆ.
ಸ್ಥಳಕ್ಕೆ ಬೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಧಾವಿಸಿ ಅನಾಹುತದ ಬಗ್ಗೆ ಮಾಹಿತಿ ಪಡೆದಿದ್ದಾರೆ.