ದಿವಂಗತ ದೇವರಾಜ ಅರಸು ಬರುವುದಕ್ಕೂ ಮೊದಲ ಭ್ರಷ್ಟಾಚಾರವೇ ಇರಲಿಲ್ಲವೇ? ಎಲ್ಲರೂ ಸತ್ಯಹರಿಶ್ಚಂದ್ರರೇ ಇದ್ದರೇ?. ಭ್ರಷ್ಟಾಚಾರದ ಆರೋಪ ಅರಸು ಒಬ್ಬರ ಮೇಲೆ ಯಾಕೆ ಬರುತ್ತದೆ. ಅವರಿಗಿಂತ ಹಿಂದೆ ಇದ್ದವರ ಮೇಲೆ ಯಾಕೆ ಬರೋದಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಅರಸು ಅವರು ಜಾರಿಗೊಳಿಸಿದ ಕಾರ್ಯಕ್ರಮಗಳೇ ಇದಕ್ಕೆ ಕಾರಣ ಎಂದು ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ಕುಮಾರ್ ಪ್ರಶ್ನೆ ಮಾಡಿದರು.
ತುಮಕೂರು ವಿಶ್ವವಿದ್ಯಾನಿಲಯ ಮತ್ತು ಡಿ.ದೇವರಾಜ ಅರಸು ಅಧ್ಯಯನ ಪೀಠದ ವತಿಯಿಂದ ವಿವಿಯ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನಮುಖಿ ಅರಸು ಕೃತಿಯ ಲೋಕಾರ್ಪಣೆ ಮತ್ತು ಡಿ.ದೇವರಾಜ ಅರಸು ಸಮಸಮಾಜದ ಕನಸುಗಾರ ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವರಾಜ ಅರಸು ಸಣ್ಣ ಸಣ್ಣ ಸಮುದಾಯದ ನಾಯಕರನ್ನು ಗುರುತಿಸಿ ಅವರನ್ನು ವಿಧಾನಸಭೆ ಆಯ್ಕೆ ಆಗುವಂತೆ ಮಾಡಿದರು. ವೀರಪ್ಪ ಮೋಯ್ಲಿಯಂಥವರು ಆಯ್ಕೆಯಾಗುವಂತೆ ನೋಡಿಕೊಂಡರು. ಮೋಯ್ಲಿ ಅದೊಂದು ಸಣ್ಣ ಸಮಾಜ. ಕಾರ್ಕಳದಲ್ಲಿ ಅವರ ಜನಸಂಖ್ಯೆ ನೂರಕ್ಕೂ ಮೀರುವುದಿಲ್ಲ. ಅವರಿಗೆ ಅಸೆಂಬ್ಲಿಯ ಕನಸು ಕಾಣಲೂ ಸಾಧ್ಯವಿರಲಿಲ್ಲ. ಆದರೂ ಕಾರ್ಕಳದಿಂದ ಅಸೆಂಬ್ಲಿಗೆ ಬರುತ್ತಾರೆ. ಇದಕ್ಕೆ ಕಾರಣ ಡಾ.ಬಿ.ಆರ್. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ಎಂದು ಹೇಳಿದರು.
ಇಂದು ವಿಧಾನಸಭೆ, ವಿಧಾನಪರಿಷತ್ ಮತ್ತು ಸಂಸತ್ನಲ್ಲಿ ಚರ್ಚೆ ನಡೆಯುತ್ತಿಲ್ಲ. ಬದಲಿಗೆ ಪರಸ್ಪರರು ದೂರಿಕೊಳ್ಳುವ ವ್ಯವಸ್ಥೆ ಇದೆ. ನೀನೆಷ್ಟು ಹೊಡೆದೆ ಎಂಬುದು ನನಗೆ ಗೊತ್ತಿಲ್ವ, ನೀನು ಬಹಳ ದೊಡ್ಡ ಮನುಷ್ಯ, ನಿಂದೆಲ್ಲ ತೆಗೀಲಾ ಎಂದು ಪರಸ್ಪರ ದೂಷಿಸಿಕೊಳ್ಳುವುದು ನಡೆಯುತ್ತಿದೆ. ಆದರೂ ಪವರ್ ಟ್ರಾನ್ಸ್ಫರ್ ಆಗುತ್ತದೆ. ಅಂತಹ ಭದ್ರ ಬುನಾದಿಯ ಮೇಲೆ ನಿಂತಿರುವ ಪ್ರಜಾಪ್ರಭುತ್ವ ದೇಶ ನಮ್ಮದು. ಆದರೆ ಈಗಿನ ಮಹಾನುಭಾವರುಗಳು ಈ ಪ್ರಜಾಪ್ರಭುತ್ವವನ್ನು ಮಾರಾಟ ಮಾಡಲು ಹೊರಟಿದ್ದಾರೆ ಎಂದು ತಿಳಿಸಿದರು.

ಇಂದು ಪಾರ್ಲಿಮೆಂಟು, ಅಸೆಂಬ್ಲಿ ಬಿಟ್ಟು ಬಿಡಿ ಕಾರ್ಪುರೇಷನ್ಗೆ ಸ್ಪರ್ಧೆ ಮಾಡಲು ಸಾಧ್ಯವಾಗುವುದಿಲ್ಲ. ನಾಮಿನೇಷನ್ ಹಾಕಲು ದುಡ್ಡಿಲ್ಲದಿದ್ದಾಗ ಜನರೇÀ ದುಡ್ಡು ಹಾಕಿ ನಾಮಿನೇಷನ್ ಪೈಲ್ ಮಾಡಿಸಿ ಗೆಲ್ಲಿಸಿದಂತಹ ಪ್ರಜಾಪ್ರಭುತ್ವ ಈಗ ಮಾರಾಟದ ವಸ್ತುವಾಗಿದೆ. ಇಲ್ಲಿ ಇಂಥದ್ದೇ ಪಕ್ಷ ಅಂತ ಏನೂ ಇಲ್ಲ. ಅವರೆಲ್ಲರೂ ಒಗ್ಗಟ್ಟಾಗಿದ್ದಾರೆ. ಸಹೋದರ ಭಾವನೆಯಿಂದ ಎಲ್ಲರೂ ಆತ್ಮೀಯವಾಗಿ ಮಾತನಾಡುತ್ತಾರೆ. ಅಯೋಗ್ಯರದಲ್ಲಿ ಯಾರು ಯೋಗ್ಯರು ಎಂದು ಹುಡುಕಿ, ಶ್ರೀಮಂತರಲ್ಲಿ ಅತಿ ಶ್ರೀಮಂತರು ಯಾರು ಅಂತ ಹುಡುಕಿ ಅಂಬೇಡ್ಕರ್ ಆಶಯವನ್ನು ಪೂರೈಸಲು ಅರಸು ಅವರಿಗೆ ಗೌರವ ಕೊಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಚುನಾವಣಾ ಆಯೋಗ ಸಂಸತ್, ಅಸೆಂಬ್ಲಿಗೆ ಚುನಾವಣೆ ನಡೆಸುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆ, ಅರ್ಹರನ್ನು ಇಟ್ಟುಕೊಳ್ಳುವುದು, ಅನರ್ಹರನ್ನು ತೆಗೆಯುವುದು, ಶಿಸ್ತು ಉಲ್ಲಂಘನೆ ಆಗದಂತೆ ನೋಡಿಕೊಳ್ಳುವುದು, ಮತೀಯ ಭಾವನೆಗಳು ಬಾರದಂತೆ ನೋಡಿಕೊಳ್ಳುವುದು, ಪ್ರಕ್ಷುಬ್ದತೆ ಇಲ್ಲದಂತೆ ನೋಡಿಕೊಳ್ಳುವುದು, ನಿಷ್ಪಕ್ಷಪಾತವಾದ ಚುನಾವಣೆ ನಡೆಸುವುದ ಆಯೋಗದ ಕರ್ತವ್ಯವಾಗಿದೆ. ಪ್ರತಿ ವರ್ಷ ಚುನಾವಣಾ ಆಯೋಗದವರು, ಜನವರಿ ತಿಂಗಳಲ್ಲಿ ಕ್ಯಾಲೆಂಡರ್ನ ಹಾಕಿ ಮನೆ ಮನೆಗೂ ಹೋಗಿ ಹೊಸದಾಗಿ ಅರ್ಹತೆ ಪಡೆದುಕೊಂಡವರನ್ನು ಸೇರಿಸುವುದು, ಮೃತರಾಗಿರುವವರ ಹೆಸರನ್ನು ತೆಗೆಯುವುದು, ಸರ್ಕಾರಿ ನೌಕರರು ಬೇರೆ ಕಾರಣಕ್ಕೆ ಊರು ಬಿಟ್ಟು ಹೋಗಿದ್ದರೆ ಮತದಾರರ ಪಟ್ಟಿಯಿಂದ ತೆಗೆಯುವ ಕೆಲಸ ಮಾಡುತ್ತಿದ್ದರು. ಮತದಾರರ ಪರಿಷ್ಕರಣೆ ಮಾಡುತ್ತಿದ್ದರು. ಅದರ ಹೆಸರೇ ರಿವಿಷನ್ ಆಫ್ ವೋಟರ್ ಲೀಸ್ಟ್ ಎಂದರು.
ಈ ಸ್ಪೆಷಲ್ ರಿವಿಜನ್ ಯಾಕೆ ಬೇಕಾಗಿತ್ತು. ಎಸ್ಐಆರ್ ಮೂಲಕ ಮತದಾರರ ಹೆಸರನ್ನು ತೆಗೆದು ಹಾಕುವ ಕೆಲಸ ನಡೆಯುತ್ತಿದೆ. ಈಗ ಎಸ್ಐಆರ್ ಹೆಸರಿನಲ್ಲಿ ದಾಖಲೆ ಕೇಳುತ್ತಾರೆ. ನಿಮ್ಮ ಅಪ್ಪ ಎಲ್ಲಿದ್ದರು, ನಿಮ್ಮ ತಾತ ಎಲ್ಲಿದ್ದರು ಎಂಬ ಬಗ್ಗೆ ಮತದಾರರ ಪಟ್ಟಿಗೆ ಸೇರಿಸಲು ದಾಖಲೆಗಳನ್ನು ಕೊಡಬೇಕು. ಇದನ್ನು ಅಮಿತ್ ಶಾ ಒಪ್ಪಿಕೊಳ್ಳಬೇಕು. ದಾಖಲೆಗಳ ಸರಿಯಾಗಿವೆ. ಮತದಾರರ ಪಟ್ಟಿಯಲ್ಲಿ ಹೆಸರು ಇರಬಹುದು ಎಂದು ಹೇಳುವಂತಹ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದರು.
ಪಶ್ಚಿಮ ಬಂಗಾಳದಲ್ಲಿ 94 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಯಿತು. ಅವರು ಬದುಕಿದಾರೋ ಸತ್ತಿದಾರೋ? ಅವರು ಈ ದೇಶದ ಪ್ರಜೆ ಹೌದೋ ಅಲ್ಲವೋ? ಎಂಬುದನ್ನು ನೋಡದೆ ಮತದಾರರ ಪಟ್ಟಿಯಿಂದ ಕೈಬಿಡಲಾಯಿತು. ನಮ್ಮ ದೇಶದವರು ಅಲ್ಲ ಅಂದ ಮೇಲೆ ಅವರ ದೇಶಗಳಿಗೆ ಓಡಿಸಬೇಕಲ್ಲವೇ? ಎಸ್ಐಆರ್ ಚುನಾವಣೆಗೆ ಮಾತ್ರ ಎಂದರು.
ವ್ಯಕ್ತಿ ಬದುಕಿದ್ದಾಗ ಸ್ಮರಿಸದ ಜನರು ಆತ ಸತ್ತ ಮೇಲೆ ಹಾಡಿ ಹೊಗಳುತ್ತಾರೆ. ಇದು ವೈದಿಕ ಸಂಸ್ಕೃತಿ. ವೈದಿಕ ಪರಂಪರೆಯಲ್ಲಿ ಜೀವಂತ ಇದ್ದಾಗ ಊಟ ಹಾಕಲ್ಲ. ಸತ್ತು ಹೋದ ಮೇಲೆ ವೈಕುಂಠ ಸಮಾರಾಧನೆಯನ್ನು ವಿಜೃಂಭಣೆಯಿದ ಮಾಡುತ್ತಾರೆ. ಸೀರಿಯಲ್ ಸೆಟ್ ಹಾಕ್ತಾರೆ. ಆರೇಳು ರೀತಿಯ ಸಿಹಿ ತಿನಿಸುಗಳನ್ನು ಮಾಡುತ್ತಾರೆ. ಡಯಾಬಿಟಿಕ್ ಇದ್ದವನಿಗೆ ಬಲವಂತ ಮಾಡಿ ತಿನ್ನಿಸುತ್ತಾರೆ. ಇದು ಇಂದಿನ ಪರಿಸ್ಥಿತಿ ಎಂದು ಹೇಳಿದರು.
ಮೌಲ್ಯಮಾಪನ ಕುಲಸಚಿವ ಮೋಹನ್, ಡಿ.ದೇವರಾಜ ಅರಸು ಅಧ್ಯಯನ ಪೀಠದ ಮುಖ್ಯಸ್ಥ ಗುಂಡೇಗೌಡ, ಲೇಖಕ ಕೆ.ಪಿ.ಲಕ್ಷ್ಮೀಕಾಂತರಾಜೇ ಅರಸು, ಪ್ರೊ.ನಿತ್ಯಾನಂದ ಶೆಟ್ಟಿ, ಪ್ರೊ.ಗೀತಾ ವಸಂತ, ಪ್ರೊ.ಬಿ.ಕರಿಯಣ್ಣ, ಪ್ರಾಂಶುಪಾಲೆ ದಾಕ್ಷಾಯಣಿ ಇದ್ದರು.


