ಎಸ್ಐಆರ್ ಪ್ರಕ್ರಿಯೆಯಿಂದ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಈ ಕುರಿತು ಶಾಲಾ-ಕಾಲೇಜುಗಳು, ಗ್ರಾಮೀಣ ಭಾಗದಲ್ಲಿ ಜಾಗೃತಿ ಆಂದೋಲನ ನಡೆಸಲು ದುಂಡು ಮೇಜಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಜನಸ್ಪಂದನ ಟ್ರಸ್ಟ್, ಜನಪರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಎಸ್ಐಆರ್ ಕುರಿತ ದುಂಡು ಮೇಜಿನ ಸಭೆಯಲ್ಲಿ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು.
ಜನ ಜಾಗೃತಿ ಮೂಡಿಸುವ ಜತೆಗೆ ತರಬೇತಿ ಕಾರ್ಯಾಗಾರ ಆಯೋಜನೆ, ಕಾನೂನು ಸಲಹೆ ನೀಡುವುದು. ಸಾರ್ವಜನಿಕರಿಗೆ ಅಗತ್ಯ ಮಾರ್ಗದರ್ಶನ ಮಾಡುವುದು. ಕಾಲೇಜು ವಿದ್ಯಾರ್ಥಿಗಳಿಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
‘ಅರ್ಹ ಮತದಾರರನ್ನು ಮತದಾನ ಪಟ್ಟಿಯಿಂದ ತೆಗೆದು ಹಾಕಲಾಗುತ್ತಿದೆ. ಈ ಕುರಿತು ಜನರಲ್ಲಿ ಮೂಡಿರುವ ಪೂರ್ವಗ್ರಹ ದೂರ ಮಾಡಬೇಕು. ಕಾಲೇಜು ವಿದ್ಯಾರ್ಥಿಗಳಲ್ಲಿ ಮಾಹಿತಿ ಹಂಚಿಕೊಳ್ಳಬೇಕು’ ಎಂದು ಜನ ಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ. ಬಿ. ಶಶಿಧರ್ ಹೇಳಿದರು.
ತುಮಕೂರು ಜಿಲ್ಲೆಯ ಎಲ್ಲ ಭಾಗದಲ್ಲಿ ಜನ ಸ್ಪಂದನ ಟ್ರಸ್ಟ್ ಮೂಲಕ ಎಸ್ಐಆರ್ ಪ್ರಕ್ರಿಯೆ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಜನಪರ ಸಂಘಟನೆಗಳ ಸಹಯೋಗದಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಲಾಗುವುದು. ಅರ್ಹ ಮತದಾರರು ಮತದಾನ ಪ್ರಕ್ರಿಯೆಯಿಂದ ಹೊರಗಡೆ ಉಳಿಯದಂತೆ ನೋಡಿಕೊಳ್ಳಲಾಗುವುದು. ಮೊದಲ ಹಂತದಲ್ಲಿ ತಿಪಟೂರಿನಲ್ಲಿ ಜೂನ್ 19. ರಂದು ಜಾಗೃತಿ ಕಾರ್ಯಾಗಾರ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಲೇಖಕಿ ಬಾ.ಹ.ರಮಾಕುಮಾರಿ, ‘ಸಂವಿಧಾನ ನೀಡಿದ ಮತದಾನದ ಹಕ್ಕು ಎಲ್ಲರಿಗೂ ಸಿಗಬೇಕು. ಯಾರೊಬ್ಬರೂ ಹಕ್ಕಿನಿಂದ ವಂಚಿತರಾಗಬಾರದು. ಜನಾಧಿಕಾರ ಜನರ ಕೈಯಲ್ಲಿಯೇ ಉಳಿಯಬೇಕು. ಈ ನಿಟ್ಟಿನಲ್ಲಿ ಚುನಾವಣೆ ಆಯೋಗ ಕೈಗೊಂಡಿರುವ ಎಸ್ಐಆರ್ ಬಗ್ಗೆ ಎಲ್ಲೆಡೆ ವ್ಯಾಪಕ ಪ್ರಚಾರ ನಡೆಸಬೇಕು. ಸಾರ್ವಜನಿಕರಿಗೆ ಪೂರಕ ದಾಖಲೆ ಸಲ್ಲಿಸುವ ಕುರಿತು ಅರಿವು ಮೂಡಿಸಬೇಕು’ ಎಂದು ಸಲಹೆ ಮಾಡಿದರು.
ಚಿಂತಕ ಕೆ.ದೊರೈರಾಜ್, ಎಸ್ಐಆರ್ ಕುರಿತು ಸಾಮಾನ್ಯ ಜನರು ಎಚ್ಚೆತ್ತುಕೊಳ್ಳಬೇಕು. ಎಸ್ಐಆರ್ ಪ್ರಕ್ರಿಯೆಯ ಕಾನೂನು ಸರಳೀಕರಣ ಮಾಡಬೇಕು. ವಿದ್ಯಾರ್ಥಿ, ಯುವ ಸಮೂಹ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಪರಿಸರವಾದಿ ಸಿ. ಯತಿರಾಜು, ಕರ್ನಾಟಕ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ. ಎನ್. ಮಧುಕರ್, ಸಮಾಜ ಸೇವಕ ತಾಜುದ್ದೀನ್ ಷರೀಫ್, ಸಿಂಡಿಕೇಟ್ ಸದಸ್ಯ ಶಿವಣ್ಣ, ಸ್ಲಂ ಜನಾಂದೋಲನದ ಎ. ನರಸಿಂಹಮೂರ್ತಿ, ಎದ್ದೇಳು ಕರ್ನಾಟಕದ ಇಂದಿರಮ್ಮ, ರಾಮಕೃಷ್ಣಪ್ಪ, ರಾಹುಲ್, ಗಂಗಾಧರ್ ಬಾಣಸಂದ್ರ, ಅಮರ್ ಹೊಳೆಗದ್ದೆ, ಸೀಮಾ ಅಫೀಕಾ, ಪಾತಲಿಂಗಯ್ಯ, ಪಾರ್ವತಿ, ಡಿವೈಎಫ್ಐ ರಾಘವೇಂದ್ರ, ಜಾಗೃತ ಕರ್ನಾಟಕದ ಮಂಜುಳ, ಕಲ್ಯಾಣಿ ಹಾಜರಿದ್ದರು.


