Sunday, July 19, 2026
Google search engine
Homeಮುಖಪುಟಪುಸ್ತಕ ಪ್ರಕಟಣೆಗೆ ಹಣಕಾಸಿನ ನೆರವು ಸಿಗುತ್ತಿಲ್ಲ-ಪ್ರೊ.ರಾಜಪ್ಪ ದಳವಾಯಿ ಕಳವಳ

ಪುಸ್ತಕ ಪ್ರಕಟಣೆಗೆ ಹಣಕಾಸಿನ ನೆರವು ಸಿಗುತ್ತಿಲ್ಲ-ಪ್ರೊ.ರಾಜಪ್ಪ ದಳವಾಯಿ ಕಳವಳ

ಸರ್ಕಾರ ಪುಸ್ತಕಗಳ ಪ್ರಕಟಣೆಗೆ ಹಣಕಾಸಿನ ನೆರವು ಒದಗಿಸುತ್ತಿಲ್ಲ. ಬದಲಿಗೆ ಆ ಹಣವನ್ನು ಚರಂಡಿ, ಮಾರ್ಬಲ್ ಹಾಕುವುದಕ್ಕೆ ಬಳಸಿಕೊಳ್ಳಲಾಗುತ್ತಿದೆ. ಹಳೇ ಗ್ರಾನೈಟ್ ತೆಗೆದು ಹೊಸ ಗ್ರಾನೈಟ್ ಹಾಕುವುದಕ್ಕೆ ಖರ್ಚಾಗುತ್ತಿದೆ. ಆದ್ದರಿಂದ ಕನ್ನಡದಲ್ಲೇ ಒಂದು ಪುಸ್ತಕ ಪ್ರಿಂಟ್ ಹಾಕಿ ಒಂದು ಸಾವಿರ ಪ್ರತಿ ಹಾಕಿಸಿದರೆ ಅದನ್ನು ಕಾಂಪ್ಲಿಮೆಂಟ್ ಕಾಪಿಯಾಗಿಯೇ ಕೊಡುವಂತಹ ಪರಿಸ್ಥಿತಿ ಇದೆ ಎಂದು ಸಂಸ್ಕೃತಿ ಚಿಂತಕ ಪ್ರೊ.ರಾಜಪ್ಪ ದಳವಾಯಿ ಕಳವಳ ವ್ಯಕ್ತಪಡಿಸಿದರು.

ಅರುಣೋದಯ ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ, ಆಕೃತಿ ಪ್ರಕಾಶ ಹಾಗೂ ಜಲಜಂಬೂ ಲಿಂಕ್ಸ್ ಸಹಯೋಗದಲ್ಲಿ ತುಮಕೂರಿನ ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ರವಿಕುಮಾರ್ ನೀಹ ಅವರ ಕಾದಂಬರಿ ನೀಗೊನಿ ಮತ್ತು ಮೂರ್ತಿ ತಿಮ್ಮನಹಳ್ಳಿಯವರ ಕಥಾ ಸಂಕಲನ ಕರುಪ್ಡಿ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪುಸ್ತಕವನ್ನು ಕೊಂಡುಕೊಳ್ಳುವವರು ಯಾರೂ ಇಲ್ಲ. ಪುಸ್ತಕ ನೋಡೋರು ಜಾಸ್ತಿ ಇದ್ದಾರೆ. ಆದರೆ ಕೊಂಡುಕೊಳ್ಳುವವರು ಕಡಿಮೆ. ಯಾಕೆಂದರೆ ಕೊಂಡುಕೊಳ್ಳುವುದು ಒಂದು ಬಾಬ್ತಲ್ಲ. ಪುಸ್ತಕ ಕೊಂಡುಕೊಂಡರೆ ಮನೆಯಲ್ಲೂ ಬಯ್ಯುವ ಪರಿಸ್ಥಿತಿ ಇದೆ. ಪುಸ್ತಕ ಕೊಂಡುಕೊಳ್ಳುವುದು ವೇಸ್ಟ್ ಎನ್ನುವ ಸ್ಥಿತಿ ಇದೆ ಎಂದರು.

ಪುಸ್ತಕವನ್ನು ಕದ್ದೊಯ್ಯುವುದಿಲ್ಲ. ಹಾಗಾಗಿ ನೆಮ್ಮದಿಯಿಂದ ಮನೆಯಿಂದ ಹೊರಗೆ ಹೋಗಬಹುದು. ಪುಸ್ತಕಗಳ ಬಂಡಲ್‌ಗಳನ್ನು ಬಸ್ ನಿಲ್ದಾಣಗಳಲ್ಲಿ ಬಿಟ್ಟು ತಿಂಡಿ ತಿಂದು ಬರುವವರೆಗೆ ಆ ಪುಸ್ತಕದ ಬಂಡಲ್‌ಗಳನ್ನು ಯಾರೂ ಕದ್ದುಕೊಂಡು ಹೋಗುವವರಿಲ್ಲ. ಕದಿಯದೇ ಇರುವ ಒಂದು ವಸ್ತು ಅಂದರೆ ಪುಸ್ತಕ ಮಾತ್ರ ಎಂದು ತಿಳಿಸಿದರು.

ಮಲೆಯಾಳಂ ಭಾಷೆಯಲ್ಲಿ ಕೇರಳದಲ್ಲಿ ಲೇಖಕನ ಮೊದಲನೆಯ ಕೃತಿ ಬರೆದರೆ ಅಂತಹ ಕೃತಿಯ 10 ಸಾವಿರ ಪ್ರತಿಗಳನ್ನು ಮುದ್ರಣ ಹಾಕಿಸುತ್ತಾರೆ. ಅದು ಹೆಚ್ಚುಕಡಿಮೆ ಆರು ತಿಂಗಳು, ಒಂದು ವರ್ಷದಲ್ಲಿ ಮರು ಮುದ್ರಣ ಕಾಣುತ್ತದೆ. ಅಲ್ಲಿ ಪುಸ್ತಕಗಳ ಪೂರೈಕೆಗೆ ವ್ಯವಸ್ಥೆ ಇದೆ. ಹಳ್ಳಿಹಳ್ಳಿಗೂ ತಲುಪಿಸುವ ವ್ಯವಸ್ಥೆ ಇದೆ. ನಮ್ಮಲ್ಲಿ ಜಿಲ್ಲಾ ಕೇಂದ್ರಗಳಿಗೆ ತಲುಪಿಸುವುದೇ ಕಷ್ಟವಾಗಿದೆ ಎಂದು ಹೇಳಿದರು.

ನೀಗೊನಿ ಮತ್ತು ಕರುಪ್ಡಿ ಕೃತಿಗಳಲ್ಲಿ ಒಂದು ಪಾತ್ರವನ್ನು ನೋಡುವ ಆ ಪಾತ್ರದ ಕ್ಯಾರಿಕೇಚರ್ ಚಿತ್ರಿಸುವ ಒಂದು ಕಿಲಾಡಿತನವೂ ರೈಟರ್‌ಗೆ ಇರಬೇಕು. ಆ ಎರಡು ಅಂಶಗಳು ರವಿಕುಮಾರ್ ನೀಹ ಮತ್ತು ಮೂರ್ತಿ ತಿಮ್ಮನಹಳ್ಳಿ ಅವರಲ್ಲಿದೆ ಎಂದರು.

ನಮ್ಮಲ್ಲಿ ಕಥೆಗಾರರಾಗಿರುವುದಕ್ಕಿಂತ ಸೋತ ಕಥೆಗಾರರೇ ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಕಥೆಗಾರರಾಗಬೇಕು ಎಂಬ ಹಂಬಲದಿಂದ ಬರೆದವರು ಇದ್ದಾರೆ. ಅವರು ತುಂಬ ಒಳ್ಳೆಯ ಕಥೆಗಳೇ ಬರೆದಿದ್ದಾರೆ. ಕಥೆಗಾರ, ಕಾದಂಬರಿಕಾರ ಪಾತ್ರಗಳನ್ನು ಚನ್ನಾಗಿ ಚಿತ್ರಿಸಲು ಅವಕಾಶವಿದೆ. ಆ ಪಾತ್ರಗಳಿಗೆ ಹೊಸ ಜೀವವನ್ನು ಕೊಡುವ, ಘಟನಾವಳಿಗಳನ್ನು ಚಿತ್ರಿಸಲು ಅವಕಾಶ ಇರುತ್ತದೆ. ನಮ್ಮ ಊರು, ಹಳ್ಳಿಯಲ್ಲಿ ಪ್ರತಿಯೊಬ್ಬರೂ ಕತೆಗಾರರೇ ಇದ್ದಾರೆ. ಯಾವುದೇ ಪ್ರಸಂಗವನ್ನು ಹೇಳುವುದಾದರೂ ಅದನ್ನು ಕತೆಯ ರೂಪದಲ್ಲೇ ಹೇಳುತ್ತಾರೆ ಎಂದು ತಿಳಿಸಿದರು.

ಮತಾಂತರದ ಸಮಸ್ಯೆ ಭೀಕರವಾದುದು. ಕಲೋನಿಯಲ್ ಕಾಲದ ಮತಾಂತರದ ಪ್ರಕ್ರಿಯೆಯನ್ನು ನಾವು ಸರಿಯಾಗಿ ಗ್ರಹಿಸದೇ ಹೋದರೆ ಬಹಳ ಅನಾಹುತಕ್ಕೆ ಈಡಾಗುತ್ತೇವೆ. ಈಗಿರುವ ಕ್ರಿಶ್ಛಿಯನ್ನರೆಲ್ಲರೂ ಮತಾಂತರ ಮಾಡಲಿಕ್ಕಾಗಿಯೇ ಇರುವವರು ಎಂಬ ಅಪಾಯಕಾರಿ ಪರಿಸ್ಥಿತಿ ಇದೆ. ಒಬ್ಬ ಪಾದ್ರಿ ಅವನ ಪಾಡಿಗೆ ಅವನು ಉಪದೇಶ ಮಾಡಲು ಸಾಧ್ಯವಿಲ್ಲ, ಆ ಕಾರಣಕ್ಕಾಗಿಯೇ ಕರಾವಳಿಯಲ್ಲಿ ಆ ಚರ್ಚ್ಗಳನ್ನು ಧ್ವಂಸಗೊಳಿಸಿದ ಕಥನಗಳು ಕೂಡ ನಮ್ಮ ನಡುವೆ ಇವೆ ಎಂದರು.

ನೀಗೊನಿಯಲ್ಲಿ ಆರಂಭದಿಂದಲೂ ಕೊನೆಯವರೆಗೆ ಯಾವ ವ್ಯಕ್ತಿಯೂ ಎಲ್ಲಿಯೂ ಸುಮ್ಮನೆ ನಿಲ್ಲುವುದಿಲ್ಲ. ನಿರಂತರ ಚಲನಶೀಲವಾದಂತಹ ಸಮಾಜವನ್ನು ಕಾಣಬಹುದು. ಸಮಾಜ ಯಾವತ್ತೂ ನಿಂತ ನೀರಾಗಿರುವುದಿಲ್ಲ. ಚಲನಶೀಲವಾಗಿರುತ್ತದೆ. ನಮ್ಮ ನಡುವೆ ದಿಕ್ಕು ತಪ್ಪಿಸುವ ಜನರೇ ಹೆಚ್ಚಾಗಿದ್ದಾರೆ. ನಿಜವಾದ ಶತ್ರುಗಳು ಯಾರು ಗೊತ್ತೆ? ನಮಗೆ ನಾವೇ ಶತ್ರುಗಳು. ನಮಗಿಂತ ಶತ್ರುಗಳು ಯಾರೂ ಇಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಾಜ ವಿಜ್ಞಾನಿ ಡಾ.ಸಿ.ಜಿ. ಲಕ್ಷ್ಮೀಪತಿ, ಕಾದಂಬರಿಕಾರ ಮೋದೂರು ತೇಜ, ಕಥೆಗಾರ ಡಾ.ಗೋವಿಂದರಾಜು ಎಂ ಕಲ್ಲೂರು ಕೃತಿಯ ಕುರಿತು ಮಾತನಾಡಿದರು. ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷೆ ಡಾ.ಆಶಾರಾಣಿ ಬಗ್ಗನಡು, ನೀಗೊನಿ ಕೃತಿಯ ಕರ್ತೃ ಡಾ.ರವಿಕುಮಾರ್ ನೀಹ, ಕರುಪ್ಡಿ ಕೃತಿಯ ಕರ್ತೃ ಮೂರ್ತಿ ತಿಮ್ಮನಹಳ್ಳಿ, ಪ್ರಕಾಶಕ ಗುರುಪ್ರಸಾದ್ ಹೆಜ್ಜಾಜಿ ಇದ್ದರು. ಡಾ.ಹನುಮಂತರಾಯಪ್ಪ ಪಾಲಸಂದ್ರ ಸ್ವಾಗತಿಸಿದರು. ರಾಘವೇಂದ್ರ ನಿರೂಪಿಸಿದರು. ಡಾ.ಮುಕುಂದ್ ಎಲ್ ಪ್ರಾಸ್ತಾವಿಕ ಮಾತನಾಡಿದರು.ಹಂಪಿ ವಿವಿ ಸಿಂಡಿಕೇಟ್ ಸದಸ್ಯ ಮೋಹನ್ ಕುಮಾರ್ ಹಾಡು ಹಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular