ದೇಶದಲ್ಲಿ 1,500ಕ್ಕೂ ಹೆಚ್ಚು ಕಾನೂನು ಕಾಲೇಜುಗಳಿದ್ದು, ಪ್ರತಿವರ್ಷ ಸಾವಿರಾರು ಕಾನೂನು ಪದವೀಧರರು ಹೊರಬರುತ್ತಿದ್ದಾರೆ. ಆದರೂ ನ್ಯಾಯಾಲಯಗಳಲ್ಲಿ ಲಕ್ಷಾಂತರ ಪ್ರಕರಣಗಳು ಬಾಕಿ ಉಳಿದಿರುವುದು ಕಳವಳಕಾರಿ. ಪ್ರಕರಣಗಳ ತ್ವರಿತ ವಿಲೇವಾರಿಗೆ ನ್ಯಾಯಾಂಗದಲ್ಲಿ ಇನ್ನಷ್ಟು ಸುಧಾರಣೆ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ತುಮಕೂರಿನ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ ಸುಫಿಯಾ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾನೂನು ಕ್ಷೇತ್ರದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದ್ದು, ಭಾರತೀಯ ಕಾನೂನು ತಜ್ಞರು ಜಾಗತಿಕ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ದೇಶದಲ್ಲಿ ಸೈಬರ್ ಅಪರಾಧ ದೊಡ್ಡ ಸವಾಲಾಗಿದ್ದು, ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕಾನೂನುಗಳನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಎಂದು ಹೇಳಿದರು.
ಸಂವಿಧಾನದ ಪೂರ್ವಪೀಠಿಕೆಯಲ್ಲಿ ಸಮಾನತೆಗೆ ಮಹತ್ವ ನೀಡಲಾಗಿದ್ದರೂ, ಕಾನೂನು ಮತ್ತು ಸಮಾಜದ ದೃಷ್ಟಿಯಲ್ಲಿ ಅದು ಎಷ್ಟರ ಮಟ್ಟಿಗೆ ಜಾರಿಯಾಗಿದೆ ಎಂಬ ಬಗ್ಗೆ ಗಂಭೀರ ವಿಶ್ಲೇಷಣೆ ಅಗತ್ಯವಿದೆ. ಸ್ವಾತಂತ್ರ್ಯದ ಸಮಯದಲ್ಲಿ ದೇಶದ ಸಾಕ್ಷರತೆ ಪ್ರಮಾಣ ಕೇವಲ 12 ಶೇಕಡ ಇದ್ದರೆ, ಈಗ ಅದು ಸುಮಾರು ಶೇ. 80ಕ್ಕೆ ಏರಿಕೆಯಾಗಿದೆ. ಕಾನೂನು ಪದವಿ ಪಡೆದವರು ಕೇವಲ ವೃತ್ತಿ ದೃಷ್ಟಿಯಿಂದಲ್ಲ, ಕಾನೂನಿನ ರಕ್ಷಣೆ ಮತ್ತು ನ್ಯಾಯ ಸೇವೆಯ ಹೊಣೆಗಾರಿಕೆಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗಳಲ್ಲಿ ಕೆಲವೇ ನ್ಯಾಯವಾದಿಗಳನ್ನು ಹೆಚ್ಚು ಮಂದಿ ಆಯ್ಕೆ ಮಾಡಿಕೊಳ್ಳುತ್ತಾರೆ. ಕಾನೂನಿನ ಆಳವಾದ ಜ್ಞಾನ ಮತ್ತು ಸಮರ್ಥ ವಾದ ಮಂಡನೆಯಿಂದ ಅವರು ವಿಶ್ವಾಸ ಗಳಿಸಿದ್ದಾರೆ. ಹೊಸ ತಲೆಮಾರಿನ ವಕೀಲರೂ ಅದೇ ಮಟ್ಟದ ಪರಿಣತಿ ಸಾಧಿಸಬೇಕು. ಭಾರತಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಬಲಿಷ್ಠ ಸಂವಿಧಾನವನ್ನು ನೀಡಿದ್ದು, ದೇಶದ ಪ್ರಜಾಪ್ರಭುತ್ವದ ಉಳಿವಿಗೆ ಸಂವಿಧಾನವೇ ಮೂಲ ಅಡಿಪಾಯವಾಗಿದೆ. ಸಂವಿಧಾನ ದುರ್ಬಲಗೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಯೂ ದುರ್ಬಲವಾಗುತ್ತದೆ. ಆದ್ದರಿಂದ ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಹಾಗೂ ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ನಾನು ಕೂಡು ರಾಜಕಾರಣಿಯಾಗುವ ಮೊದಲು ವಕೀಲರಾಗಿ 1984ರಿಂದ 94ವರೆಗೆ ಕ್ರಿಮಿನಲ್ ಲಾಯರ್ ಆಗಿ ಪ್ರಾಕ್ಟಿಸ್ ಮಾಡಿದ್ದೆ, ಕಾನೂನಿನ ಸರಳ ವ್ಯಾಖ್ಯಾನವೆಂದರೆ, ಸಾಮಾಜಿಕ ಜ್ಞಾನ. ಇಂದು ಕಾನೂನು ಪದವಿ ಪಡೆದಿರುವ ನಿಮ್ಮ ಮುಂದೆ ಗುರುತರ ಜವಾಬ್ದಾರಿಗಳಿವೆ. ಅಸಹಾಯಕರು, ಧ್ವನಿಯಿಲ್ಲದವರ ಪರ ಕೆಲಸ ಮಾಡಿದರೆ ನಿಮ್ಮ ಪದವಿಗೆ ಗೌರವ ಸಿಗುತ್ತದೆ ಎಂದರು.
ಇಂದು ಕ್ರಿಮಿನಲ್ ಕೇಸುಗಳಲ್ಲಿ ಅಪರಾಧಿಗಳಾಗುತ್ತಿರುವವ ಸಂಖ್ಯೆಯಲ್ಲಿ ಹೆಚ್ಚಿನವರು ಬಡವರೇ ಆಗಿರುತ್ತಾರೆ. ಈ ಲೋಪದೋಷಕ್ಕೆ ಕಾರಣ ಏನು ಎಂಬುದು ನಿಜಕ್ಕೂ ದುಃಖದ ವಿಷಯ. ಎಲ್ಲಾ ಕ್ಷೇತ್ರಗಳಂತೆ ನ್ಯಾಯಾಂಗ ಕ್ಷೇತ್ರವೂ ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವ ಮಾತುಗಳು ಇತ್ತೀಚಗೆ ಹೆಚ್ಚಾಗಿವೆ. ಹಾಗಾಗಿ ಜನರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ವಕೀಲರು ಪ್ರಾಮಾಣಿಕರಾಗಿ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ವಿಜ್ಞಾನಿ ಡಾ.ಪ್ರಶಾಂತ ಕಾಳಪ್ಪ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್.ಎಂ.ಎಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಎಸ್.ಷಪಿ ಅಹಮದ್ ಮಾತನಾಡಿದರು. ಸಂಸ್ಥೆ ಉಪಾಧ್ಯಕ್ಷ ಅಫ್ತಾಬ್ ಅಹಮದ್, ಸಿಇಓ ಮಹಮದ್ ಜುನೈದ್, ಸೂಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ರಮೇಶ್.ಎಸ್, ಕಾನೂನು ವಿವಿಯ ಸಿಂಡಿಕೇಟ್ ಸದಸ್ಯ ರಾಜಣ್ಣ, ಹೆಚ್.ಎಂ.ಎಸ್. ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅದೀಬ್ ಅಹಮದ್, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ, ಜಿಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಗೌಡ ಇದ್ದರು.


