ರಾಜಕಾರಣದಷ್ಟೇ ಇಂದು ದೇಶದ ಶಿಕ್ಷಣ ವ್ಯವಸ್ಥೆಯೂ ಕಲುಷಿತಗೊಳ್ಳುತ್ತಿದ್ದು, ಗುಣಾತ್ಮಕ ಶಿಕ್ಷಣ ನೀಡುವುದು ಪ್ರಸ್ತುತ ದಿನಗಳಲ್ಲಿ ದೊಡ್ಡ ಸವಾಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ವೈ. ಎ. ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದರು.
ತುಮಕೂರಿನ ಸೆಂಟ್ರಲ್ ಲೈಬ್ರರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಗೆಳೆಯರ ಗೆಳೆಯ ಕೆಸಿಬಿ’ ಕೃತಿ ಲೋಕಾರ್ಪಣೆ ಹಾಗೂ ಡಾ. ಕೆ.ಸಿ. ಬಸವರಾಜ್ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರಗಳು ಬದಲಾದಂತೆ ಶೈಕ್ಷಣಿಕ ನೀತಿಗಳೂ ಬದಲಾಗುತ್ತಿವೆ. ಇಂದು ಶಿಕ್ಷಕರನ್ನು ಗುಣಮಟ್ಟದ ಪಾಠ-ಪ್ರವಚನಗಳಿಗೆ ಬಳಸಿಕೊಳ್ಳುವ ಬದಲು ಕೇವಲ ‘ಬಯೋಮೆಟ್ರಿಕ್’ ಗಡುವುಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಶಿಕ್ಷಣದಲ್ಲಿ ಗುಣಮಟ್ಟ ಕುಸಿಯುತ್ತಿದ್ದು, ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ಈ ವ್ಯವಸ್ಥೆಯ ವಿರುದ್ಧ ಪ್ರಜ್ಞಾವಂತರು ಧ್ವನಿ ಎತ್ತಬೇಕಿದೆ ಎಂದರು.
ಶೋಷಿತ ಹಾಗೂ ದಮನಿತ ಸಮುದಾಯದಿಂದ ಬಂದು, ಎಲ್ಲಾ ಸವಾಲುಗಳನ್ನು ಎದುರಿಸಿ ಉನ್ನತ ಹುದ್ದೆಗೆ ಏರಿದ ಕೆಸಿಬಿ ಅವರ ಸಾಧನೆ ಸಾಮಾನ್ಯವಾದದ್ದಲ್ಲ. ಸರ್ಕಾರಿ ಸೇವೆಯಿಂದ ನಿವೃತ್ತರಾದ ಮಾತ್ರಕ್ಕೆ ಮನೆಯಲ್ಲಿ ಕೂರದೆ, ಕೆಸಿಬಿ ಅವರು ತಮ್ಮಲ್ಲರುವ ಜ್ಞಾನ, ವಿದ್ವತ್ತು ಹಾಗೂ ಅನುಭವವನ್ನು ಸಮಾಜದ ಏಳಿಗೆಗಾಗಿ ಹಾಗೂ ಯುವಜನರ ಹಿತಕ್ಕಾಗಿ ಧಾರೆ ಎರೆಯಬೇಕು. ಅಧಿಕಾರದ ಹಿಂದೆ ಹೋಗದೆ ಸಮಾಜಮುಖಿ ಚಿಂತನೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿರಿಯ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಶಿಕ್ಷಣ ಕ್ಷೇತ್ರವು ದಿನೇ ದಿನೇ ವ್ಯಾಪಾರೀಕರಣಗೊಳ್ಳುತ್ತಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಬಿಕ್ಕಟ್ಟಿನ ಬಗ್ಗೆ ಶಿಕ್ಷಕರು ಸೇರಿದಂತೆ ಇಡೀ ಸಮಾಜ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಒಬ್ಬ ಶಿಕ್ಷಕ ನಿರಂತರ ಅಧ್ಯಯನಶೀಲನಾಗಿ, ನಿತ್ಯ ವಿದ್ಯಾರ್ಥಿಯಂತೆ ಕಲಿಯುತ್ತಿದ್ದಾಗ ಮಾತ್ರ ಆತನಿಗೆ ಬೋಧಿಸುವ ನಿಜವಾದ ಅರ್ಹತೆ ದೊರೆಯುತ್ತದೆ. ಕೋಪದ ಹಿಂದಿದ್ದ ಅಂತಃಕರಣ:ಕೆ.ಸಿ. ಬಸವರಾಜು ಅವರ ವ್ಯಕ್ತಿತ್ವವನ್ನು ಸ್ಮರಿಸಿದ ಅವರು, “ಬಸವರಾಜು ಅವರು ಹೊರನೋಟಕ್ಕೆ ಶೀಘ್ರ ಕೋಪಿಯಂತೆ ಕಂಡರೂ, ಅವರ ಕೋಪದಲ್ಲಿ ಯಾವುದೇ ದ್ವೇಷವಿರಲಿಲ್ಲ. ಅವರ ಬಳಿ ತಾಯಿಯಂತಹ ಅಂತಃಕರಣ ಹಾಗೂ ನೈತಿಕ ನಡೆ-ನುಡಿ ಇದ್ದುದರಿಂದ ಅವರ ಕೋಪ ಕ್ಷಣಿಕವಾಗಿರುತ್ತಿತ್ತು ಎಂದು ಹೇಳಿದರು.
ನಿವೃತ್ತಿಯಾದ ನಂತರ ಸಮಾಜಮುಖಿ ಚಟುವಟಿಕೆಗಳಿಂದ ದೂರವಾಗಿ ಮನೆಗಷ್ಟೇ ಸೀಮಿತವಾಗಬಾರದು. ಗೋರು ಚನ್ನಬಸಪ್ಪ ಅವರಂತಹ ಹಿರಿಯರಂತೆ ಸದಾ ಕ್ರಿಯಾಶೀಲರಾಗಿ ಸಮಾಜದೊಂದಿಗೆ ತೊಡಗಿಸಿಕೊಂಡಾಗ ಮಾತ್ರ ನಿರಂತರ ಯೌವನ ಮತ್ತು ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ನೃಪತುಂಗ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ. ಟಿ.ಎಂ. ಮಂಜುನಾಥ್, ಬೆಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಡಾ. ಕೆ. ರಾಮಕೃಷ್ಣರೆಡ್ಡಿ ಮಾತನಾಡಿದರು. ಹೆಚ್.ಜಿ. ನಾರಾಯಣ್, ವೈ. ರಮೇಶ್, ಶ್ರೀನಾಥ್ರಾಜ್, ಜಿ. ತಿಪ್ಪೇಸ್ವಾಮಿ, ಡಾ. ಎಂ.ಜೆ. ಶಿವಣ್ಣ, ಮಲ್ಲಿಕಾರ್ಜುನಯ್ಯ, ಟಿ. ಗಂಗಾಧರಯ್ಯ, ಎಂ.ಜಿ .ರಾಮಣ್ಣ, ವಸಂತ ಟಿ.ಡಿ. ಎಂ.ಎಸ್. ನಾಗರಾಜು, ಪಿ.ಟಿ. ಶ್ರೀನಿವಾಸ ನಾಯಕ, ಮುನೀಂದ್ರ ಕುಮಾರ್ ಡಿ.ಎಸ್. ಡಾ. ಶ್ರೀನಿವಾಸ್ ರೆಡ್ಡಿ, ಕೆ. ರಾಮಕೃಷ್ಣ ರೆಡ್ಡಿ, ಡಾ. ಟಿ.ಎಂ. ಮಂಜುನಾಥ, ಡಿ. ಶಿವನಂಜಯ್ಯ, ಡಾ. ಕೆ. ರಾಮಕೃಷ್ಣ ರೆಡ್ಡಿ, ಡಾ. ಟಿ.ಎಂ. ಮಂಜುನಾಥ, ಡಾ. ಡಿ. ಶಿವನಂಜಯ್ಯ, ಜಿ. ಶ್ರೀನಾಥರಾಜ್, ಟಿ.ಡಿ. ವಸಂತ, ಡಾ. ಓ. ನಾಗರಾಜು, ಗೋವಿಂದರಾಯ, ವಿ.ಎನ್. ಮುರುಳೀಧರ್ ಇದ್ದರು.


