ಎಐ ಹೆಸರಿನಲ್ಲಿ ಇಡೀ ಯುವಜನರ ಬದುಕಿಗೆ ಕೊಳ್ಳಿ ಇಡಲು ಹೊರಟಿರುವ ಎಐ ಡಾಟಾ ಸೆಂಟರ್ ನಿರ್ಮಾಣ ವಿರೋಧಿಸಿ, ಅದರಿಂದ ಸಾರ್ವಜನಿಕರ ಮೇಲಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಗಾಂಧಿ ಸಹಜ ಬೇಸಾಯ ಆಶ್ರಮದ ನೇತೃತ್ವದಲ್ಲಿ ವಿವಿಧ ರೈತ ಪರ ಸಂಘಟನೆಗಳು ಸೇರಿ ಆಗಸ್ಟ್ 6, 7 ಮತ್ತು 8 ರಂದು ಮೂರು ದಿನಗಳ ಕಾಲ ತುಮಕೂರು ಜಿಲ್ಲೆಯ ದೊಡ್ಡ ಹೊಸೂರಿನಲ್ಲಿ ಸತ್ಯಾಗ್ರಹ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಬಿಡದಿ ಬಳಿ ಸುಮಾರು 9470 ಎಕರೆ ಜಾಗದದಲ್ಲಿ ಬಿಡದಿ ಟೌನ್ಶಿಫ್ ಯೋಜನೆ ಜಾರಿಗೆ ತರುತ್ತಿದ್ದು, ಇದರಲ್ಲಿ ಆಟೋಮೇಷನ್ ರೋಬೋಟ್ ಡಾಟಾ ಸೆಂಟರ್ ತರುವ ಉದ್ದೇಶ ಹೊಂದಿದೆ. ಈ ಸೆಂಟರ್ಗೆ ಹೇಮಾವತಿ ನಾಲಾವಲಯದ 70 ಕಿ.ಮಿ. ಎಕ್ಸ್ ಪ್ರೆಸ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೊಗಲು ಮುಂದಾಗಿದೆ. ಇದರಿಂದ ತುಮಕೂರು ಜಿಲ್ಲೆಯ ನೀರಾವರಿ ಯೋಜನೆಗಳ ಮೇಲೆ ದುಷ್ಪರಿಣಾಮ ಉಂಟು ಮಾಡಲಿದೆ. ಹಾಗಾಗಿ ಇದರ ಬಗ್ಗೆ ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆ ಭೂಮಿ, ಕುಡಿಯುವ ನೀರು ಇಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಲಿದೆ. ಹಾಗಾಗಿ ನಾವು ಈ ಎಐ ಡಾಟಾ ಸೆಂಟರ್ ವಿರೋಧಿಸಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈ ಕುರಿತು ಸರಕಾರಕ್ಕೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ದೊಡ್ಡ ಹೊಸೂರು ಸಮೀಪದ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆ ಮೂಲಕ ಆಗಮಿಸಿ, ಜಿಲ್ಲಾಧಿಕಾರಿಗಳಿಗೆ ಎಐ ಡಾಟಾ ಸಂಟರ್ನ ಸಾಧಕ, ಭಾದಕಗಳ ಕುರಿತು ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.
ಕೃಷಿ ವಿಜ್ಞಾನಿ ಹಾಗೂ ಗಾಂಧಿ ಸಹಜ ಬೇಸಾಯ ಆಶ್ರಮದ ಮುಖ್ಯಸ್ಥ ಡಾ.ಮಂಜುನಾಥ್ ಮಾತನಾಡಿ, ಎಐಯನ್ನು ಇಂದು ನಾವೆಲ್ಲರೂ ಬಹಳ ಉತ್ಸುಕತೆಯಿಂದ ಅಪ್ಪಿಕೊಳ್ಳುತಿದ್ದೇವೆ. ಆಟೋಮೆಷನ್ ರೋಬೋಟ್ಗಳ ದಸೆಯಿಂದ ಯುವಜನತೆ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಈಗಾಗಲೇ ಟೆಕ್ಸ್ ಟೈಲ್ ಕಂಪನಿಯಲ್ಲಿ ಈ ಪ್ರಯೋಗ ನಡೆಯುತ್ತಿದೆ. ಅದು ಜಾರಿಗೆ ಬಂದರೆ ಲಕ್ಷಾಂತರ ಹೆಣ್ಣು ಮಕ್ಕಳು ಉದ್ಯೋಗವಿಲ್ಲದೆ ಬೀದಿಗೆ ಬರಲಿದ್ದಾರೆ. ಉದ್ಯೋಗವಿಲ್ಲವೆಂದ ಮೇಲೆ ಹಣವಿಲ್ಲ. ಹಣವಿಲ್ಲದೆ ಕೊಳ್ಳುವ ಶಕ್ತಿಯಿಲ್ಲದೆ, ಮಾರುಕಟ್ಟೆಯ ಮೇಲೆ ಒಡೆತ ನೀಡಲಿದೆ. ಇದರಿಂದ ದೇಶದ ಜಿಡಿಪಿಗೆ ಬಹಳ ಹಾನಿಯಾಗಲಿದೆ. ಇದರ ಬಗ್ಗೆ ಯಾರೊಬ್ಬರು ಯೋಚಿಸುತ್ತಿಲ್ಲ ಎಂದು ಹೇಳಿದರು.
ಎಐ ಡಾಟಾ ಸೆಂಟರ್ನಿಂದಾಗುವ ತೊಂದರೆಗಳ ಕುರಿತು ಅಮೇರಿಕಾದ ಸಂಶೋಧಕ ರೇಮೋಲ್, ದೇವಜೈನ್ ಹಾಗೂ ಶಾಸಕ ದರ್ಶನ ಪುಟ್ಟಣ್ಣಯ್ಯ ವಿಚಾರ ಮಂಡಿಸಿ ಮಾತನಾಡಲಿದ್ದಾರೆ. ಪರಿಸರ ವಾದಿ ಸುರೇಶ್ ಹೆಬ್ಳಿಕರ್, ಬಡಗಲಪುರ ನಾಗೇಂದ್ರಪ್ಪ, ಮಹಿಮಾ ಜೆ ಪಟೇಲ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಂಯುಕ್ತ ಹೋರಾಟದ ಸಿ.ಯತಿರಾಜು ಮಾತನಾಡಿದರು. ರೈತ ಸಂಘದ ಮುಖಂಡರಾದ ಜಿ.ಎಸ್ ಶಂಕರಪ್ಪ, ನಾಗರತ್ನಮ್ಮ, ಚಿಕ್ಕಬೋರೇಗೌಡ, ವೆಂಕಟಪ್ಪಗೌಡ, ಚಿಕ್ಕಬೋರೇಗೌಡ, ಕೆಂಚಪ್ಪ, ಲಕ್ಷ್ಮಣಗೌಡ, ಅರೇಹಳ್ಳಿ ಮಂಜುನಾಥ್, ಮೋಹನ್. ರಂಗಮುದ್ದಯ್ಯ, ಜಿ.ಜೆ.ಲೋಕೇಶ್, ಲಿಂಗರಾಜು ಇದ್ದರು.


