Saturday, August 1, 2026
Google search engine
Homeಮುಖಪುಟತಮಿಳುನಾಡಿಗೆ ನೀರು-ಆದೇಶ ಧಿಕ್ಕರಿಸಲು ಸರ್ಕಾರಕ್ಕೆ ಕನ್ನಡ ಸಂಘಟನೆಗಳ ಒತ್ತಾಯ

ತಮಿಳುನಾಡಿಗೆ ನೀರು-ಆದೇಶ ಧಿಕ್ಕರಿಸಲು ಸರ್ಕಾರಕ್ಕೆ ಕನ್ನಡ ಸಂಘಟನೆಗಳ ಒತ್ತಾಯ

ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ಸ್ ನೀರು ಬಿಡಬೇಕೆಂದು ಕಾವೇರಿ ನೀರು ನಿಯಂತ್ರಣಾ ಸಮಿತಿ ಮಾಡಿರುವ ಶಿಫಾರಸ್ಸಿಗೆ ಕನ್ನಡಪರ ಸಂಘಟನೆಗಳ ಒಕ್ಕೂಟ ವೀವ್ರ ವಿರೋಧ ವ್ಯಕ್ತಪಡಿಸಿದೆ. ನಮ್ಮ ನೀರನ್ನು ಉಳಿಸಿಕೊಳ್ಳಲು, ಕಾವೇರಿ ಸಮಿತಿ ಶಿಫಾರಸು ವಿರೋಧಿಸಿ ರಾಜ್ಯ ಸಂಘಟನೆಗಳು ರೂಪಿಸುವ ಹೋರಾಟವನ್ನು ಬೆಂಬಲಿಸಿ ಹೋರಾಟ ನಡೆಸಲು ಒಕ್ಕೂಟದ ಮುಖಂಡರು ತೀರ್ಮಾನಿಸಿದ್ದಾರೆ.

ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರು ಸಭೆ ಸೇರಿ ಕಾವೇರಿ ನೀರು ಹೋರಾಟ ಕುರಿತು ಚರ್ಚಿಸಿದರು. ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾ ಕುಮಾರ್ ಮಾತನಾಡಿ, ಮಳೆ ಬೀಳದೆ ನಮ್ಮಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಜಲಾಶಯಗಳು ಬತ್ತಿ ಹೋಗಿವೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ಪ್ರತಿದಿನ 3500 ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣಾ ಸಮಿತಿ ಮಾಡಿರುವ ಶಿಫಾರಸು ಅಮಾನವೀಯ ಎಂದರು.

ಸರ್ಕಾರ ಸಮಿತಿಯ ಶಿಫಾರಸ್ಸನ್ನು ತಿರಸ್ಕರಿಸಿ ನಾಡಿನ ಜನರ ರಕ್ಷಣೆಗೆ ಬದ್ಧತೆ ತೋರಬೇಕು. ಕಾವೇರಿ ನೀರಿನ ವಿಚಾರದಲ್ಲಿ ಪ್ರತಿ ಬಾರಿಯೂ ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯದ ಬರ ಪರಿಸ್ಥಿತಿಯ ವಸ್ತುಸ್ಥಿತಿಯನ್ನು ಸಮರ್ಥವಾಗಿ ಮಂಡನೆ ಮಾಡುವಲ್ಲಿ ಪದೇಪದೆ ವಿಫಲವಾಗುತ್ತಿರುವುದು ದುರಾದೃಷ್ಟಕರ ಎಂದು ಖಂಡಿಸಿದರು.

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಅಭಿನಯದ ಸಿನಿಮಾ ಪ್ರದರ್ಶನವನ್ನು ರಾಜ್ಯದಲ್ಲಿ ನಿಷೇಧಿಸಬೇಕು. ತುಮಕೂರಿನ ಐನಾಕ್ಸ್ ನಲ್ಲಿ ಪ್ರದರ್ಶನ ರದ್ದು ಮಾಡಬೇಕು. ಇಲ್ಲವಾದರೆ ಕನ್ನಡಪರ ಸಂಘಟನೆಯವರು ಥಿಯೇಟರ್‌ಗೆ ನುಗ್ಗಿ ಬಲವಂತವಾಗಿ ಬಂದ್ ಮಾಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ, ಕಾವೇರಿ ನೀರು ನಿಯಂತ್ರಣ ಮಂಡಳಿಯ ಆದೇಶ ರಾಜ್ಯದ ಜನರಿಗೆ ಬರೆ ಎಳೆದಂತಾಗಿದೆ. ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯೂ ತಿರಸ್ಕೃತಗೊಂಡಿದೆ. ಈಗ ಸರ್ಕಾರ ಸುಪ್ರೀಂಕೋರ್ಟ್ ಮೊರೆಹೋಗಲು ತೀರ್ಮಾನಿಸಿದೆ, ಸರ್ವಪಕ್ಷಗಳ ಸಭೆ ನಡೆಸಿ ಮುಂದಿನ ತೀರ್ಮಾನ ಮಾಡಲಿದೆ. ರಾಜ್ಯದ ಜನರ ಹಿತ ಪರಿಗಣಿಸಿ ತೀರ್ಮಾನ ಮಾಡಬೇಕು ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್. ರಾಮಯ್ಯ ಮಾತನಾಡಿ, ನಮ್ಮ ಪಾಲಿನ ನೀರನ್ನು ಉಳಿಸಿಕೊಳ್ಳಲು ರಾಜಕೀಯ ನಾಯಕರು ಪ್ರಯತ್ನ ಮಾಡಬೇಕು. ರಾಜ್ಯದ ಎಲ್ಲಾ ಲೋಕಸಭಾ ಸದಸ್ಯರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕು. ರಾಜ್ಯದ ಪರಿಸ್ಥಿತಿಯನ್ನು ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಿಕೊಡಿಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಸೋಮಶೇಖರ್, ಅರುಣ್ ಕೃಷ್ಣಯ್ಯ, ಬೇವಿನಮರದ ಸಿದ್ದಪ್ಪ, ರೈತ ಸಂಘದ ಬಸವರಾಜು, ಅರುಣ್‌ ಕುಮಾರ್, ಇಂದ್ರಕುಮಾರ್, ಯಲ್ಲೇಶ್‌ಗೌಡ, ಪ್ರಸನ್ನ ಕುಮಾರ್, ಮೀಸೆ ಸತೀಶ್, ಗಿರೀಶ್, ಲೋಕೇಶ್, ಭೀಮಾನಾಯ್ಕ್, ಉಮೇಶ್‌ ಕುಮಾರ್, ನಟರಾಜ್, ಬಸವರಾಜು, ಸಂತೋಷ್, ವಿಠಲ್‌ ಜೈನ್, ಜಿಮ್ ನಟರಾಜ್, ವರದರಾಜು, ಸಂತೋಷ್, ಸತೀಶ್, ಇಮ್ರಾನ್ ಅಹ್ಮದ್, ಯತೀಶ್ ದಿಬ್ಬೂರು, ಶ್ರೀನಿವಾಸ್, ಕಿರಣ್, ರಾಮಲಿಂಗರೆಡ್ಡಿ, ಸುಧೀರ್ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular