ತುಮಕೂರು ಜಿಲ್ಲೆಯ ಕುಣಿಗಲ್ ಮೂಲಕ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ಮತ್ತು ರಾಮನಗರಕ್ಕೆ ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಮೂಲಕ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಕಾಮಗಾರಿಗೆ ನಮ್ಮ ವಿರೋಧವಿದ್ದು, ಇರುವ ನಾಲೆಯಲ್ಲಿ ನೀರು ತೆಗೆದುಕೊಂಡು ಹೋಗಲು ನಮ್ಮ ಅಭ್ಯಂತರವಿಲ್ಲ ಎಂದು ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದ್ದಾರೆ.
ತುಮಕೂರು ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಡಿ.ಸಿ.ಎಂ. ಹಾಗೂ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ತರಾತುರಿಯಲ್ಲಿ ಕಾಮಗಾರಿ ನಡೆಸಲು ಬಂದಾಗ, ಎಕ್ಸ್ಪ್ರೆಸ್ ಕೆನಾಲ್ನಿಂದ ತುಮಕೂರು ಜಿಲ್ಲೆಯ ಗುಬ್ಬಿ, ಮಧುಗಿರಿ, ಕೊರಟಗೆರೆ, ತುಮಕೂರು ನಗರ, ಗ್ರಾಮಾಂತರ ತಾಲೂಕುಗಳಿಗೆ ಆಗುವ ನೀರಿನ ತೊಂದರೆಯನ್ನು ಮನಗಂಡು ಸಾರ್ವಜನಿಕರು, ರೈತರು, ಒಗ್ಗೂಡಿ ಬೃಹತ್ ಹೋರಾಟ ನಡೆಸಿದ್ದರ ಫಲವಾಗಿ, ಕಾಮಗಾರಿ ಸ್ಥಗಿತಗೊಂಡಿತ್ತು. ಡಿಸಿಎಂ ಆಗಿದ್ದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ತಕ್ಷಣವೇ ಮತ್ತೆ ಕಾಮಗಾರಿ ಕೈಗೊಳ್ಳುವ ಮಾತುಗಳನ್ನು ಈಗಿನ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳುತಿದ್ದಾರೆ. ಇದು ಸರಿಯಲ್ಲ. ಜಿಲ್ಲೆಯ ಜನರ ವಿರೋಧವಿದೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತುಮಕೂರು ಜಿಲ್ಲೆಯಿಂದ ಗೆಲುವು ಸಾಧಿಸಿ, ಸಚಿವರಾಗಿದ್ದಾರೆ. ತುಮಕೂರು ಜಿಲ್ಲೆಯ ಹಿತ ಕಾಯುವುದನ್ನು ಬಿಟ್ಟು, ಪೈಪ್ ಲಾಬಿಗೆ ಮಣಿದು ಎಕ್ಸ್ಪ್ರೆಸ್ ಕೆನಾಲ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ರೈತರ ಮನವೊಲಿಸುವ ಮಾತನಾಡುತಿದ್ದಾರೆ. ಮೊದಲು ನಮ್ಮ ಜಿಲ್ಲೆಗೆ ನಿಗದಿಪಡಿಸಿರುವ ನೀರನ್ನು ಹರಿಸಲಿ. ಅಂಕಿ ಅಂಶಗಳ ಪ್ರಕಾರ ಕುಣಿಗಲ್ಗೆ ನಿಗದಿಪಡಿಸಿರುವ 3.03 ಮತ್ತು ಮಾಗಡಿಯ 0.650 ಎಂ.ಸಿ.ಎಫ್.ಟಿ ನೀರಿಗೆ ಬದಲಾಗಿ, ಮಾರ್ಕೋನಹಳ್ಳಿ, ಮಂಗಳ ಜಲಾಶಯ, ಕುಣಿಗಲ್ ದೊಡ್ಡ ಕೆರೆ ಸೇರಿದಂತೆ ಒಟ್ಟು 7.50 ಟಿ.ಎಂ.ಸಿ ನೀರು ಹರಿದಿದೆ. ಇದನ್ನು ಮುಚ್ಚಿಟ್ಟು ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸರಕಾರ ಮತ್ತು ಜಿಲ್ಲಾಡಳಿತ ಪೊಲೀಸರ ಬಲ ಬಳಸಿ ನಾವು ಪ್ರತಿಭಟನೆಯನ್ನು ಹತ್ತಿಕ್ಕುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಜಿಲ್ಲೆಯಲ್ಲಿ 24 ಲಕ್ಷ ರೈತರಿದ್ದು, ಅವರಿಗೆ ನೀರಿನ ಸಮಸ್ಯೆಯ ಅರಿವಿದೆ. ಸ್ವಯಂ ಪ್ರೇರಿತರಾಗಿ ಹೋರಾಟಕ್ಕೆ ಬರಲಿದ್ದಾರೆ. ಒಂದು ವೇಳೆ ಅವರು ಲಾಠಿ ಚಾರ್ಜ್ ಮಾಡಿದರೆ, ನಾವು ಎಡೆಮಟ್ಟೆ ಎತ್ತದೆ ವಿಧಿಯಿಲ್ಲ. ಅಂತಹ ದುಃಸ್ಥಿತಿಗೆ ಸರಕಾರ ನಮ್ಮನ್ನು ತಳ್ಳಬಾರದು. ಗೋಲಿಬಾರಿಗೆ ಎದೆಕೊಡಲು ಸಿದ್ದರಿದ್ದೇವೆ. ಜಿಲ್ಲೆಯ ಎಲ್ಲಾ ಪಕ್ಷಗಳ ಶಾಸಕರು, ಸಂಸದರು, ಮುಖಂಡರು ಒಗ್ಗೂಡಿ ಜಿಲ್ಲೆಯ ಹಿತಕಾಯೋಣ. ಯಾರು ಬರಲಿ, ಬಿಡಲಿ, ಕಾಮಗಾರಿ ಆರಂಭವಾದರೆ ಹೋರಾಟ ಖಚಿತ ಎಂದು ಖಡಕ್ಕಾಗಿ ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ತಿಪಟೂರು ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿದರು. ಮುಖಂಡರಾದ ಶಿರಾ ಉಗ್ರೇಶ್, ಜೆಡಿಎಸ್ ಜಿಲ್ಲಾ ವಕ್ತಾರ ಮೆಡಿಕಲ್ ಮಧು ಭಾಗವಹಿಸಿದ್ದರು.


