ಬಹುಸಮಾಜದ ವಿಘಟನೆ ಹಿಂದೆ ಇರುವ ಶಕ್ತಿಗಳ ಬಗ್ಗೆ ಅರಿಯದೇ ಹೋದರೆ ಸಂವಿಧಾನ ದುರ್ಬಲಗೊಳ್ಳಲಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ತಿಳಿಸಿದರು.
ತುಮಕೂರಿನ ನಗರದಲ್ಲಿ ಬಿ.ಕೃಷ್ಣಪ್ಪ ಪ್ರತಿಷ್ಠಾನ, ಒಳ ಮೀಸಲಾತಿ ಹೋರಾಟ ಸಮಿತಿ, ಜಿಲ್ಲಾ ಮಾದಿಗ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರೊ.ಬಿ.ಕೃಷ್ಣಪ್ಪ ಜನ್ಮದಿನಾಚರಣೆ ಹಾಗೂ ಒಳ ಮೀಸಲಾತಿ ಸಾಮಾಜಿಕ ನ್ಯಾಯ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿ, ಹಿಂದೆ ದಲಿತ ಚಳವಳಿ ಎಲ್ಲ ಸಮುದಾಯವನ್ನು ಒಳಗೊಂಡಿತ್ತು, ಆದರೆ ಇಂದಿನ ಕಾಲಮಾನದಲ್ಲಿ ದಲಿತ ಚಳವಳಿ ವಿಘಟನೆಗೆ ಒಳಗಾಗಿ ಎಡ-ಬಲ ಎನ್ನುವಂತಾಗಿದೆ. ಇದು ದಲಿತ ಚಳವಳಿಗೆ ಅಪಾಯವನ್ನು ತರಲಿದೆ ಎಂದು ಹೇಳಿದರು.
ಒಳ ಮೀಸಲಾತಿಯಲ್ಲಿ ಮಾದಿಗ ಸಮುದಾಯಕ್ಕೆ ಎಲ್ಲ ಸಮಿತಿಗಳು ಶೇ.6ರಷ್ಟು ಮೀಸಲಾತಿ ನೀಡಿವೆ. ಅದಕ್ಕೆ ಯಾರು ವಿರೋಧ ವ್ಯಕ್ತಪಡಿಸಿಲ್ಲ, ಮಾದಿಗರು ಹೆಚ್ಚಿಗೆ ಮೀಸಲಾತಿ ಕೇಳಿಲ್ಲ, ಯಾವ ಮಾನದಂಡ ಬಳಸಿದರೂ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿರುವುದು ಸತ್ಯ, ಅವರಿಗೆ ನ್ಯಾಯಯುತ ಅವಕಾಶ ಕೊಡಬೇಕು ಎಂದು ಹೇಳಿದರು.
ಮೀಸಲಾತಿ ನಂತರ ಒಳ ಮೀಸಲಾತಿ ಎಲ್ಲ ವರ್ಗಗಳಿಗೂ ಸಿಗಬೇಕು. ಅದು ಸಾಮಾಜಿಕ ನ್ಯಾಯದ ನೈಸರ್ಗಿಕ ಕ್ರಿಯೆ, ಒಳ ಮೀಸಲಾತಿ ಇಲ್ಲದೇ ಹೋದಲ್ಲಿ ಮೀಸಲಾತಿಗೆ ಅರ್ಥವೇ ಇಲ್ಲದಂತಹ ಪರಿಸ್ಥಿತಿ ಇದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿರುವುದನ್ನು ದೊಡ್ಡ ಅಧ್ಯಯನ ಮಾಡುವ ಅಗತ್ಯವಿಲ್ಲದಷ್ಟು ಕಣ್ಣಿಗೆ ಕಾಣುತ್ತದೆ ಎಂದರು.
ಕೇವಲ ದಲಿತ ಚಳವಳಿಯಷ್ಟೇ ಅಲ್ಲ, ಅಹಿಂದ ಸಮುದಾಯ ಒಡದು ಚೂರಾಗಿದೆ. ದಲಿತ ಸಮುದಾಯ, ಹಿಂದುಳಿದ, ಅಲ್ಪಸಂಖ್ಯಾತರು ಸಹ ವಿಘಟನೆಗೊಳಗಾಗಿವೆ. ಮುಂದಿನ ರಾಜಕೀಯ ತೀರ್ಮಾನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆಯೋ ಗೊತ್ತಿಲ್ಲ, ಯುವ ಸಮೂಹದ ಅಸಮಾಧಾನ ನಿರ್ಣಾಯಕವಾಗಲಿದೆ ಎಂದು ತಿಳಿಸಿದರು.
ಹಿಂದುಳಿದ ವರ್ಗದ 2ಎ ಗುಂಪಿನಲ್ಲಿ ಕುರುಬ, ಈಡಿಗರನ್ನು ಬಿಟ್ಟರೆ ಬೇರೆ ಯಾವ ಸಮುದಾಯಗಳು ಗ್ರಾ.ಪಂ.ಸದಸ್ಯರಾಗಲು ಸಾಧ್ಯವಾಗಿಲ್ಲ. ಇಲ್ಲಿಯೂ ಸಹ ಒಳ ಮೀಸಲಾತಿ ಅವಶ್ಯಕ, ಅಹಿಂದ ವರ್ಗಗಳನ್ನು ವಿಘಟನೆಗೊಳಿಸುವ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ಬಾಹ್ಯ ಶಕ್ತಿಗಳು ವ್ಯವಸ್ಥಿತವಾಗಿ ನಡೆಸುತ್ತಿವೆ. ಅದರ ವಿರುದ್ಧವಾಗಿ ಜಾಗೃತರಾಗುವುದು ಅವಶ್ಯಕ ಎಂದು ಹೇಳಿದರು.
ಸಂವಿಧಾನ, ಮೀಸಲಾತಿ ಇದ್ದಂತೆ ಇರುತ್ತವೆ. ಆದರೆ ಶೇ.2ರಷ್ಟು ಉದ್ಯೋಗ ಮಾಡಲು ಹೋರಾಟ ನಡೆಸುತ್ತೇವೆ, ಇಂದು ವಿಧಾನಸೌಧದಲ್ಲಿ ಕೆಲಸ ಮಾಡುವ ಬಹುತೇಕರು ಖಾಸಗಿಯಾಗಿದ್ದಾರೆ. ಅವರ ಪ್ರಾತಿನಿಧ್ಯದ ಅಧ್ಯಯನವನ್ನು ಮಾಡುವ ಅವಶ್ಯಕತೆ ಇದೆ. ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಸರ್ಕಾರ ಖಾಸಗೀಕರಣ ಮಾಡುತ್ತಿದೆ. ಇದರಲ್ಲಿ ಯಾವ ಮೀಸಲಾತಿಯೂ ಅನ್ವಯಿಸುವುದಿಲ್ಲ ಎಂದರು.
ದಲಿತ ಹೋರಾಟಗಾರ ಅಂಬಣ್ಣ ಅರೋಲಿಕರ್ ಮಾತನಾಡಿ, ಮಾದಿಗ ಸಮುದಾಯಕ್ಕೆ ರಾಜಕೀಯ ಪ್ರಜ್ಞೆ ಬರುವವರೆಗೆ ಹೋರಾಟ ಅವಶ್ಯಕವಾಗಿದೆ. ಅಂಬೇಡ್ಕರ್, ಪ್ರೊ.ಬಿ.ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಜಾಗೃತಗೊಳ್ಳಬೇಕಿದೆ. ಅಂಬೇಡ್ಕರ್ ಟೀಕಿಸಿದಾಗ ಹೋರಾಡಿದ ಮಾದಿಗ ಸಮುದಾಯವನ್ನು ಮೀಸಲಾತಿಯಿಂದ ವಂಚಿಸುವ ಕೆಲಸ ಮಾಡಲಾಗಿದೆ. ಪ್ರೊ.ಬಿ. ಕೃಷ್ಣಪ್ಪ ಅವರಿಂದಲೇ ನಮಗೆ ಪರಿಚಿತರಾದವರು ಅಂಬೇಡ್ಕರ್ ಎಲ್ಲ ಹೋರಾಟಗಳಿಗೂ ಮಾದಿಗ ಸಮುದಾಯ ಶಕ್ತಿ ತುಂಬಿದೆ, ಮಾದಿಗ ಸಮುದಾಯ ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಸಬಲರಾಗಬೇಕಿದೆ ಎಂದು ಹೇಳಿದರು.
ಒಳ ಮೀಸಲಾತಿ ಹೋರಾಟ ಸಮಿತಿಯ ಬಸವರಾಜ್ ಕೌತಾಳ್ ಮಾತನಾಡಿ, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳು ಒಂದಾಗಿದ್ದರೆ ರಾಜ್ಯದಲ್ಲಿ ರಾಜಕೀಯ ಕ್ರಾಂತಿಯಾಗುತ್ತಿತ್ತು, ಒಳ ಮೀಸಲಾತಿಯ ಮೂಲ ಆಶಯವನ್ನು ಬದಿಗೊತ್ತಿ, ಅವಕಾಶ ವಂಚಿತ ಸಮುದಾಯದ ಪರವಾಗಿ ನಿಲ್ಲದೇ ಸಾಮಾಜಿಕ ನ್ಯಾಯ ಪ್ರತಿಪಾದಿಸಿ ಅಧಿಕಾರದಿಂದ ಕೆಳಗೆ ಇಳಿದಿರುವುದು ನೋವಿನ ವಿಚಾರ ಎಂದರು.
ಕೊಲಂಬೋ ಸಮುದಾಯ ನಾಗಮೋಹನ್ ದಾಸ್ ವರದಿ ವಿರೋಧಿಸುವುದರಲ್ಲಿ ತಪ್ಪಿಲ್ಲ. ಆದರೆ ಕಳೆದ ಮೂವತ್ತು ವರ್ಷಗಳಿಂದ ನಮ್ಮಂತೆಯೇ ಸಮಾನಾಂತರ ಶೋಷಿತರಾಗಿರುವ ಬಲಗೈ ಸಮುದಾಯವೂ ಒಳ ಮೀಸಲಾತಿ ಹೋರಾಟಕ್ಕೆ ವಿರುದ್ಧವಾಗಿ ನಿಂತಿದ್ದು ಎಷ್ಟು ಸರಿ, ಆದರೂ ಸಹ ಹೊಲೆಯ-ಮಾದಿಗರ ಐಕ್ಯತೆಗಾಗಿ ಎಲ್ಲವನ್ನು ಸಹಸಿಕೊಂಡಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ.ದೊರೈರಾಜು, ರಾಜ್ಯದಲ್ಲಿ ಚಳವಳಿ ಮೂಲಕ ಅಂಬೇಡ್ಕರ್ ವಿಚಾರಧಾರೆಗಳನ್ನು ಮನೆ ಮನೆಗೆ ತಲುಪಿಸಿ, ದೇಶಕ್ಕೆ ಮಾದರಿಯಾದ ಚಳವಳಿ ಕಟ್ಟಿದ ನಾಯಕ ಪ್ರೊ.ಬಿ.ಕೃಷ್ಣಪ್ಪ ಅವರು, ಅಂತಹ ನಾಯಕರನ್ನು ಕಡೆಗಣಿಸದೇ ಸ್ಮರಿಸುವಂತಹ ಕೆಲಸವಾಸಗಬೇಕು ಎಂದರು.
ಅಂಬೇಡ್ಕರ್ ಚಿಂತನೆಗಳಿಂದ ಪ್ರಭಾವಿತರಾಗಿ ಎಲ್ಲ ಶೋಷಿತ ಸಮುದಾಯಗಳನ್ನು ಒಳಗೊಂಡ ಸಮಾಜ ನಿರ್ಮಿಸಬೇಕು ಎನ್ನುವ ಕನಸುಕಂಡವರು, ಇಂದಿನ ಚಳವಳಿಗಾರರ, ಪ್ರಜ್ಞಾವಂತರು ವರ್ತಮಾನದ ಆಲೋಚನೆಯನ್ನು ಕಾಣಬೇಕು, ಜಾತಿ ಚಳವಳಿಯ ಬದಲು ಜಾತಿ ವಿನಾಶದ ಕಡೆ ಚಿಂತಿಸಬೇಕಿದೆ, ಚಳವಳಿಗಾರರು ಅಧ್ಯಯನಚೀಲರಾಗಿ ಭವಿಷ್ಯದ ಆಂತಕಕ್ಕೆ ಪರಿಹಾರ ಹುಡುಕಬೇಕಿದೆ ಎಂದು ಹೇಳಿದರು.
ದಲಿತ ಹೋರಾಟಗಾರ ನರಸೀಯಪ್ಪ, ಡಾ.ವೈ.ಕೆ.ಬಾಲಕೃಷ್ಣಪ್ಪ, ನರಸಿಂಹಯ್ಯ, ಡಾ.ಹೆಚ್.ನಾಗರಾಜು, ಜಿ.ಪಂ.ಮಾಜಿ ಸದಸ್ಯ ಕೆಂಚಮಾರಯ್ಯ ಇದ್ದರು.


