ಜನರನ್ನು ತಲುಪಲು, ನಿರ್ಮಾಪಕರಿಗೆ ಹಣ ಒದಗಿಸುವ ಉದ್ದೇಶದಿಂದ ಸಮುದಾಯದತ್ತ ಸಿನಿಮಾ ಚಿತ್ರಯಾತ್ರೆ ಆರಂಭಿಸಲಾಗಿದೆ ಎಂದು ನಿರ್ದೇಶಕ, ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ತಿಳಿಸಿದರು.
ತುಮಕೂರಿನ ಕನ್ನಡ ಭವನದಲ್ಲಿ ಜನಮಿತ್ರ ಮೂವೀಸ್ ವತಿಯಿಂದ ಹಮ್ಮಿಕೊಂಡಿದ್ದ ‘ಸಮುದಾಯದತ್ತ ಸಿನಿಮಾ–ರಾಜ್ಯಾದ್ಯಂತ ಚಿತ್ರಯಾತ್ರೆ ಚಾಲನೆಯಲ್ಲಿ ಆಶಯ ನುಡಿಗಳನ್ನಾಡಿದರು.
‘ಚಿತ್ರಯಾತ್ರೆ ಪರಿಕಲ್ಪನೆ ರೂಪಿಸಿ, ಜನರ ಹತ್ತಿರ ಸಿನಿಮಾ ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ರಾಜ್ಯದ ಎಲ್ಲ ಕಡೆ ಈ ಯಾತ್ರೆ ನಡೆಯಲಿದೆ. ಜಿಲ್ಲೆಯಲ್ಲಿ ಮೊದಲ ಕಾರ್ಯಕ್ರಮ ಆಯೋಜಿಸಲಾಗಿದ್ದು, ‘ತಾಯಿ ಕಸ್ತೂರ್ ಗಾಂಧಿ’ ಸಿನಿಮಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಬೇರೆ ಬೇರೆ ವಿಭಾಗದಲ್ಲಿ ಚಿತ್ರ ಪ್ರಶಸ್ತಿ ಪಡೆದಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಪರ್ಯಾಯ ಸಿನಿಮಾ ಎದುರಿಸುವ ಸವಾಲು ದುಪ್ಪಟ್ಟಾಗಿದೆ. ಸಿನಿಮಾ ವೀಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ ಒಂದು ವಾರ ಸಿನಿಮಾ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಕನ್ನಡ ಸಿನಿಮಾಗಳಿಗೆ ಸರಿಯಾದ ಮನ್ನಣೆ ಸಿಗುತ್ತಿಲ್ಲ. ಇದಕ್ಕಾಗಿ ಸರ್ಕಾರ ಮಿನಿ ಚಿತ್ರ ಮಂದಿರ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಚಿಂತಕ ಚ.ಹ.ರಘುನಾಥ ಚಿತ್ರಯಾತ್ರೆಗೆ ಚಾಲನೆ ನೀಡಿ ಮಾತನಾಡಿ. ಸಾಹಿತಿ ಬರಗೂರು ರಾಮಚಂದ್ರಪ್ಪ ತಾಯಿ ಕಸ್ತೂರ್ ಗಾಂಧಿ ಸಿನಿಮಾದ ಆಶಯಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸಿನಿಯಾತ್ರೆ ಆರಂಭಿಸಿರುವುದು ವಿಶೇಷ. ಮನುಷ್ಯ ಸಂವೇದನೆ ಸಂಬAಧಗಳನ್ನು ಬೆಸೆಯುವ ವಿಶೇಷ ಯಾತ್ರೆ ಸಹ. ಗಾಂಧಿಯನ್ನು ಜನರಿಗೆ ಹತ್ತಿರ ಮಾಡಿಸುವ ಯಾತ್ರೆ ಕೂಡ ಆಗಿದೆ. ಮನರೇಗಾದಿಂದ ಗಾಂಧಿ ಹೆಸರನ್ನು ತೆಗೆದು ವಿರೂಪಗೊಳಿಸಿರುವ ಸಂದರ್ಭದಲ್ಲಿ ಗಾಂಧಿ ನೆನಪುಗಳನ್ನು ತಾಯಿ ಕಸ್ತೂರ್ ಗಾಂಧಿ ಸಿನಿಮಾ ಯಾತ್ರೆ ಮೂಲಕ ಮತ್ತಷ್ಟು ಆಪ್ತಗೊಳಿಸುವ ಕೆಲಸ ನಡೆದಿರುವುದು ಗಮನಾರ್ಹ ಎಂದರು.
ಗಾಂಧಿಯವರ ಬಗ್ಗೆ ಯುವಜನತೆಯಲ್ಲಿ ನಕರಾತ್ಮಕ ಅಂಶಗಳನ್ನು ಪ್ರಚುರಪಡಿಸಿ ಅಪ್ರಸ್ತುತಗೊಳಿಸಲು ಹವಣಿಸುತ್ತಿರುವ ಸಂದರ್ಭದಲ್ಲಿ ಗಾಂಧಿ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಈ ಸಿನಿಮಾ ಸಾಹಸ ಯಾತ್ರೆ ಬಹುಮುಖ್ಯ. ಗಾಂಧಿ ವ್ಯಕ್ತತ್ವದ ತುಣುಕು ಹಾಗೂ ಛಾಯೆ ಬರಗೂರರಲ್ಲಿದೆ. ಈ ಕಾರಣಕ್ಕಾಗಿ ಈ ಸಿನಿಮಾ ವಿಶೇಷ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಚಿಂತಕ ಕೆ.ದೊರೈರಾಜ್ ಮಾತನಾಡಿ, ಭಿನ್ನಾಭಿಪ್ರಾಯಗಳನ್ನು ವಿಷದ ಬೀಜಗಳನ್ನಾಗಿ ಪಸರಿಸಿ, ವ್ಯಕ್ತಿ ಮತ್ತು ವಿಚಾರಗಳ ಮಧ್ಯೆ ಹುಟ್ಟುಹಾಕಲಾಗುತ್ತಿದೆ. ವಿಭಜಕ ಚಿಂತನೆಗಳನ್ನು ಬೌದ್ದಿಕ ವಲಯದಲ್ಲಿ ಹುಟ್ಟುಹಾಕಿ ಸಾಮಾಜಿಕ ಸಂಘರ್ಷಗಳಿಗೆ ಕಾರಣವಾಗುತ್ತಿರುವ ಈ ಕಾಲ ಘಟ್ಟದಲ್ಲಿ ವಿಷ ಬೀಜ ತೆಗೆಯುವ ಸಾಹಸದ ಕೆಲಸವನ್ನು ಬರಗೂರು ಮೇಷ್ಟುç ಮಾಡುತ್ತಿರುವುದು ಪ್ರಶಂಸನೀಯ. ಜನಗಳನ್ನು ತಲುಪಬೇಕು ಎನ್ನುವ ಉದ್ದೇಶದಿಂದ ತಾಯಿ ಕಸ್ತೂರ್ ಗಾಂಧಿ ಸಿನಿಮಾ ನಿರ್ದೇಶಿಸಿ ಜನರೆಡೆಗೆ ರಾಜ್ಯಾದ್ಯಂತ ತೆಗೆದುಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.
ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ತಾಯಿ ಕಸ್ತೂರ್ ಗಾಂಧಿ’ ಚಲನಚಿತ್ರ ಪ್ರದರ್ಶಿಸಲಾಯಿತು. ಮಕ್ಕಳು, ಮಹಿಳೆಯರು, ಯುವಕರು, ಸಾಹಿತಿಗಳು, ಹೋರಾಟಗಾರರು ಸೇರಿದಂತೆ ಎಲ್ಲರು ಸಿನಿಮಾ ವೀಕ್ಷಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಡಿಡಿಪಿಐ ರಘುಚಂದ್ರ, ಪಿ.ಯು. ಡಿ.ಡಿ.ಪಿ.ಐ ಡಾ. ಬಾಲಗುರುಮೂರ್ತಿ, ಪ್ರಾಧ್ಯಾಪಕ ಜಿ.ಪ್ರಶಾಂತ ನಾಯಕ್ ಹಾಜರಿದ್ದರು. ಡಾ. ಓ. ನಾಗರಾಜು ಸ್ವಾಗತಿಸಿ, ನಿವೃತ್ತ ಪ್ರಾಂಶುಪಾಲ ಡಿ.ಎಸ್.ಮುನೀಂದ್ರಕುಮಾರ್ ವಂದಿಸಿದರು. ಕನ್ನಡ ಉಪನ್ಯಾಸಕ ಎ. ರಾಮಚಂದ್ರಪ್ಪ ನಿರೂಪಿಸಿದರು.


