ಕರ್ನಾಟಕ ರಾಜ್ಯ ವಕೀಲರ ಪರಿಷತ್ ಗೆ ಮಾರ್ಚ್ 11ರಂದು ಚುನಾವಣೆ ನಡೆಯಲಿದ್ದು ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿರುವ ಕೆ.ಕೋಟೇಶ್ವರ ರಾವ್ ಅವರು ತುಮಕೂರು ಮತ್ತು ಗುಬ್ಬಿಯಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೋಟೇಶ್ವರ ರಾವ್ ‘ನಾನು ಚುನಾವಣೆಯಲ್ಲಿ ಆಯ್ಕೆಯಾದಲ್ಲಿ ವಕೀಲರ ಪರಿಷತ್ ನ ಕೆಲಸ ಕಾರ್ಯಗಳಲ್ಲಿ ಪಾರದರ್ಶಕತೆ ತರಲು ಪ್ರಯತ್ನಿಸುತ್ತೇನೆ. ಪರಿಷತ್ತಿನ ಲೆಕ್ಕಪತ್ರಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಮಾಹಿತಿಯನ್ನು ವಕೀಲರಿಗೆ ತಲುಪಿಸುವುದು ಮತ್ತು ವೆಬ್ ಸೈಟ್ ನಲ್ಲಿ ಪ್ರಕಟಿಸುವಂತೆ ಒತ್ತಾಯಿಸುತ್ತೇನೆ’ ಎಂದರು.
ವಕೀಲರಿಗೆ ಕಲ್ಯಾಣ ನಿಧಿಯಲ್ಲಿ ಈಗಿರುವ ಸ್ಲ್ಯಾಬ್ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಪಡುತ್ತೇನೆ. ರಾಜ್ಯದ ಯಾವುದೇ ಭಾಗದ ವಕೀಲರ ಸಮಸ್ಯೆಯನ್ನು ಕೇವಲ ಪೋನ್ ಮೂಲಕ ತಿಳಿಸಿದಲ್ಲಿ ಅವರ ಸಮಸ್ಯೆಯನ್ನು ಪರಿಹರಿಸಲು ಮುಂದಾಗುತ್ತೇನೆ ಎಂದ ಅವರು ವಕೀಲರ ಕಲ್ಯಾಣ ನಿಧಿ ಮೊತ್ತವನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹೇಳಿದರು.

ವಕೀಲರ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ತಕ್ಷಣವೇ ಮಧ್ಯಪ್ರವೇಶ ಮಾಡಿ ಸಿಂಧಗಿ, ಶಿವಮೊಗ್ಗೆ ಮತ್ತು ಕೂರ್ಗ್ ಮೊದಲಾದ ಕಡೆಗಳಲ್ಲಿ ತಕ್ಷಣವೇ ಭೇಟಿ ಮಾಡಿ ಅಲ್ಲಿರುವ ವಕೀಲರ ಜೊತೆ ಮಾತುಕತೆ ನಡೆಸಿ ನೊಂದ ವಕೀಲರ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿ ದಾಳಿಕೋರರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಕೀಲರಾದ ಶಿವಶಂಕರ ಯಡ್ರಾಮಿ, ಪೂರ್ಣಿಮಾ, ರಾಕೇಶ್, ಮಲ್ಲಿಕಾರ್ಜುನ, ರವಿಶಂಕರ್, ರಾಮಪ್ಪ, ಡಿ.ಶಿವಣ್ಣ, ಈ.ಶಿವಣ್ಣ ಇದ್ದರು.


