ಹುದ್ದೆಗಳ ನೇಮಕಾತಿಯಲ್ಲೂ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಕೋರಿ ಮಾದರ ಮಹಾಸಭಾದ ಮುಖಂಡರು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್ಗೌಡರಿಗೆ ಗುರುವಾರ ಮನವಿಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಪರಿಶಿಷ್ಟ ಜಾತಿಯಲ್ಲಿರುವ 101 ಕೋಮುಗಳಿಗೆ ಒಳಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ 35 ವರ್ಷಗಳಿಂದ ಮಾದಿಗ ಸಮುದಾಯದಿಂದ ಹೋರಾಟ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ದಿ.1.8.24ರಂದು ಸ್ಪಷ್ಟ ಆದೇಶ ನೀಡಿ ಆಯಾ ರಾಜ್ಯ ಸರ್ಕಾರಗಳೇ ಪರಿಶಿಷ್ಟ ಜಾತಿಯಲ್ಲಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ದತ್ತಾಂಶಗಳನ್ನು ಕ್ರೂಢೀಕರಣ ಮಾಡಿ ಅದರ ಆಧಾರದ ಮೇಲೆ ಒಳಮೀಸಲಾತಿ ಕಲ್ಪಿಸುವಂತೆ ತಿಳಿಸಿದೆ ಎಂದು ವಿವರಿಸಿದರು.
ಇದರ ಸಂಬಂಧವಾಗಿ ಸರ್ಕಾರ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ಆಯೋಗ ರಚನೆ ಮಾಡಿ ಅವರಿಂದ ಪಡೆದ ವರದಿಯ ಆಧಾರದ ಮೇಲೆ ಮಾದಿಗ ಸಂಬಂಧಿತ ಜಾತಿಗಳಿಗೆ 6, ಹೊಲೆಯ ಸಂಬಂಧಿತ ಜಾತಿಗಳಿಗೆ 6 ಮತ್ತು ಸ್ಪೃಶ್ಯ ಜಾತಿಗಳೊಂದಿಗೆ ಅಲೆಮಾರಿ ಜನಾಂಗಗಳನ್ನು ಸೇರಿಸಿ 5ರ ಅನುಪಾತದಲ್ಲಿ ಒಳಮೀಸಲಾತಿ ಜಾರಿ ಮಾಡಲು ತೀರ್ಮಾನ ಮಾಡಿತ್ತು. ಆದರೆ ಮೀಸಲಾತಿ ಪ್ರಮಾಣ ಶೇಕಡ 50ಕ್ಕಿಂತ ಜಾಸ್ತಿ ಆಗದಂತೆ ಉದ್ಯೋಗ ನೇಮಕಾತಿ ಮಾಡಬೇಕೆಂದು ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿರುವುದರಿಂದ, ಅದರಂತೆಯೇ ಶೇಕಡ 50ರ ಅಡಿಯಲ್ಲಿ ಪರಿಶಿಷ್ಟ ಜಾತಿಯ ಶೇಕಡ 15ರ ಮೀಸಲಾತಿಯಲ್ಲಿಯೇ ಒಳಮೀಸಲಾತಿ ಕಲ್ಪಿಸುವಂತೆ ಮಾದಿಗ ಸಮುದಾಯ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ವೈ.ಹೆಚ್.ಹುಚ್ಚಯ್ಯ ಹೇಳಿದರು.
ಆದರೆ ದಿ. 27.2.2026ರಂದು ಸರ್ಕಾರ ಒಳಮೀಸಲಾತಿ ಜಾರಿಯನ್ನು ಕೈಬಿಟ್ಟು 56432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿರುವುದರಿಂದ ಪರಿಶಿಷ್ಟ ಜಾತಿಗಳಿಗೆ ಅನ್ಯಾಯವಾಗುತ್ತಿದೆ. ಅದರಲ್ಲೂ ಮಾದಿಗ ಸಮುದಾಯಕ್ಕೆ ತೀವ್ರ ಅನ್ಯಾಯವಾಗುತ್ತಿದೆ. ಆದ್ದರಿಂದ ಸರ್ಕಾರ ಈ ಅನ್ಯಾಯವನ್ನು ಸರಿಪಡಿಸಿ 56432 ಹುದ್ದೆಗಳ ನೇಮಕಾತಿಯಲ್ಲಿಯೇ ಒಳಮೀಸಲಾತಿ ಜಾರಿ ಮಾಡಿ ನ್ಯಾಯ ಒದಗಿಸಬೇಕು. ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ಮಾಡಿ, ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಶಾಸಕ ಬಿ.ಸುರೇಶ್ಗೌಡರಿಗೆ ಮನವಿ ಮಾಡಿದರು.
ಈ ವೇಳೆ ಕರ್ನಾಟಕ ಮಾದರ ಮಹಾಸಭಾ ರಾಜ್ಯ ಕಾರ್ಯಕಾರಣಿ ಸದಸ್ಯ ನರಸಿಂಹಮೂರ್ತಿ, ಜಿಲ್ಲಾ ಖಜಾಂಚಿ ಸಿ.ಗಂಗರಾಜು, ತುಮಕೂರು ತಾಲ್ಲೂಕು ಅಧ್ಯಕ್ಷ ಹೆಚ್.ಎ.ಆಂಜಿನಪ್ಪ, ಕಾರ್ಯದರ್ಶಿ ಎಲ್.ವಿ.ದಾಸಪ್ಪ ಹಾಜರಿದ್ದರು.


