ತುಮಕೂರು ಹೊರವಲಯದ ಬುಗುಡನಹಳ್ಳಿ ಕೆರೆಯಿಂದ ತುಮಕೂರು ಮಹಾನಗರ ಪಾಲಿಕೆಯ ವಾರ್ಡ್ ಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಸದ್ಯಕ್ಕೆ ನೀರು ಸರಬರಾಜು ಮಾಡುವ ಪಂಪ್ ಸೆಟ್ ಕೆಟ್ಟುಹೋಗಿದೆ. ಹೀಗಾಗಿ ಕೂಡಲೇ ಅಧಿಕಾರಿಗಳು ಪಂಪ್ ಸೆಟ್ ದುರಸ್ತಿ ಮಾಡಿಸಿ ಕುಡಿಯುವ ನೀರು ಸರಬರಾಜು ಮಾಡುವಂತೆ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮನವಿ ಮಾಡಿದ್ದಾರೆ.
ತುಮಕೂರು ಗ್ರಾಮಾಂತರದ ಬುಗುಡನಹಳ್ಳಿ ಜಲ ಸಂಗ್ರಹಗಾರಕ್ಕೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡ ನಂತರ ಮಾತನಾಡಿದರು.
ತುಮಕೂರು ಮಹಾನಗರ ಪಾಲಿಯ ಎಲ್ಲಾ ವಾರ್ಡ್ಗಳಿಗೆ ಬುಗುಡನಹಳ್ಳಿ ಕೆರೆಯಿಂದ ಹೇಮಾವತಿ ನೀರನ್ನು ಶುದ್ಧಿಕರಿಸಿ ಕುಡಿಯಲು ಸರಬರಾಜು ಮಾಡಲಾಗುತ್ತದೆ. ಆದರೆ ಇಲ್ಲಿನ ತಾಂತ್ರಿಕ ಸಮಸ್ಯೆ ಮತ್ತು ಎರಡು ಪಂಪ್ ಸೆಟ್ ಕೆಟ್ಟುನಿಂತ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಇಲ್ಲಿನ ಸಮಸ್ಯೆಯನ್ನು ಅಧಿಕಾರಿಗಳು ಪರಿಶೀಲಿಸದಿದ್ದರೆ ಮುಂದಿನ ಎರಡು ದಿನದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವುದು ಎಂದು ಹೇಳಿದರು.
ತುಮಕೂರು ವ್ಯಾಪ್ತಿಯಲ್ಲಿರುವ 26 ಕೆರೆಗಳಿಗೆ ಇಂಟರ್ ಲಿಂಕಿಂಗ್ ಆಗಬೇಕಿದೆ. ಹೇಮಾವತಿಯಿಂದ ಜಾರಿಯಾಗಿರುವ 1.32 ಟಿಎಂಸಿ ನೀರನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡು ದಿನದ 24 ಗಂಟೆಯೂ ಪರಿಶುದ್ಧವಾದ ನೀರು ಸರಬರಾಜು ಮಾಡದರೆ 3 ಲಕ್ಷ ಜನಸಂಖ್ಯೆವುಳ್ಳ ತುಮಕೂರು ನಗರ ಸ್ಮಾರ್ಟ್ ಸಿಟಿ ಆಗುವುದಕ್ಕೆ ದಾಪುಗಾಲಿಡುತ್ತಿದೆ. ಹಾಗೆಯೇ ಕೈಗಾರಿಕಾ ಪ್ರದೇಶಗಳಾದ ವಸಂತನರಸಾಪುರ, ಅಂತರಸನಹಳ್ಳಿ, ಸತ್ಯಮಂಗಲ, ಹಿರೇಹಳ್ಳಿ ಕೈಗಾರಿಕಾ ಪ್ರದೇಶಗಳಿಗೆ ವ್ಯವಸ್ಥಿತವಾದ ನೀರಿನ ಅನುಕೂಲತೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷ ಜನರ ಪರವಾಗಿ ಕೆಲಸ ಮಾಡುತ್ತಿದೆ. ಹಾಗಾಗಿ ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಸರಕಾರ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದು ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ರೇವಣಸಿದ್ದಯ್ಯ, ಕಾಂಗ್ರೆಸ್ ಮುಖಂಡ ವಾಲೆ ಚಂದ್ರಯ್ಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹನುಮಂತಯ್ಯ, ಪಾಲಿಕೆ ಸದಸ್ಯ ಮಹಮದ್ ಪೀರ್, ಮಹೇಶ್, ಸಂಜೀವ್ಕುಮಾರ್, ತರುಣೇಶ್, ಆಧೀಲ್ಖಾನ್, ಜೈನ್ಖಾನ್, ಗಿರೀಶ್, ಜೈನ್ಷರೀಪ್, ಸುಕನ್ಯ, ಪ್ರೇಮಾ ಇದ್ದರು.