ಮಹಿಳೆಯರು ಇಂದು ಬಾಡಿ ಪಾಲಿಟಿಕ್ಸ್, ಕಲೆಕ್ಟಿವ್ ಪಾಲಿಟಿಕ್ಸ್ ಹಾಗೂ ವೈಯಕ್ತಿಕ ರಾಜಕಾರಣದ ಬಗ್ಗೆ ಅರಿವು ಬೆಳೆಸಿಕೊಳ್ಳುವುದು ಅತ್ಯಗತ್ಯ. ಹೆಣ್ಣುಮಕ್ಕಳು ಸಮಾಜ ಹೇರಿರುವ ಗುಡ್ ಗರ್ಲ್ ಎಂಬ ಸಿಂಡ್ರೋಮ್ನಿಂದ ಹೊರಬರಬೇಕು ಎಂದು ಚಿಂತಕಿ ಡಾ. ಎಚ್.ಎಸ್. ಅನುಪಮ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು, ಐಕ್ಯೂಎಸಿ ಹಾಗೂ ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಮತ್ತು ಮಹಿಳೆ ವಿಶೇಷ ಉಪನ್ಯಾಸ ಮಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಚಳವಳಿ ಎಂದರೆ ಕೇವಲ ಪುರುಷರನ್ನು ಛೇಡಿಸುವುದಲ್ಲ. ಇದು ದಮನದ ನೆಲೆ ಇಲ್ಲದ, ವಿರೋಧಿ ಭಾವವಿಲ್ಲದ ಒಂದು ವಿಶಿಷ್ಟ ಚಳವಳಿ. ಲಿಂಗ ತಾರತಮ್ಯ, ಅಸಮಾನತೆ ಮತ್ತು ಲೈಂಗಿಕ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವುದರ ಜೊತೆಗೆ ಸಮಾಜದ ಪ್ರತಿಯೊಂದು ಸಮಸ್ಯೆಗೂ ಮಹಿಳಾ ಚಳವಳಿ ನಂಟನ್ನು ಹೊಂದಿದೆ ಎಂದು ಹೇಳಿದರು.
ಕಂತಿ ಹಂಪನ ಕಾಲದಿಂದಲೂ ಮಹಿಳಾ ಚಳವಳಿ ಅಸ್ತಿತ್ವದಲ್ಲಿದೆ. ಭಕ್ತಿಯ ಮಾರ್ಗದಲ್ಲಿ ಮತ್ತು ಸಾಹಿತ್ಯದ ಮೂಲಕ ಇದು ವಿಸ್ತರಿಸಿದೆ. ಸ್ವಾತಂತ್ರ÷್ಯ ಹೋರಾಟದಿಂದ ಹಿಡಿದು ಸಂವಿಧಾನ ರಚನೆಯವರೆಗೆ ಮಹಿಳೆಯರ ಶ್ರಮ ಅಪಾರವಾಗಿದೆ. ಆದರೆ, ಇಂದಿಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ಮುಂದುವರಿಯುತ್ತಿರುವುದು ಕಳವಳಕಾರಿ ಸಂಗತಿ ಎಂದು ವಿಷಾದಿಸಿದರು.
ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲುವ ‘ಸಮಾನತೆಯೆಡೆಗೆ’ ವರದಿಯನ್ನು ಮತ್ತು ಮಹಿಳೆಯರ ಪರವಾಗಿ ಹೋರಾಡುತ್ತಿರುವ ಸಂಸ್ಥೆಗಳ ಬಗ್ಗೆ ವಿದ್ಯಾರ್ಥಿನಿಯರು ಹಾಗೂ ಹೋರಾಟಗಾರರು ಅಧ್ಯಯನ ಮಾಡಬೇಕು ಎಂದು ಕರೆ ನೀಡಿದರು.
ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವ ಡಾ. ಮೋಹನ ಎಚ್.ಎಸ್. ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ನಾಗಭೂಷಣ್ ಬಗ್ಗನಡು ಸ್ವಾಗತಿಸಿದರು. ಪ್ರಾಂಶುಪಾಲ ಪ್ರೊ. ಎಸ್. ಶ್ರೀನಿವಾಸ, ಐಕ್ಯೂಎಸಿ ಸಂಯೋಜಕ ಡಾ. ವಿಜಯ್ ಕುಮಾರ್, ಪ್ರಾಧ್ಯಾಪಕರಾದ ಡಾ. ವೆಂಕರೆಡ್ಡಿ ರಾಮರೆಡ್ಡಿ, ಡಾ. ಶ್ರೀಪಾದ ತಮ್ಮಯ್ಯ, ಡಾ. ನಟರಾಜು ಜೆ.ಆರ್., ಡಾ. ಶ್ರೀಧರ ಸಿ., ಮತ್ತು ಡಾ. ರಂಗನಾಥ ಸ್ವಾಮಿ ಎಚ್. ಇದ್ದರು.


