ಗಾಂಧಿ ಕುಟುಂಬದ ಜತೆ ಎಚ್.ಜಿ. ರಾಮುಲು ಅವರ ಕುಟುಂಬದ ಅತ್ಯುತ್ತಮ ಬಾಂಧವ್ಯ ಹೊಂದಿದ್ದು, ಇಂದಿರಾ ಗಾಂಧಿ ಅವರು ಅನೇಕ ಬಾರಿ ಇವರ ಮನೆಗೆ ಭೇಟಿ ನೀಡಿದ್ದಾರೆ. ಹಾಗಾಗಿ ಹಿರಿಯ ಮುಖಂಡ ಶ್ರೀನಾಥ್ ಅವರು ಯಾವ ಷರತ್ತೂ ಇಲ್ಲದೇ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ ಎಂದು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಲ್ಲಿಕಾರ್ಜುನ ನಾಗಪ್ಪ ಅವರು ಮಂತ್ರಿಯಾಗಿದ್ದ ಸಂದರ್ಭದಲ್ಲಿ ಶ್ರೀನಾಥ್ ಅವರು ಪರಿಷತ್ ಸದಸ್ಯರಾಗಬೇಕು ಎಂದು ಕೇಳಿರಲಿಲ್ಲ. ಆದರೂ ಅವರ ಮನೆ ಬಾಗಿಲಿಗೆ ಅಧಿಕಾರ ಹುಡುಕಿಕೊಂಡು ಹೋಗಿತ್ತು ಎಂದು ತಿಳಿಸಿದರು.
ಶ್ರೀನಾಥ್ ಹಾಗೂ ಅವರ ಬೆಂಬಲಿಗರ ಸೇರ್ಪಡೆಗೆ ಹೈಕಮಾಂಡ್ ಕೂಡ ಒಪ್ಪಿದೆ. ಅಲ್ಲಂ ವೀರಭದ್ರಪ್ಪ ಅವರ ಸಮಿತಿ ಕೂಡ ಎಲ್ಲರ ಜತೆ ಮಾತನಾಡಿದೆ. ನಾನು ಜಿಲ್ಲಾಧ್ಯಕ್ಷರು, ಇಕ್ಬಾಲ್ ಅನ್ಸಾರಿ ಅವರ ಜತೆ ಮಾತುಕತೆ ನಡೆಸಿ, ಎಲ್ಲರ ಒಮ್ಮತದಿಂದ ಶ್ರೀನಾಥ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ನಮ್ಮ ಸಮೀಕ್ಷೆ ಪ್ರಕಾರ ಈ ಬಾರಿ ಕೊಪ್ಪಳ ಜಿಲ್ಲೆಯ ಐದಕ್ಕೆ ಐದು ಕ್ಷೇತ್ರಗಳಲ್ಲೂ ಪಕ್ಷ ಗೆಲ್ಲಲಿದೆ. ಇದನ್ನು ನಿಜ ಮಾಡಲು ನೀವೆಲ್ಲರೂ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ, ಸೋನಿಯಾ ಗಾಂಧಿ ಅವರ ಪರವಾಗಿ, ಸಿದ್ದರಾಮಯ್ಯ ಹಾಗೂ ಬಿ. ಕೆ. ಹರಿಪ್ರಸಾದ್ ಅವರು, ಕಾರ್ಯಾಧ್ಯಕ್ಷರು, ಜಿಲ್ಲಾ ನಾಯಕರು, ಇಕ್ಬಾಲ್ ಅನ್ಸಾರಿ ಅವರ ಸಮ್ಮುಖದಲ್ಲಿ ಶ್ರೀನಾಥ್ ಹಾಗೂ ಅವರ ಕುಟುಂಬ ಹಾಗೂ ಬೆಂಬಲಿಗರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಕೊಪ್ಪಳದಲ್ಲಿ ದೊಡ್ಡ ಸಮಾವೇಶ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳುವ ಆಲೋಚನೆ ಇತ್ತು. ಸದ್ಯಕ್ಕೆ ಪಕ್ಷ ಸೇರ್ಪಡೆ ಆಗಲಿ ಎಂದು ಕಾಂಗ್ರೆಸ್ ಕಚೇರಿಯಲ್ಲಿ ಮಾಡಲಾಗುತ್ತಿದೆ. ಈ ಸೇರ್ಪಡೆ ವಿಚಾರವಾಗಿ ಎಲ್ಲೂ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.