ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಶಬ್ದಗಳ ಮರು ವ್ಯಾಖ್ಯಾನದ ಅಗತ್ಯವಿದೆ ಎಂದು ಸಂಸ್ಕೃತಿ ಚಿಂತಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದ್ದಾರೆ.
ತುಮಕೂರಿನ ಕನ್ನಡ ಭವನದಲ್ಲಿ ಡಾ.ರವಿಕುಮಾರ್ ನೀಹ ಬರೆದಿರುವ ಅರಸು ಕುರನ್ಗರಾಯ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಪಡೆದಿರುವ ನಮ್ಮಗಳ ನಡೆ, ಅಂಬೇಡ್ಕರ್ ಆಶಯದ ವಿವೇಕಯುತ ನಡೆಯಾಗಿದೆಯೇ, ನಮ್ಮ ಬದುಕು ಹಸನಾಗಿದೆಯೇ ಎಂಬುದನ್ನು ನೋಡಿದರೆ ನಿಜಕ್ಕೂ ನಿರಾಸೆಯಾಗುತ್ತದೆ ಎಂದು ತಿಳಿಸಿದರು.
ಅಕ್ಷರ ವಂಚಿತ ಸಮುದಾಯಗಳು ಅಂಬೇಡ್ಕರ್ ಆಶಯದಂತೆ ಶಿಕ್ಷಣ ಪಡೆದು ಬಂದ ವ್ಯಕ್ತಿಗಳು ಹೇಗೆ ವರ್ತಿಸುತ್ತಿದ್ದಾರೆ ಎಂಬುದನ್ನು ಗಮನಿಸಿದರೆ ನಿಜಕ್ಕೂ ನಾಚಿಕೆ ಎನಿಸುತ್ತದೆ ಎಂದರು.
ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್, ಸಂಸದ ಶ್ರೀನಿವಾಸ ಪ್ರಸಾದ್, ಎಚ್.ವಿಶ್ವನಾಥ್ ಅವರುಗಳು ಅಂಬೇಡ್ಕರ್, ಲೋಹಿಯ ಚಿಂತನೆಗಳನ್ನು ಆಮೂಲಾಗ್ರವಾಗಿ ಓದಿ, ಅರಗಿಸಿಕೊಂಡವರು. ಆದರೆ ಇಂದು ಅವರ ಸ್ಥಿತಿ ಏನಾಗಿದೆ. ಶತಶತಮಾನಗಳಿಂದ ತಳ ಸಮುದಾಯಗಳ ಬಲವರ್ಧನೆಯನ್ನು ವಿರೋಧಿಸುವವರ ಜೊತೆ ಸೇರಿರುವುದು ಏನನ್ನು ಸೂಚಿಸುತ್ತದೆ ಎಂದು ಪ್ರಶ್ನಿಸಿದರು.
ಈಗಾಗಲೇ ರಚನೆಯಾಗಿರುವ ಚರಿತ್ರೆ ಓಲೈಕೆಯ ರೂಪದ್ದಾಗಿದೆ. ಶ್ರಮಿಕರ, ಕೆಳಜಾತಿಗಳ ಇತಿಹಾಸವನ್ನು ಸಂಪೂರ್ಣವಾಗಿ ಮರೆಮಾಚಲಾಗಿದೆ. ಬಹುಜನರ ಚರಿತ್ರೆಯನ್ನು ನಮ್ಮ ಶಿಕ್ಷಣ ವ್ಯವಸ್ಥೆ ದೂರವಿಟ್ಟಿದೆ. ಈಗಿನ ಶಿಕ್ಷಣೂ ಇದಕ್ಕಿಂತ ಭಿನ್ನವಾಗಿಲ್ಲ ಎಂದು ಹೇಳಿದರು.
ಪಠ್ಯಪರಿಷ್ಕರಣೆ ಹೆಸರಲ್ಲಿ ನಮ್ಮದ್ದಲ್ಲದ ಚರಿತ್ರೆಯನ್ನು ನಮ್ಮ ಮಕ್ಕಳು ಓದುತ್ತಿದ್ದಾರೆ. ನಮ್ಮ ಚರಿತ್ರೆಯನ್ನು ಜಾನಪದ, ಕುಲಶಾಸ್ತ್ರೀಯ ನೆಲೆಗಳಲ್ಲಿ ಶೋಧಿಸಬೇಕು. ಅಂಥ ನೆಲೆಯಲ್ಲಿ ಡಾ.ರವಿಕುಮಾರ್ ನೀಹ ಅರಸು ಕುರನ್ಗರಾಯ ಕೃತಿಯಲ್ಲಿ ಸಂಶೋಧನೆಯ ಮಾದರಿಯಾಗಿದೆ. ಜನಪದದಲ್ಲಷ್ಟೇ ಇದ್ದ ರಾಜನನ್ನು ಅನೇಕ ಕುರುಹುಗಳು, ಅವಶೇಷಗಳ ಮೂಲಕ ನಮ್ಮ ಮುಂದಿಟ್ಟಿದ್ದಾರೆ ಎಂದು ವಿವರಿಸಿದರು.