ಎನ್ಇಇಟಿ ಪರೀಕ್ಷೆಯ ಪಿಜಿ ಕೌನ್ಸೆಲಿಂಗ್ ವಿಳಂಬ ಖಂಡಿಸಿ ದೆಹಲಿಯಲ್ಲಿ ಸುಪ್ರೀಂಕೋರ್ಟ್ ಕಡೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಲು ಮುಂದಾದ ವೈದ್ಯರನ್ನು ತಡೆದ ಪೊಲೀಸರು ಪ್ರತಿಭಟನಾಕಾರರ ಮೇಲೆ ದೈಹಿಕ ಹಲ್ಲೆ ನಡೆಸಿದರು ಎಂದು ಆರೋಪಿಸಲಾಗಿದೆ.
ದೆಹಲಿಯಲ್ಲಿ ಸೋಮವಾರ ಮೌಲಾನಾ ಅಜಾದ್ ವೈದ್ಯಕೀಯ ಕಾಲೇಜಿನಿಂದ ಸುಪ್ರೀಂಕೋರ್ಟ್ ಗೆ ಕಡೆಗೆ ಮೆರವಣಿಗೆ ನಡೆಸಿ ಕೇಂದ್ರ ಮತ್ತು ದೆಹಲಿ ಸರ್ಕಾರದ ಗಮನ ಸೆಳೆಯಲು ಸ್ಥಾನಿಕ ವೈದ್ಯರು ಮುಂದಾದರು. ಸುಪ್ರೀಂಕೋರ್ಟ್ ಕಡೆಗೆ ಹೋಗುತ್ತಿದ್ದ ಸ್ಥಾನಿಕ ವೈದ್ಯರನ್ನು ತಡೆದರು. ಆಗ ಪ್ರತಿಭಟನಾಕಾರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.

ಇದರಿಂದ ರೊಚ್ಚಿಗೆದ್ದ ಪ್ರತಿಭಟನಾನಿರತ ಸ್ಥಾನಿಕ ವೈದ್ಯರು ತಮ್ಮ ಲ್ಯಾಬ್ ಕೋಟ್ ಗಳನ್ನು ರಸ್ತೆಯ ಮೇಲೆ ಹಾಕಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಲೋಹಿಯಾ ಆಸ್ಪತ್ರೆಯ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಡಾ.ಸುರ್ವೃಷ್ ಪಾಂಡೆ, ನಾವು ಡಿಸೆಂಬರ್ 17 ರಿಂದ ದೆಹಲಿಯ ಆಸ್ಪತ್ರೆಗಳಲ್ಲಿ ನಿಯಮಿತ ಮತ್ತು ತುರ್ತು ವೈದ್ಯಕೀಯ ಸೇವೆಗಳನ್ನು ಬಹಿಷ್ಕರಿಸುತ್ತಿದ್ದೇವೆ. ನಿರ್ಮಾಣ್ ಭವನದ ಹೊರಗೆ ನಡೆಸಿದ ಪ್ರತಿಭಟನೆಗೆ ಸರ್ಕಾರ ಕಿಮ್ಮತ್ತು ಕೊಡಲಿಲ್ಲ. ಆದ್ದರಿಂದ ಸುಪ್ರೀಂಕೋರ್ಟ್ ವರೆಗೂ ಪ್ರತಿಭಟನೆ ನಡೆಸುತ್ತೇವೆ. ನಮ್ಮ ಲ್ಯಾಬ್ ಕೋಟ್ ಗಳನ್ನು ಸುಪ್ರೀಂಕೋರ್ಟ್ ಗೆ ಒಪ್ಪಿಸುತ್ತೇವೆ ಎಂದು ಹೇಳಿದರು.
ಎನ್ಇಇಟಿ ಪಿಜಿ ಕೌನ್ಸೆಲಿಂಗ್ ವಿಳಂಬದಿಂದ ನಾವು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದೇವೆ. ಹಾಗಾಗಿ ಸುಪ್ರೀಂಕೋರ್ಟ್ ಸುಮೊಟೊ ಪ್ರಕರಣ ದಾಖಲಿಸುವಂತೆ ನ್ಯಾಯಾಲಯವನ್ನು ಕೋರುತ್ತೇವೆ ಎಂದರು.
ಕೌನ್ಸೆಲಿಂಗ್ ಪರೀಕ್ಷೆ ಮುಂದೂಡಿರುವುದರಿಂದ ವೈದ್ಯಕೀಯ ಕಾಲೇಜುಗಳಲ್ಲಿ ರೆಸಿಡೆಂಟ್ ವೈದ್ಯರ ಹೊಸ ಬ್ಯಾಚ್ ಪ್ರವೇಶ ಮಾಡಿಕೊಳ್ಳುತ್ತಿಲ್ಲ. ಇದರ ವಿರುದ್ಧ ನವೆಂಬರ್ 27ರಿಂದ ದೇಶಾದ್ಯಂತ ಸ್ಥಾನಿಕ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಡಿಸೆಂಬರ್ 6 ರಿಂದ ಆರ್.ಡಿಎ, ತುರ್ತು ನಿಗಾ ಘಟಕ ಮತ್ತು ಸಾಮಾನ್ಯ ಸೇವೆಗಳನ್ನು ಬಹಿಷ್ಕರಿಸಿದ್ದರು. ನಂತರ ಪ್ರತಿಭಟನೆ ಸ್ಥಗಿತಗೊಳಿಸಲಾಗಿತ್ತು. ಸರ್ಕಾರ ಸೂಕ್ತವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ವೈದ್ಯರು ಪ್ರತಿಭಟನೆ ತೀವ್ರಗೊಳಿಸಲು ತೀರ್ಮಾನಿಸಿದ್ದಾರೆ.
ನಮ್ಮ ವೈದ್ಯರ ಮೇಲೆ ಕೇಂದ್ರ ಸರ್ಕಾರ ಪೊಲೀಸರ ಮೂಲಕ ಲಾಠಿ ಪ್ರಹಾರ ಮಾಡಿರುವುದು ಮತ್ತು ದೈಹಿಕ ಹಲ್ಲೆ ನಡೆಸಿರುವುದು ನಾಚಿಕೆಗೇಡಿನ ಸಂಗತಿ. ಕೊವಿಡ್ ಅಲೆಗಳು ಹರಡುತ್ತಿರುವ ಸಂದರ್ಭದಲ್ಲಿ ನಮ್ಮ ದೇಶದ ಲಕ್ಷಾಂತರ ಜನರ ಜೀವವನ್ನು ರಕ್ಷಿಸುವವರು ಯಾರು? ಕುಟುಂಬದ ಸದಸ್ಯರು ಮತ್ತು ವೈಯಕ್ತಿಕತೆಯನ್ನು ತ್ಯಾಗ ಮಾಡಿರುವ ವೈದ್ಯರ ಮೇಲೆ ಕರುಣೆ ಇಲ್ಲದೆ ಹಲ್ಲೆ ನಡೆಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಎಐಐಎಂಎಸ್ ನ ಡಾ.ದತ್ತ ಕಿಡಿ ಕಾರಿದ್ದಾರೆ.


