2020ರಲ್ಲಿ ರಾಜ್ಯದ 3.12 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ಕೊಡುವ ತೀರ್ಮಾನವಾದರೂ ಇದುವರೆಗೂ ಹಕ್ಕುಪತ್ತ ನೀಡಿಲ್ಲ. ಹಾಗಾಗಿ ಕೂಡಲೇ ಹಕ್ಕುಪತ್ರ ನೀಡುವಂತೆ ಎಂದು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಆಗ್ರಹಿಸಿದರು.
ಡಿಸೆಂಬರ್ 22ರಂದು ಸ್ಲಂ ಜನಾಂದೋನ ಕರ್ನಾಟಕ ವತಿಯಿಂದ ಬೆಳಗಾವಿ ಚಲೋ ಹಮ್ಮಿಕೊಂಡು ಸ್ಲಂ ನಿವಾಸಿಗಳ ಸಂವಿಧಾನಬದ್ದ ಹಕ್ಕುಗಳ ಖಾತ್ರಿಗೆ ಒತ್ತಾಯಿಸಿ ಸುವರ್ಣಸೌಧ ಗಾರ್ಡನ್ ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
2014 ರಲ್ಲಿ ನಡೆದ ಬೆಳಗಾವಿ ಚಲೋಯಿಂದ 94cc ಜಾರಿಗೆ ಬಂದು 1.60 ಲಕ್ಷ ಜನರಿಗೆ ಹಕ್ಕುಪತ್ರ ದೊರೆಯಿತು. 2017ರಲ್ಲಿ ಫ್ರೀಡಂ ಪಾರ್ಕಿನಲ್ಲಿ ನಡೆದ ನಿರಂತರ ಧರಣಿಯ ಭಾಗವಾಗಿ ಲ್ಯಾಂಡ್ ಬ್ಯಾಂಕ್ ಯೋಜನೆ ಘೋಷಣೆಯಾಯಿತೇ ಹೊರತು ಜಾರಿಗೆ ಬರಲಿಲ್ಲ ಎಂದು ಆರೋಪಿಸಿದರು

ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಮನೆ ನಿರ್ಮಿಸಲು ಶ್ರೀಮಂತರಿಗೂ 1.5ಲಕ್ಷ ಸಬ್ಸಿಡಿ, ಸ್ಲಂನಿವಾಸಿಗಳಿಗೂ 1.5ಲಕ್ಷ ಸಬ್ಸಿಡಿ ನೀಡುತ್ತಿರುವುದು ಸಂವಿಧಾನದ ಸಾಮಾಜಿಕ ನ್ಯಾಯದ ವಿರೋಧಿಯಾಗಿದೆ. ಹಾಗಾಗಿ ವಸತಿ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುವುದರಿಂದ ಸಿಂಗಲ್ ವಿಂಡೋ ಮಾದರಿಯಲ್ಲಿ 6 ಲಕ್ಷ ಸಬ್ಸಿಡಿಯನ್ನು ಎಲ್ಲಾ ವರ್ಗದ ಸ್ಲಂ ನಿವಾಸಿಗಳಿಗೂ ನೀಡಬೇಕು ಆಗ್ರಹಿಸಿದರು.
ಸಬ್ಬಿಡಿ ಹೆಚ್ಚಳ:
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತ ಬಿ.ವೆಂಕಟೇಶ್ ಮನವಿ ಸ್ವೀಕರಿಸಿ ಮಾತನಾಡಿದರು. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಎಸ್ಸಿ/ಎಸ್ಟಿ ಸಮುದಾಯಕ್ಕೆ ಈಗಿರುವ 3.5 ಲಕ್ಷ ಸಬ್ಸಿಡಿಗೆ ಬದಲಾಗಿ 4.25 ಲಕ್ಷಕ್ಕೆ ಹೆಚ್ವಳ ಮಾಡಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಸರ್ಕಾರ ಸ್ಲಂ ನಿವಾಸಿಗಳಿಗೆ ನಿರ್ಮಿಸುವ ವಸತಿ ಯೋಜನೆಯ ಸಬ್ಸಿಡಿಯನ್ನು 5 ಲಕ್ಷಕ್ಕೆ ಹೆಚ್ಚಿಸಲು ಚರ್ಚೆ ನಡೆಯುತ್ತಿದೆ. ಸ್ಲಂ ನೀತಿಯನ್ವಯ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲು ವಸತಿ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗುವುದು. ಜಿಲ್ಲಾ ಮಟ್ಟದ ಸಮಸ್ಯೆಗಳ ಕುರಿತು ಮಂಡಳಿ ಅಧಿಕಾರಿಗಳ ಸಮ್ಮುಖದಲ್ಲಿ ಕುಂದುಕೊರತೆ ಸಭೆ ಕರೆಯಲಾಗುವುದು ಎಂದು ಹೇಳಿದರು.
ಪ್ರತಿಭಟನಾ ಸ್ಥಳಕ್ಕೆ ಕಾಂಗ್ರೆಸ್ಪ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಆಗಮಿಸಿ ಸ್ಲಂ ನಿವಾಸಿಗಳ ಹಕ್ಕೊತ್ತಾಯಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳ ಮುಖಂಡರು ಭಾಗಿಯಾಗಿದ್ದರು.


