ಸರ್ವರಿಗೂ ಲಿಂಗಾಯತ ಧರ್ಮದಡಿ ಸಮಾನತೆ ನೀಡಿದ ಬಸವಣ್ಣನ ನಾಡಿನಲ್ಲಿ ಅವರ ತತ್ವಕ್ಕೆ ದ್ರೋಹ ಬಗೆಯುವ ಕೆಲಸ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದರು.
ಪೊರಕೆ ಹಿಡಿದವರು ನೀರು ಮುಟ್ಟುವ ಅವಕಾಶ ಇಲ್ಲದಾಗ, ಸಮಾನತೆ ನೀಡಿ ಲಿಂಗಧಾರಣೆ ಮಾಡಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರ ಆದರು. ಯಾರೂ ಅವರ ಮೇಲೆ ಒತ್ತಡ ಹೇರಿರಲಿಲ್ಲ. ಆದರೆ ಇಂದು ಶರಣ ಸಂಸ್ಕೃತಿಗೆ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ದ್ರೋಹ ಬಗೆದಿದೆ ಎಂದು ದೂರಿದರು.
ಎಲ್ಲ ಮಠಾಧಿಪತಿಗಳನ್ನು ಕೇಳಿದರೆ, ಬಸವಣ್ಣನ ನಾಡಿನಲ್ಲಿ ಅವರ ತತ್ವಕ್ಕೆ ದ್ರೋಹ ಬಗೆಯಲಾಗುತ್ತಿದೆ ಎಂದು ಹೇಳುತ್ತಾರೆ. ಬಸವಣ್ಣನ ತತ್ವ ಮರೆಯುತ್ತಿದ್ದೀರಿ. ಸಿಎಂ ಕೂಡ ಬಸವ ಎಂದು ಹೆಸರಿಟ್ಟುಕೊಂಡು ಬಸವಣ್ಣನ ಅನುಯಾಯಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ಈ ಸರ್ಕಾರ ಮಾಡಲು ಹೊರಟಿರುವುದಾದರೂ ಏನನ್ನು ಎಂದು ಪ್ರಶ್ನಿಸಿದರು.
ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದಾಗ ಬೇರೊಬ್ಬ ದೂರು ನೀಡಿದರೆ ತನಿಖೆ ಮಾಡುತ್ತಾರಂತೆ. ತನಿಖೆ ಮುಗಿದ ನಂತರ ಇಬ್ಬರನ್ನು ನೀವು ಬೇರೆ ಮಾಡುತ್ತೀರಾ? ಬಿಜೆಪಿ ಅಂಬೇಡ್ಕರ್ ಹಾಗೂ ಬಸವಣ್ಣ ತತ್ವದ ವಿಚಾರದ ಬಗ್ಗೆ ಉತ್ತರ ನೀಡಲಿ ಎಂದು ಆಗ್ರಹಿಸಿದರು.
ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ, ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡದರೆ ಕ್ರಮಕೈಗೊಳ್ಳುತ್ತೇವೆ ಎನ್ನುತ್ತಾರೆ. ಇದು ಎಲ್ಲ ಧರ್ಮಕ್ಕೂ ಅನ್ವಯವಾಗುತ್ತದೆಯೇ? ಪರಿಶಿಷ್ಟ ವರ್ಗ, ಪಂಗಡದ ಹಲವರು ಬೌದ್ಧ ಧರ್ಮ ಪಾಲಿಸುತ್ತಿದ್ದಾರೆ. ಖರ್ಗೆ ಬೌದ್ಧ ಧರ್ಮ ನಂಬಿದ್ದಾರೆ. ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಎಂದರೆ ಏನು? ಜೈನರ ಕೈಗೆ ಧರ್ಮಸ್ಥಳದ ನಿಯಂತ್ರಣ ಯಾಕೆ ಹೋಯ್ತು? ಅವರು ಮಂಜುನಾಥ ಸ್ವಾಮಿಯನ್ನು ಆರಾಧಿಸುತ್ತಾರೆ. ಇದು ಅವರವರ ಇಚ್ಛೆ ಎಂದರು.
ನಾವು ಬಿಟ್ ಕಾಯಿನ್, ಶೇ. 40 ಲಂಚ, ಕೋವಿಡ್ ಪರಿಹಾರ, ರೈತರಿಗೆ ಪರಿಹಾರ ಸಿಗದ ವಿಚಾರ, ಉತ್ತರ ಕರ್ನಾಟಕದ ಸಮಸ್ಯೆ ಚರ್ಚಿಸುವ ಮೊದಲು ಈ ಕಾಯ್ದೆ ತರುವ ಆತುರ ಏನಿತ್ತು? ಸಚಿವರು ಉತ್ತರ ನೀಡುವ ಮುನ್ನ ಈ ಮಸೂದೆ ಮಂಡಿಸಿದ್ದು ಯಾಕೆ? ಕಾಗೇರಿ ಸ್ಪೀಕರ್ ಸ್ಥಾನದಲ್ಲಿ ಯಾಕೆ ಕೂತಿದ್ದಾರೆ? ಪಕ್ಷದ ಬಾವುಟ ಹಾಕಿಕೊಂಡು ಕೂರಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದರು.
ಅವರು ಸ್ಪೀಕರ್ ಅಲ್ಲ. ಅವರು ಬಿಜೆಪಿಯ ನಾಯಕರು. ಹೆಸರಿಗೆ ಮಾತ್ರ ಸ್ಪೀಕರ್ ಆಗಿ ಆ ಸ್ಥಾನಕ್ಕೆ ಅಗೌರವ ತರುತ್ತಿದ್ದಾರೆ. ಅದೇ ಕಾರಣಕ್ಕೆ ಮಸೂದೆ ಪ್ರತಿ ಹರಿದು ಹಾಕಿದೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಇದು ನನ್ನ ರಾಜಕೀಯ ಬದ್ಧತೆ. ಇದು ಕೇವಲ ಧರ್ಮದ ವಿಚಾರ ಅಲ್ಲ, ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ವಿರೋಧ ನೀತಿ ಎಂದು ಉತ್ತರಿಸಿದರು.


