ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವಂತೆ ಒತ್ತಾಯಿಸಿದವನು ನಾನೊಬ್ಬನೇ. ಆದರೆ ಇತರ ಬಿಜೆಪಿ ಸಂಸದರು ಮತ್ತು ಶಾಸಕರು ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ಭಯದಿಂದ ಮಾತನಾಡುವ ಧೈರ್ಯ ತೋರುತ್ತಿಲ್ಲ ಎಂದು ಪಿಲಿಭಿತ್ ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.
ಬರೇಲಿಯ ಬಹೇರಿ ಕ್ಷೇತ್ರದಲ್ಲಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದ ಅವರು, ಆಡಳಿತ ಪಕ್ಷದ ಯಾವುದೇ ಶಾಸಕ ಅಥವಾ ಸಂಸದರಿಗೆ ಕಬ್ಬಿಗೆ ಎಂಎಸ್.ಪಿ ಹೆಚ್ಚಿಸುವ ವಿಷಯ ಪ್ರಸ್ತಾಪಿಸುವ ಧೈರ್ಯವಿಲ್ಲ ಎಂದು ತಿಳಿಸಿದರು.
ಬಿಜೆಪಿ ಶಾಸಕರು ಮತ್ತು ಸಂಸದರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಭಯವಿದೆ. ಜನಪ್ರತಿನಿಧಿಗಳು ಜನರ ಪರ ಧ್ವನಿ ಎತ್ತದಿದ್ದರೆ, ಅದನ್ನು ಯಾರು ಕೇಳುತ್ತಾರೆ ಎಂದು ಪ್ರಶ್ನಿಸಿದರು.
ನನಗೆ ಚುನಾವಣೆ ಟಿಕೆಟ್ ಸಿಗದಿದ್ದರೆ ತೊಂದರೆಯಿಲ್ಲ. ನಾನು ಸತ್ಯವನ್ನು ಹೇಳುತ್ತೇನೆ. ಸರ್ಕಾರಗಳು ಬರುತ್ತವೆ ಮತ್ತು ಹೋಗುತ್ತವೆ. ‘ಕ್ರಾಂತಿಕಾರಿ’ ನಾಯಕ ಜನರಿಗೆ ಅನ್ಯಾಯವಾಗುವುದನ್ನು ನೋಡಿಕೊಂಡು ಇರಲು ಸಾಧ್ಯವಿಲ್ಲ ಎಂದು ಹೇಳಿದರು.
ಪಿಲಿಭಿತ್ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ವರುಣ್ ಗಾಂಧಿ, ಜಿಲ್ಲೆಯಲ್ಲಿ ಆಯೋಜಿಸುತ್ತಿರುವ ಕೊಳಲು ಉತ್ಸವಕ್ಕೆ ವ್ಯಾಪಾರಿ ಗಳಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಸಿಡಿಮಿಡಿ ವ್ಯಕ್ತಪಡಿಸಿದರು
ಸಂತೆ ಆಯೋಜಿಸಲು ಸ್ಥಳೀಯ ಆಡಳಿತ ಹಣ ಪಡೆದಿದೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ. ವ್ಯಾಪಾರಿಗಳು ಇತ್ತೀಚೆಗೆ ದೆಹಲಿಯಲ್ಲಿ ತಮ್ಮನ್ನು ಭೇಟಿಯಾಗಿ ಈ ವಿಷಯದ ಬಗ್ಗೆ ವಿವರಿಸಿದರು. ವ್ಯಾಪಾರಿಗಳಿಂದ ಹಣ ವಸೂಲಿ ಮಾಡಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಾನು ವಿರೋಧಿಸುತ್ತೇನೆ ಎಂದರು.
ಪಿಲಿಭಿತ್ ಜನರನ್ನು ನಮ್ಮ ಕುಟುಂಬವೆಂದು ಪರಿಗಣಿಸಿದ್ದೇವೆ. ಈಗಾಗಲೇ ಕೋವಿಡ್, ಸರಕು ಮತ್ತು ಸೇವಾ ತೆರಿಗೆಯಿಂದ ಬಳಲುತ್ತಿರುವ ವ್ಯಾಪಾರಿಗಳ ಮೇಲೆ ಹೆಚ್ಚುವರಿ ಹೊರೆ ಹಾಕುವುದು ದೌರ್ಜನ್ಯ ಎಸಗಿದಂತೆ ಎಂದು ಪತ್ರದಲ್ಲಿ ಹೇಳಿದ್ದಾರೆಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.


