ನವದೆಹಲಿಯಲ್ಲಿ ಡಿಸೆಂಬರ್ ಮೊದಲ ವಾರದಲ್ಲಿ ರೋಹಿಣಿ ಜಿಲ್ಲಾ ನ್ಯಾಯಾಲಯದಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ 47 ವರ್ಷದ ಡಿಆರ್.ಡಿಒ ವಿಜ್ಞಾನಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 9ರಂದು ರೋಹಿಣಿ ಜಿಲ್ಲಾ ನ್ಯಾಯಾಲಯದ ಕೋರ್ಟ್ ರೂಂ ನಂ.102ರಲ್ಲಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದರು. ನಂತರ ದೆಹಲಿ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸಿದ್ದರು.
ಆರೋಪಿಯನ್ನು ಭರತ್ ಭೂಷಣ್ ಕಟಾರಿಯಾ ಎಂದು ಗುರುತಿಸಲಾಗಿದೆ. ಈತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಹಿರಿಯ ವಿಜ್ಞಾನಿಯಾಗಿದ್ದು ಶುಕ್ರವಾರ ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಕಟಾರಿಯಾ ತನ್ನ ನೆರೆಹೊರೆಯವರನ್ನು ಕೊಲ್ಲಲು ಬಯಸಿದ್ದು ನ್ಯಾಯಾಲಯದ ಒಳಗೆ ಟಿಫಿನ್ ಬಾಕ್ಸ್ನಲ್ಲಿ ಸ್ಫೋಟಕವನ್ನು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಕಟಾರಿಯಾ ಘಟನೆಯ ದಿನ ಬೆಳಗ್ಗೆ 9.33 ಕ್ಕೆ ಎರಡು ಬ್ಯಾಗ್ಗಳೊಂದಿಗೆ ನ್ಯಾಯಾಲಯ ಪ್ರವೇಶಿಸಿದ್ದಾನೆ. ಅದರಲ್ಲಿ ಒಂದನ್ನು ಅವನು ನ್ಯಾಯಾಲಯದ ಕೊಠಡಿಯೊಳಗೆ ಬಿಟ್ಟು ಬೆಳಗ್ಗೆ 10.35ಕ್ಕೆ ಕೋರ್ಟ್ ಆವರಣದಿಂದ ನಿರ್ಗಮಿಸಿದ್ದ ಎಂದು ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ಥಾನ ಹೇಳಿಕೆ ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಇಬ್ಬರು ಕಕ್ಷಿದಾರರು ಪರಸ್ಪರರ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಅವರು ನೆರೆಹೊರೆಯವರಾಗಿದ್ದು ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಟಾರಿಯಾ ವಕೀಲರ ವಿರುದ್ಧ ದ್ವೇಷ ಹೊಂದಿದ್ದ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.


