ಕೇಂದ್ರ ಸರ್ಕಾರ ಕಿತ್ತುಕೊಂಡಿರುವ ಜಮ್ಮು ಮತ್ತು ಕಾಶ್ಮೀರದ ಹಕ್ಕುಗಳ ಮರುಸ್ಥಾಪನೆಗೆ ಹೋರಾಟ ನಡೆಸಬೇಕು ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಯುವಕರಿಗೆ ಕರೆ ನೀಡಿದ್ದಾರೆ. ಕಲ್ಲು ಮತ್ತು ಬಂದೂಕು ಬಿಟ್ಟು ಅಹಿಂಸೆಯ ಮಾರ್ಗದ ಮೂಲಕ ಹಕ್ಕುಗಳ ಮರುಸ್ಥಾಪನೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ನೀವು ಪರಿಸ್ಥಿತಿ ಅರ್ಥಮಾಡಿಕೊಳ್ಳಬೇಕು ಮತ್ತು ನಮ್ಮ ಧ್ವನಿಯಾಗಬೇಕು. ನೀವು ಇಂದು ಧೈರ್ಯ ತೋರದಿದ್ದರೆ ನಮ್ಮ ಭೂಮಿ, ಉದ್ಯೋಗ ಮತ್ತು ಖನಿಜಗಳು ಹೊರಗಿನವರ ಪಾಲಾಗುತ್ತವೆ. ಆಗ ಮುಂದಿನ ಪೀಳಿಗೆ ಇದನ್ನು ಪ್ರಶ್ನಿಸುತ್ತದೆ. ಹಾಗಾಗಿ ನಾವು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಗಡಿ ಜಿಲ್ಲೆ ರಜೌರಿಯಲ್ಲಿ ನಡೆದ ಯುವ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೆಹಬೂಬಾ, ಹಕ್ಕುಗಳಿಗಾಗಿ ಹೋರಾಟ ಮಾಡಿದಾಗ ಹತ್ಯೆಯಾದವರು ನಮ್ಮವರು. 900 ಮಂದಿ ಕಾಶ್ಮೀರಿ ಯುವಕರನ್ನು ಬಂಧಿಸಲಾಯಿತು. ಗೃಹ ಸಚಿವರು ಭೇಟಿ ನೀಡಿದಾಗ 1 ಸಾವಿರ ಯುವಕರನ್ನು ವಶಕ್ಕೆ ಪಡೆದರು. ಹೀಗಾಗಿ ನಮ್ಮ ಜೈಲುಗಳು ತುಂಬಿ ತುಳುಕುತ್ತಿವೆ. ಆದ್ದರಿಂದ ಬಂಧಿತರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಹೇಳಿದರು.
ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ರೈತರು ಶಾಂತಿಯುತ ಹೋರಾಟ ನಡೆಸಿದರು. ಸರ್ಕಾರ ಕಾನೂನುಗಳನ್ನು ರದ್ದು ಮಾಡಿತು. ಹಾಗೆಯೇ 30 ವರ್ಷದಿಂದ ಸಾವಿರಾರು ಮಂದಿ ತ್ಯಾಗ ಮಾಡಿದ್ದು, ಕಾಶ್ಮೀರ ಸಮಸ್ಯೆಯನ್ನು ಯಾಕೆ ಶಾಂತಿಯುತವಾಗಿ ಪರಿಹರಿಸುತ್ತಿಲ್ಲ ಎಂದು ಯುವಕರನ್ನು ಪ್ರಶ್ನಿಸಿದರು.
ಬಿಜೆಪಿ ಮುಸ್ಲಿಂ ವಿರೋಧಿ ಎಂದು ಆರೋಪಿಸಿದ ಅವರು, ಅವರಿಗೆ, ನಾವು ಬಾಬರ್ ಮತ್ತು ಔರಂಗಜೇಬ್, ಗೆದ್ದಲು ಮತ್ತು ಕ್ಯಾನ್ಸರ್ ಮಕ್ಕಳು. ಇದನ್ನು ವಿರೋಧಿಸಬೇಕು ಎಂದರು.
ಆಗಸ್ಟ್ 5, 2019 ರ ಕಾನೂನುಬಾಹಿರ ನಿರ್ಧಾರ ಜನರನ್ನು ವಿಭಜಿಸಲು ಪ್ರಯತ್ನಿಸುತ್ತದೆ. ಹಾಗಾಗಿ ನಾನು ಎಂದಿಗೂ ಕಲ್ಲು ಅಥವಾ ಬಂದೂಕು ಬಳಸಿ ಹೋರಾಡಬೇಕೆಂದು ಹೇಳುವುದಿಲ್ಲ. ಈ ಹಾದಿ ಹಿಡಿದವರ ವಿರುದ್ಧ ಅವರ ಬಳಿ ಗುಂಡು ಸಿದ್ಧವಾಗಿದೆ ಎಂದು ನನಗೆ ತಿಳಿದಿದೆ.
ನೀವು ಧ್ವನಿ ಎತ್ತಬೇಕು ಮತ್ತು ನಮ್ಮೊಂದಿಗೆ ಸೇರಬೇಕು. ಕೇಂದ್ರ ಕಿತ್ತುಕೊಂಡ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕ ಹೋರಾಟದಲ್ಲಿ ನಡೆಯಬೇಕು. ಅಹಿಂಸಾತ್ಮಕ ಹೋರಾಟ ಮಾಡಬೇಕು. ಆ ಮೂಲಕ ಹಕ್ಕುಗಳನ್ನು ಮರುಸ್ಥಾಪಿಸಬೇಕು ಎಂದು ಕರೆ ನೀಡಿದರು.


