ದೇಶದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನಗೊಂಡು ರಾವತ್ ಸೇರಿ 13 ಮಂದಿ ಸಾವಿಗೆ ಕಾರಣವಾಗಿರುವುದು ಹಲ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಉನ್ನತಾಧಿಕಾರದಲ್ಲಿರುವ ಮುಖ್ಯಸ್ಥರೊಬ್ಬರು ಪ್ರಯಾಣಿಸುವ ಸೇನಾ ಹೆಲಿಕಾಪ್ಟರ್ ಸುವ್ಯವಸ್ಥಿತವಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆದಿರಲಿಲ್ಲವೇ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆಗಳು ಆರಂಭವಾಗಿವೆ.
ಸೇನಾ ಮುಖ್ಯಸ್ಥರು ಪ್ರಯಾಣಿಸುವ ಹೆಲಿಕಾಪ್ಟರ್ ಬಗ್ಗೆ ಸಮಗ್ರ ತಪಾಸಣೆ ಮಾಡಲಾಗುತ್ತಿತ್ತು. ಸ್ಟ್ಯಾಂಡ್ ಬೈ ಹೆಲಿಕಾಪ್ಟರ್ ಕೂಡ ಇರುತ್ತಿತ್ತು. ಹವಾಮಾನ ಪರಿಸ್ಥಿತಿ ಪರಿಶೀಲಿಸಲಾಗುತ್ತಿತ್ತು. ಆದರೆ ವೆಲ್ಲಿಂಗ್ಟನ್ ನಲ್ಲಿ ಪ್ರತಿಕೂಲ ಹವಾಮಾನ ಇರುವುದೇ ಆಗಿದ್ದರೆ ಹೆಲಿಕಾಪ್ಟರ್ ಪ್ರಯಾಣ ಹಿಂತೆಗೆದುಕೊಳ್ಳಬಹುದಿತ್ತು ಎಂದು ಭಾರತೀಯ ವಾಯುಪಡೆಯ ಮಾಜಿ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಐಎಎನ್ಎಸ್ ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹೆಲಿಕಾಪ್ಟರ್ ಪತನಕ್ಕೆ ತಾಂತ್ರಿಕ ದೋಷ ಅಥವಾ ಪ್ರತಿಕೂಲ ಹವಾಮಾನ ಪರಿಸ್ಥಿತಿಯೂ ಕಾರಣವಾಗಿರಬಹುದು ಎಂದು ಮಾಜಿ ಅಧಿಕಾರಿ ಹೇಳಿದ್ದಾರೆ.
ಹೆಲಿಕಾಪ್ಟರ್ ಪತನದ ಬಗ್ಗೆ ಬೆಳಕು ಚೆಲ್ಲಲು ಹೆಲಿಕಾಪ್ಟರ್ ನಲ್ಲಿ ಕಪ್ಪು ಪೆಟ್ಟಿಗೆ ಇರುತ್ತದೆ. ಅದರ ಅಧ್ಯಯನದಿಂದ ಪತನಕ್ಕೆ ಕಾರಣಗಳು ತಿಳಿಯಬಹುದು ಎಂದು ಹೇಳಲಾಗುತ್ತಿದೆ.
ವೆಲ್ಲಿಂಗ್ಟನ್ ಪ್ರದೇಶದಲ್ಲಿ ಮಂಜು ಕವಿದಿತ್ತು. ಹಾಗಾಗಿ ಹೆಲಿಕಾಪ್ಟರ್ ಮರಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿರಬಹುದು ಎಂದು ಪ್ರತ್ಯಕ್ಷದರ್ಶಿಯ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
ಸ್ಥಳಕ್ಕೆ ಬಂದು ನೋಡಿದಾಗ ಹೆಲಿಕಾಪ್ಟರ್ ತಲೆಕೆಳಗಾಗಿದ್ದು ತಕ್ಷಣವೇ ಬೆಂಕಿ ಹೊತ್ತಿಕೊಂಡಿತು ಎಂದು ಹೇಳಲಾಗಿದೆ. ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ನೆರವಾಗಿದ್ದಾರೆ.
ಹೆಲಿಕಾಪ್ಟರ್ ಪತನಕ್ಕೆ ಕಾರಣಗಳನ್ನು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಪಡೆ ತಿಳಿಸಿದೆ.
ಹೆಲಿಕಾಪ್ಟರ್ ನಲ್ಲಿ ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರ್ಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ನಾಯಕರ್ ವಿವೇಕ್ ಕುಮಾರ್, ನಾಯಕರ್ ಬಿ. ಸಾಯಿ ತೇಜಾ, ಹವಾಲ್ದಾರ್ ಸತ್ಪಾಲ್ ಮತ್ತು ಪೈಲಟ್ ಗಳು ಇದ್ದರು ಎಂದು ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.


