ಸೇನಾ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿ 13 ಮಂದಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿ ನೀಲಗಿರಿಯಲ್ಲಿ ನಡೆದಿದೆ.
ಬದುಕುಳಿದ ಏಕೈಕ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ತೀವ್ರ ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎನ್.ಡಿ.ಟಿವಿ ವರದಿ ಮಾಡಿದೆ.
ಜನರಲ್ ಬಿಪಿನ್ ರಾವತ್, ಶ್ರೀಮತಿ ಮಧುಲಿಕಾ ರಾವತ್ ಮತ್ತು ಹೆಲಿಕಾಪ್ಟರ್ ನಲ್ಲಿದ್ದ ಇತರೆ 11 ಜನರು ದುರದೃಷ್ಟಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಈಗ ಖಚಿತಪಡಿಸಲಾಗಿದೆ ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ.
ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಎಂದು ವಾಯುಪಡೆ ತಿಳಿಸಿದೆ.
ಜನರಲ್ ರಾವತ್ ಅವರಿದ್ದ ಮಿ-17 ವಿ5 ಹೆಲಿಕಾಪ್ಟರ್ ತಮಿಳುನಾಡಿನ ಕೂನೂರ್ ಬಳಿ ಅಪಘಾತಕ್ಕೀಡಾಗಿದೆ ಎಂದು ಐಎಎಫ್ ಮಧ್ಯಾಹ್ನ 2ಗಂಟೆಗೆ ಮೊದಲು ದೃಢಪಡಿಸಿತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೊಯಮತ್ತೂರಿನ ಸುಲೂರಿನ ವಾಯುಸೇನೆ ನೆಲೆಯಿಂದ ಬೆಳಗ್ಗೆ 11.45ಕ್ಕೆ ನೀಲಗಿರಿ ಬೆಟ್ಟದ ವೆಲ್ಲಿಂಗ್ಟನ್ ಗೆ ಹೆಲಿಕಾಪ್ಟರ್ ಟೇಕಾಪ್ ಆದ ಕೆಲವೇ ಕ್ಷಣಗಗಳಲ್ಲಿ ಪತನಗೊಂಡಿದೆ. ವಿಲ್ಲಿಂಗ್ಟನ್ ನಲ್ಲಿರುವ ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜಿಗೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಹೋಗುತ್ತಿದ್ದರು.


