ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ಪಾಲನೆ ಮಾಡಿದ್ದು ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ತಲಾ ಒಂದು ಒಂದು, ಹಿಂದುಳಿದ ವರ್ಗಕ್ಕೆ ಐದು, ಇಬ್ಬರು ಅಲ್ಪಸಂಖ್ಯಾತರು ಮತ್ತು ಓರ್ವ ಮಹಿಳೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ವಿರೋಧಿಸಿ ಬಿಜೆಪಿ ಮತ್ತು ಬಿಜೆಪಿ ರಾಜ್ಯಸಭಾ ಸದಸ್ಯ ರಾಮಾ ಜೋಯಿಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಸುಪ್ರೀಂಕೋರ್ಟ್ ಮನವಿ ತಿರಸ್ಕರಿಸಿದ್ದರಿಂದ ಮೀಸಲಾತಿ ಸೌಲಭ್ಯ ಉಳಿದಿದೆ. ಹಾಗಾಗಿ ಬಿಜೆಪಿಗೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ಸೋಲಿನ ಭಯದಿಂದ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಮುಂದೂಡಿದೆ. ಹಾಗಾಗಿ ಈ ಎರಡು ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರೇ ಇಲ್ಲ. ಮತಹಕ್ಕು ಇಲ್ಲವಾಗಿದೆ. ಸರ್ಕಾರ ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿದೆ ಎಂದು ದೂರಿದರು.
ಬಿಜೆಪಿ ಆಡಳಿತದಲ್ಲಿ ಬಡ ರೈತ ಇನ್ನಷ್ಟು ಬಡವನಾಗುತ್ತಿದ್ದಾನೆ. ಅದಾನಿ, ಅಂಬಾನಿಯವರ ಆಸ್ತಿ ದುಪ್ಪಟ್ಟಾಗುತ್ತಿದೆ. ಉಚಿತ ಅಕ್ಕಿ ಪ್ರಮಾಣ ಕಡಿಮೆ ಮಾಡಲಾಗುತ್ತದೆ. ರೈತರ ಸಾಲ ಮನ್ನ ಮಾಡಲ್ಲ. ಆದರೆ ಉದ್ಯಮಿಗಳ ಸಾಲ ಮನ್ನಾ ಮಾಡಿ ಕಾರ್ಪೋರೇಟ್ ತೆರಿಗೆ ಇಳಿಕೆ ಮಾಡುತ್ತಾರೆ. ಹಾಗಾದರೆ ಸರ್ಕಾರ ಯಾರ ಪರವಾಗಿದೆ ಎಂದು ಪ್ರಶ್ನಿಸಿದರು.
ಅತಿವೃಷ್ಟಿಗೆ ಇಲ್ಲಿಯವರೆಗೆ ಪರಿಹಾ ನೀಡಿಲ್ಲ. ಮನೆ, ಬೆಳೆ ಕಳೆದುಕೊಂಡವರಿಗೆ ಪೈಸೆ ಪರಿಹಾರ ಸಿಕ್ಕಿಲ್ಲ. ಕೊರೊನದಿಂದ ಸತ್ತವರಿಗೆ ಪರಿಹಾರ ಕೊಟ್ಟಿಲ್ಲ. ವೆಂಟಿಲೇಟರ್, ಮಾಸ್ಕ್, ಔಷಧಿ ಖರೀದಿಯಲ್ಲಿ ಭ್ರಷ್ಟಾಚಾರ ಎಸಗಿದ್ದರು. ಇದು ನಿರ್ಲಜ್ಜ ಸರ್ಕಾರ. ಭ್ರಷ್ಟ ಸರ್ಕಾರ ತೊಲಗಿದಾಗಲೇ ಜನರಿಗೆ ನಮ್ಮದಿ ಎಂದರು.
ಬಿಜೆಪಿ ಸರ್ಕಾರದಲ್ಲಿ ಲಂಚ ಕೊಡದಿದ್ದರೆ ಯಾವ ಅಧಿಕಾರಿಯ ವರ್ಗಾವಣೆಯೂ ಸಾಧ್ಯವಿಲ್ಲ, ಕಡತಗಳು ಇರುವ ಜಾಗದಿಂದ ಅಲ್ಲಾಡುವುದಿಲ್ಲ. ಅಭಿವೃದ್ಧಿ ಕೆಸಲಗಳು ಮುಂದಕ್ಕೆ ಸಾಗಲ್ಲ. ಇದು ಲಂಚಕೋರ ಸರ್ಕಾರ ಎಂದು ಟೀಕಿಸಿದರು.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಟ್ಟಿಲ್ಲ. ಕೊರೊನ ಕಾಲದಲ್ಲಿ ಕೆಲಸ ನಿರ್ವಹಿಸಿದ ವೈದ್ಯರಿಗೆ ಹೆಚ್ಚುವರಿ ವೇತನ ಕೊಟ್ಟಿಲ್ಲ. ಉದ್ಯೋಗ ಖಾತ್ರಿ ಕೂಲಿ ಕೊಟ್ಟಿಲ್ಲ. ಇದೇ ಸರ್ಕಾರ ಮುಂದುವರೆದರೆ ಸಂಬಳ, ಪಿಂಚಣಿ ಕೊಡೋಕು ಹಣವಿರಲ್ಲ ಆರೋಪಿಸಿದರು.
ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ನನಗೆ ವೈಯಕ್ತಿ ದ್ವೇಷವಿಲ್ಲ. ಸೈದ್ಧಾಂತಿಕ ವಿರೋಧ ಮಾಡಿದ್ದೇನೆ. ನನಗೆ ಜ್ವರವೂ ಇಲ್ಲ. ಜೆಡಿಎಸ್ ಜಪ ಮಾಡಿದರೆ ಜ್ವರ ವಾಸಿಯಾಗೋದು ಇಲ್ಲ. ಆರ್.ಎಸ್.ಎಸ್. ಬೈಯ್ಯುವ ಕುಮಾರಸ್ವಾಮಿ ಬಿಜೆಪಿ ಜೊತೆ ಸರ್ಕಾರ ಮಾಡಿದ್ದು, ಒಳಒಪ್ಪಂದ ಮಾಡಿಕೊಳ್ಳುವುದನ್ನು ವಿರೋಧಿಸಿದ್ದೇನೆ. ಕುಮಾರಸ್ವಾಮಿ ಸೂಕ್ತ ಉತ್ತರ ನೀಡಲಿ ಎಂದರು.


