ಭೀಮಾ ಕೊರೆಗಾವ್ ಪ್ರಕರಣದ ಆರೋಪಿ ಮಕ್ಕಳು ಮತ್ತು ಆದಿವಾಸಿ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರನ್ನು ಡಿಫಾಲ್ಟ್ ಜಾಮೀನಿನ ಮೇಲೆ ಬಿಡುಗಡೆಗೆ ಎನ್ಐಎ ವಿಶೇಷ ನ್ಯಾಯಾಲಯ ಕೆಲವು ಷರತ್ತುಗಳನ್ನು ವಿಧಿಸಿ ಆದೇಶ ನೀಡಿದೆ.
50 ಸಾವಿರ ಬಾಂಡ್ ಮತ್ತು ಅದಕ್ಕಿಂತ ಹೆಚ್ಚು ಭದ್ರತೆ ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ. ಸುಧಾ ಭಾರದ್ವಾಜ್ ಆಪರಾಧಿಕ ವಿಚಾರಣೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಮುದ್ರಣ, ವಿದ್ಯುನ್ಮಾನ, ಸಾಮಾಜಿಕ ಸೇರಿ ಯಾವುದೇ ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ ನೀಡಬಾರದು ಎಂದು ಆದೇಶಿಸಿದೆ.
ಈ ಪ್ರಕರಣದ ಸಹ ಆರೋಪಿಗಳನ್ನು ಸಂಪರ್ಕಿಸಬಾರದು ಮತ್ತು ಇದೇ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬೇರೆ ವ್ಯಕ್ತಿಗಳನ್ನು ಸಂಪರ್ಕಿಸಬಾರದು ಮತ್ತು ಯಾವುದೇ ಅಂತಾರಾಷ್ಟ್ರೀಯ ಕರೆಗಳನ್ನು ಮಾಡಬಾರದು ಎಂದು ಎನ್ಐಎ ವಿಶೇಷ ನ್ಯಾಯಾಲಯ ಷರತ್ತು ವಿಧಿಸಿದೆ.
ಸುಧಾ ಭಾರದ್ವಾಜ್ ಅವರು ಎನ್ಐಎ ವಿಶೇಷ ನ್ಯಾಯಾಲಯ ಇರುವ ಮುಂಬೈ ವ್ಯಾಪ್ತಿಯಲ್ಲೇ ವಾಸ ಮಾಡಬೇಕು. ಯಾವುದೇ ಕಾರಣಕ್ಕೂ ನ್ಯಾಯಾಲಯದ ಅನುಮತಿ ಪಡೆಯದೆ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗೆ ಹೋಗಬಾರದು ಎಂದು ನಿರ್ದೇಶನ ನೀಡಿದೆ.
ವಾಸದ ಸ್ಥಳವನ್ನು ತೊರೆಯುವ ಮೊದಲು ಎನ್ಐಎ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅವರ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳ ಜೊತೆಯಲ್ಲಿ ಸಂಪರ್ಕ ಹೊಂದಿರಬೇಕು ಎಂದು ತಿಳಿಸಿದೆ.
ಅವರ ಹೊಸ ವಾಸ ಸ್ಥಳ, ಸಂಪರ್ಕಿಸಬೇಕಾದ ವಿವರ, ಅವರೊಂದಿಗೆ ಉಳಿದುಕೊಂಡಿರುವ ವ್ಯಕ್ತಿಗಳ ಸಂಪೂರ್ಣ ಮಾಹಿತಿಯ ಜೊತೆಗೆ ಭದ್ರತೆ ಸಂಪೂರ್ಣ ವಿವರಗಳನ್ನು ನೀಡಬೇಕು ಎಂದು ಕೋರ್ಟ್ ಹೇಳಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ವಿಳಾಸದ ಭೌತಿಕ ಸ್ಥಳ ಮತ್ತು ವರ್ಚುಯಲ್ ಪರೀಕ್ಷೆ ನಡೆಸಲು ಅವರ ಗುರುತಿಗಾಗಿ ಎರಡು ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಿದೆ. ಪ್ರತಿಯೊಂದು ದಿನಾಂಕದಂದೂ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗಿಯಾಗಬೇಕು. ವಾಟ್ಸಪ್ ವಿಡಿಯೋ ಕಾಲ್ ಮೂಲಕ ಪ್ರತಿ ಹದಿನೈದು ದಿನಕ್ಕೊಮ್ಮೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಹೇಳಿದೆ.
ಬಾಂಬೆ ಹೈಕೋರ್ಟ್ ಜಾಮೀನು ನೀಡಿದ ಬಳಿಕ ವಿಶೇಷ ನ್ಯಾಯಾಲಯ ಷರತ್ತುಗಳನ್ನು ವಿಧಿಸಿದೆ.


