ಬಿಟ್ ಕಾಯಿನ್ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆದರೆ ಬಸವರಾಜ ಬೊಮ್ಮಾಯಿ ಬದಲಾವಣೆಯಾಗಿ ಮೂರನೇ ಮುಖ್ಯಮಂತ್ರಿ ಅಧಿಕಾರಕ್ಕೆ ಬರುತ್ತಾರೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಪುನರುಚ್ಛರಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣದ ಕುರಿತು ಮಾತನಾಡಿದ್ದಕ್ಕೆ ಬಿಜೆಪಿ ಮುಖಂಡರು ವ್ಯಂಗ್ಯವಾಡಿ, ವ್ಯಕ್ತಿಗತ ಟೀಕೆ ಮಾಡಿದರು. ಉತ್ತರ ಸಿಗದಿದ್ದಾಗ ವ್ಯಕ್ತಿಗತ ವಿಷಯಕ್ಕೆ ಕೈಹಾಕುತ್ತದೆ. ಇದು ಬಿಜೆಪಿ ತಂತ್ರ ಎಂದು ಟೀಕಿಸಿದರು.
ಬಿಟ್ ಕಾಯಿನ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು. ಪ್ರಧಾನಿ ಆ ವಿಷಯ ಬಿಟ್ಟು ಹಾಕಿ ಎಂದು ಬೊಮ್ಮಾಯಿ ಅವರಿಗೆ ಅಭಯ ನೀಡುತ್ತಿದ್ದಂತೆ ಮುಖ್ಯಮಂತ್ರಿಗಳು ಈ ವಿಷಯಕ್ಕೆ ಮಹತ್ವ ನೀಡಬೇಕಿಲ್ಲ ಅಂದರು. ಹಾಗಾದರೆ ಪ್ರಧಾನಿ ಬಳಿ ಹೋಗುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.
ಪ್ರಧಾನಿ ಬಳಿ ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ ನಷ್ಟದ ಬಗ್ಗೆ ಹಣ ಬಿಡುಗಡೆ ಮಾಡುವಂತೆ ಕೇಳಬಹುದಿತ್ತು. ಸುಮ್ಮನೆ ಭೇಟಿ ಮಾಡಿದ್ದಾದರೂ ಏಕೆ? ಬಿಟ್ ಕಾಯಿನ್ ಪ್ರಕರಣದ ತನಿಖೆ ಸರಿದಿಕ್ಕಿನಲ್ಲಿ ನಡೆಸದೆ ಇದರಲ್ಲಿ ಕಾಂಗ್ರೆಸ್ ಮುಖಂಡರು ಇದ್ದಾರೆಂದು ಹೆಳುವ ಮೂಲಕ ಸಿಎಂ ಸಂಧಾನಕ್ಕೆ ಮುಂದಾಗಿದ್ದಾರೆ ಎಂಬ ಅನುಮಾನವಿದೆ ಎಂದು ಆರೋಪಿಸಿದರು.
ಶ್ರೀಕೃಷ್ಣ ಹೈಡ್ರೋ ಗಾಂಜಾವನ್ನು ಬಿಟ್ ಕಾಯನ್ ಮೂಲಕ ತರಿಸಿಕೊಂಡು ಮಾರಾಟ ಮಾಡುತ್ತಿದ್ದ. ಶ್ರೀಕೃಷ್ಣನ ವಿರುದ್ದ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿ 3 ಬಾರಿ ಪೊಲೀಸರ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ. ನ್ಯಾಯಾಧೀಶರ ಮುಂದೆಯೂ ಹಾಜರು ಪಡಿಸಲಾಗುತ್ತದೆ. ಇದಾದ ನಂತರವೂ ಸತ್ಯವೇನು ಎಂಬ ಮಾಹಿತಿ ಜನರಿಗೆ ತಿಳಿಸುತ್ತಿಲ್ಲ ಎಂದರು.
ಬಿಟ್ ಕಾಯಿನ್ ಕುರಿತು ಸರ್ಕಾರ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ತನಿಖೆ ದಿಕ್ಕುತಪ್ಪುವಂತೆ ಮಾಡುತ್ತಿದೆ. ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಸತ್ಯ ಹೊರಬರಬೇಕು ಎಂದು ಆಗ್ರಹಿಸಿದರು


