ಭಾರತ ಸ್ವಾತಂತ್ರ್ಯವನ್ನು ಭಿಕ್ಷೆ ಹೋಲಿಸಿ ಹೇಳಿರುವ ನಟಿ ಕಂಗನಾ ರಣಾವತ್ ಅವರನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ಹಾಗಾಗಿ ಅವರಿಗೆ ನೀಡಿರುವ ಪದ್ಮಶೀ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಅದು ಒತ್ತಾಯಿಸಿದೆ.
ಗುರುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಂಗನಾ 1947ರಲ್ಲಿ ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯ ಸ್ವಾತಂತ್ರ್ಯವಲ್ಲ ಭಿಕ್ಷೆ. ನಮಗೆ 2014ರಲ್ಲಿ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್, ಕಂಗನಾ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ಪದ್ಮ ಪ್ರಶಸ್ತಿಗೆ ಅರ್ಹರಲ್ಲದವರಿಗೆ ಗೌರವ ನೀಡಿದರೆ ಏನಾಗುತ್ತದೆ ಎಂಬುದನ್ನು ಕಂಗನಾ ಹೇಳಿಕೆ ತೋರಿಸುತ್ತದೆ. ಕಂಗನಾ ಸ್ವಾತಂತ್ರ್ಯ ಚಳವಳಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಅವಮಾನ ಮಾಡಿದ್ದು ಭಾರತೀಯರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವ ಮಹಿಳೆಗೆ ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿ ನೀಡಿ ಅಂತಹವರನ್ನು ಉತ್ತೇಜಿಸುತ್ತಿದ್ದು ಆಕೆಗೆ ನೀಡಿರುವ ಪದ್ಮ ಪ್ರಶಸ್ತಿ ಹಿಂಪಡೆಯಬೇಕು ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ಆನಂದ್ ಶರ್ಮ, ಕಂಗನಾಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ. ಪ್ರಶಸ್ತಿ ನೀಡುವ ಮೊದಲು ವ್ಯಕ್ತಿಯ ಮೌಲ್ಯಮಾಪನ ಮಾಡಬೇಕು. ಇದರಿಂದ ಭವಿಷ್ಯದಲ್ಲಿ ಅಂತಹ ವ್ಯಕ್ತಿಗಳು ದೇಶ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ ತೋರಿಸುವುದು ತಪ್ಪುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಸಂಸದ ವರುಣ್ ಗಾಂಧಿ ನಟಿ ಕಂಗನಾ ಒಮ್ಮೆ ಮಹಾತ್ಮ ಗಾಂಧಿಯವರ ತ್ಯಾಗವನ್ನು ಅವಮಾನಿಸುವುದು, ಕೆಲವೊಮ್ಮ ಅವರ ಹಂತಕ ಗೋಡ್ಸೆಯನ್ನು ಹೊಗಳುವುದು ಹುಚ್ಚುತನ ಮತ್ತು ದೇಶದ್ರೋಹ ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟಿ ಅವರು ಕಂಗನಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು ಮತ್ತು ನಾಗರಿಕರು ಮಾಡಿದ ತ್ಯಾಗಕ್ಕೆ ಅಪಮಾನ ಮಾಡಿದ್ದಾರೆ. ಇದು ಬಿಜೆಪಿ ಮುಖಂಡರು ನಕಲಿ, ಹುಸಿ ರಾಷ್ಟ್ರೀಯತೆಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಮಹಾರಾಷ್ಟ್ರ ಸಚಿವ ನವಾಬ್ ಕಲಿಕ್ “ಕಂಗನಾ ಹೇಳಿಕೆ ನೀಡುವ ಮೊದಲು ಮಲಾನ ಕ್ರೀಮ್ ಅನ್ನು ಭಾರಿ ಪ್ರಮಾಣದಲ್ಲಿ ತೆಗೆದುಕೊಂಡಂತೆ ತೋರುತ್ತಿದೆ. ಕಂಗನಾ ಹೇಳಿಕೆ ಖಂಡನೀಯ. ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.


