ಕಾಂಗ್ರೆಸ್ ಪಕ್ಷ ರಾಜಕೀಯವನ್ನು ಗಂಭೀರವಾಗಿ ಪರಿಗಣಿಸದಿರುವುದು ಮತ್ತು ಹಳೆಯ ಪಕ್ಷ ತೀರ್ಮಾನಗಳನ್ನು ತೆಗೆದುಕೊಳ್ಳದೇ ಇರುವುದು ಪ್ರಧಾನಿ ನರೇಂದ್ರ ಮೋದಿ ಬಲಿಷ್ಟರಾಗಲು ಕಾರಣ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಗೋವಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲವರನ್ನೂ ಈಗ ಮಾಧ್ಯಮಗಳ ಮುಂದೆ ಹೇಳುವುದಿಲ್ಲ. ಅವರು (ಕಾಂಗ್ರೆಸ್) ರಾಜಕೀಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಹಾಗಾಗಿ ಮೋದಿ ಬಲಿಷ್ಟರಾಗಲು ಕಾಂಗ್ರೆಸ್ ಕಾರಣ ಎಂದು ದೂರಿದ್ದಾರೆ.
ಒಂದು ತೀರ್ಮಾನವನ್ನು ಸಮರ್ಥವಾಗಿ ತೆಗೆದುಕೊಳ್ಳದೆ ಇರುವುದರಿಂದ ದೇಶ ಬಳಲುವಂತೆ ಆಗಿದೆ. ಕಾಂಗ್ರೆಸ್ ಬಿಜೆಪಿ ವಿರುದ್ಧ ಹೋರಾಡುವ ಅವಕಾಶಗಳನ್ನು ಪಡೆಯುತ್ತಿಲ್ಲ. ಆದರೆ ಅವರು(ಕಾಂಗ್ರೆಸ್) ನನ್ನ ವಿರುದ್ಧ ನನ್ನ ರಾಜ್ಯದಲ್ಲೇ ಸ್ಪರ್ಧಿಸುತ್ತಾರೆ. ನನ್ನ ಪಕ್ಷದ ವಿರುದ್ಧವೇ ಸ್ಪರ್ಧಿಸುತ್ತಾರೆ. ಮುಂದೆ ಹಾಗೆ ಯೋಚಿಸುವುದು ಬೇಡ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಸೀಟು ಹಂಚಿಕೆ ಮಾಡಿಕೊಳ್ಳುತ್ತೇನೆ. ಗೋವಾದಲ್ಲಿ ನಮ್ಮ ಪಕ್ಷ 40 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದರು.
ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಟವಾಗಬೇಕು. ಒಕ್ಕೂಟ ವ್ಯವಸ್ಥೆಯನ್ನು ಬಲಿಷ್ಟಪಡಿಸಬೇಕು. ರಾಜ್ಯಗಳು ಬಲಿಷ್ಟವಾಗಬೇಕು. ರಾಜ್ಯಗಳು ಬಲಿಷ್ಟವಾದರೆ ಕೇಂದ್ರವೂ ಬಲಿಷ್ಟವಾಗಲಿದೆ ಎಂದು ವಿವರಿಸಿದರು.