ಬೆಂಗಳೂರಿನ ಪ್ರಮುಖ ರಸ್ತೆಗಳು ಸೇರಿದಂತೆ ನಗರದ ಯಾವುದೇ ರಸ್ತೆಗಳನ್ನು ನೋಡಿದರೂ ಗುಂಡಿಗುದ್ರಗಳಿಂದ ತುಂಬಿ ಸಾವು ನೋವುಗಳು ಸಂಭವಿಸಿದ್ದರೂ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ. ಬೆಂಗಳೂರಿನಲ್ಲಿ ಏಳು ಮಂದಿ ಸಚಿವರಿದ್ದರೂ ರಸ್ತೆಗುಂಡಿಗಳು ಮುಚ್ಚಿಸುವ ಗೋಜಿಗೆ ಹೋಗುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಬೆಂಗಳೂರು ನಗರದಲ್ಲೇ ಅಶೋಕ್, ಅಶ್ವತ್ಥನಾರಾಯಣ, ಮುನಿರತ್ನ, ಗೋಪಾಲಯ್ಯ, ಎಚ್.ಟಿ. ಸೋಮಶೇಖರ್ ಸೇರಿ ಏಳು ಮಂದಿ ಸಚಿವರಿದ್ದಾರೆ. ರಸ್ತೆಗಳ ಗುಂಡಿಗುದ್ರಗಳನ್ನು ಮುಚ್ಚಿಸುವ ಕೆಲಸವಂತೂ ಆಗಿಲ್ಲ. ಇವರ ಕೈಯಲ್ಲಿ ಆಗುತ್ತಿಲ್ಲ. ಮಂತ್ರಿಗಳಿಗೆ ಜವಾಬ್ದಾರಿ ಇಲ್ಲ ಎಂದು ದೂರಿದರು.
ಬೆಂಗಳೂರು ಉಸ್ತುವಾರಿ ಮುಖ್ಯಮಂತ್ತಿ ಬಸವರಾಜ ಬೊಮ್ಮಾಯಿ ವಹಿಸಿಕೊಂಡಿದ್ದಾರೆ. ಒಂದು ಆದೇಶ ಮಾಡಿದರೆ ಸಾಕು ಒಂದು ವಾರದಲ್ಲಿ ರಸ್ತೆಗುಂಡಿಗಳನ್ನು ಮುಚ್ಚಬಹುದು. ಆದರೆ ಈ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸುತ್ತಿಲ್ಲ. ಇತ್ತೀಚೆಗೆ ಮುಖ್ಯಮಂತ್ರಿ ಬೊಮ್ಮಾಯಿ ನಗರ ಪ್ರದಕ್ಷಣೆ ಮಾಡಿದರು. ಒಂದೆರಡು ಕೆರೆ ವೀಕ್ಷಣೆ ಮಾಡಿದರು. ತಿಂಡಿ ತಿಂದರು. ಕುಮಾರಕೃಪಕ್ಕೆ ಬಂದರು. ರಸ್ತೆ ಗುಂಡಿ ಮುಚ್ಚುವ ಸಂಬಂಧ ಒಂದು ಕ್ರಮ ಕೈಗೊಳ್ಳಲಿಲ್ಲ ಎಂದು ಟೀಕಿಸಿದರು.
ಮಳೆ ಬಂದು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದರೂ ಸಚಿವರು ರಾಜ್ಯವನ್ನು ಸುತ್ತಲಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಕೇವಲ ಒಂದು ಕ್ಷೇತ್ರಕ್ಕೆ ಸಮೀತವಾಗಿ ಸಚಿವರು ಕೆಲಸ ಮಾಡಿದರು. ಇವರಿಗೆ ಜವಾಬ್ದಾರಿ ಇದೆಯಾ? ಏಳು ಮಂದಿ ಸಚಿವರಿದ್ದರು ಒಬ್ಬರೂ ಕೂಡ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ಯಾವ ಪುರುಷಾರ್ಥಕ್ಕೆ ಸರ್ಕಾರ ಇದೆ ಎಂದು ಮುಖ್ಯಮಂತ್ರಿಗಳು ಮತ್ತು ಬೆಂಗಳೂರು ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ಹಿಂದೆ ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದಾಗ ಬೆಂಗಳೂರು ಅಭಿವೃದ್ದಿ 6 ಸಾವಿರ ಕೋಟಿ ರೂಪಾಯಿ ನೀಡಿದ್ದರು. ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ 1 ಸಾವಿರ ಕೋಟಿ ರೂಪಾಯಿ ನೀಡಿದ್ದರು. ಒಟ್ಟು 7 ಸಾವಿರ ಕೋಟಿ ಬೆಂಗಳೂರು ಅಭಿವೃದ್ಧಿಗೆ ಬಿಡುಗಡೆಯಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಆಯಿತು. ಆದರೆ ನಯಾಪೈಸೆ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು.
ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 198 ವಾರ್ಡಗಳಿವೆ. 2020-21ನೇ ಸಾಲಿನಲ್ಲಿ ಒಂದೊಂದು ವಾರ್ಡ್ ಗೆ 60 ಲಕ್ಷ ಬಿಡುಗಡೆ ಮಾಡುವ ಘೋಷಣೆ ಮಾಡಿದೆ. ಹಣ ಬಿಡುಗಡೆಗೆ ಕ್ರಿಯಾಯೋಜನೆ ರೂಪಿಸಿದ್ದೇವೆ. ಬೋರ್ ಕೊರೆಸಲು, ರಸ್ತೆಯ ಗುಂಡಿ ಮುಚ್ಚಿಸಲು ಈ ಹಣ ಏನಕ್ಕೂ ಸಾಲುವುದಿಲ್ಲ. ಪ್ರತಿವಾರ್ಡ್ ಗೆ 60 ಬಿಡುಗಡೆ ಮಾಡುವ ಘೋಷಣೆ ಮಾಡಿದ್ದರೂ ಇದುವರೆಗೂ ಒಂದು ಪೈಸೆ ಬಿಡುಗಡೆ ಮಾಡಿಲ್ಲ ಎಂದು ಟೀಕಿಸಿದರು.
ಬೆಂಗಳೂರಿನಲ್ಲಿ ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ ಮೂರು ವರ್ಷವಾದರೂ ಹಣ ಬಿಡುಗಡೆ ಮಾಡುತ್ತಿಲ್ಲ. ಬಿಜೆಪಿ ಬಂದ ಮೇಲೆ ಸಾಕಷ್ಟು ಸಮಸ್ಯೆ ಉದ್ಭವಿಸಿದೆ. ಹಿಂದೆ ಪ್ರಮುಖ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಶೀಘ್ರವೇ ಹಣ ಬಿಡುಗಡೆ ಆಗುತ್ತಿತ್ತು. ಈಗ ಅವರೂ ಒಂದು ವರ್ಷ ಕಾಯಬೇಕಾದ ಪರಿಸ್ಥಿತಿ ಬಂದಿದೆ. ಜೊತೆಗೆ ಆದ್ಯತೆ ಮೇರೆಗೆ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಈ ಸರ್ಕಾರ ಮತ್ತು ಸಚಿವರಿಗೆ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳಲು ಬರುತ್ತಿಲ್ಲ ಎಂದು ಆಪಾದಿಸಿದರು.
‘ಈ ಸರ್ಕಾರ ಕೇವಲ ಪರಿಹಾರ ಘೋಷಣೆ ಮಾಡುತ್ತದೆಯೇ ಹೊರತು, ಅದನ್ನು ನೀಡುವುದಿಲ್ಲ. ಇದು ಘೋಷಣೆಗಳ ಸರ್ಕಾರ. ಸರ್ಕಾರದ ಘೋಷಣೆ ಕನ್ನಡಿಯೊಳಗಿನ ಗಂಟಾಗಿದೆ. ಅದು ಕೇವಲ ಕಾಣಿಸುತ್ತದೆ ನಮ್ಮ ಕೈಗೆ ಸಿಗುವುದಿಲ್ಲ ಅಷ್ಟೇ. ಕೋವಿಡ್ ಸಮಯದಲ್ಲಿ ಅಸಂಘಟಿತ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಚಾಲಕರಿಗೆ ಪರಿಹಾರ ನೀಡಲಾಗುವುದು ಎಂದರು. ಹೆಚ್ಚೆಂದರೆ ಕೇವಲ 10ಪಷ್ಟು ಜನರಿಗೆ ಮಾತ್ರ ಹಣ ಸಿಕ್ಕಿದೆ. ಉಳಿದ ಶೇ.90ರಷ್ಟು ಮಂದಿಗೆ ಸಿಕ್ಕಿಲ್ಲ. ಬಿಜೆಪಿಯವರು ಘೋಷಣೆ ಮಾಡುವುದರಲ್ಲಿ ನಿಪುಣರು. ಆದರೆ ಯಾವುದೂ ಕಾರ್ಯರೂಪಕ್ಕೆ ಬರುವುದಿಲ್ಲ’ ಎಂದರು.
ಬಿಟ್ ಕಾಯಿನ್: ಸ್ವತಂತ್ರ ನ್ಯಾಯಾಂಗ ತನಿಖೆಗೆ ಆಗ್ರಹ
ಬಿಟ್ ಕಾಯಿನ್ ಅಕ್ರಮದ ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ. ರಾಜ್ಯದ ಇಬ್ಬರು ಪ್ರಭಾವಿ ನಾಯಕರು ಭಾಗಿಯಾದ ವರದಿ ನೋಡಿದ್ದೇನೆ. ಸುಮಾರು 10 ಸಾವಿರ ಕೋಟಿ ವಹಿವಾಟಿನ ಅನುಮಾನ ಇದೆ. ಇದು ಪ್ರಧಾನಿ ಕಾರ್ಯಾಲಯಕ್ಕೆ ಹೋಗಿದ್ದು, ಅಲ್ಲಿಂದ ವರದಿ ಕೇಳಲಾಗಿದೆ. ಈ ಬಿಟ್ ಕಾಯಿನ್ ಪ್ರಕರಣ ಸರ್ಕಾರಕ್ಕೆ ಕಂಟಕವಾಗಬಹುದು ಎಂದು ಭಾವಿಸುತ್ತೇನೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಈ ಬಗ್ಗೆ ಟ್ವಿಟ್ ಮಾಡಿದ್ದಾರೆ. ಈ ಪ್ರಕರಣದ ತನಿಖೆ ಸತ್ಯಾಂಶ ಹೊರಬಂದರೆ, ಅನೇಕ ನಾಯಕರ ಕುರ್ಚಿ ಅಲುಗಾಡುತ್ತದೆ. ಶೀಕ್ರಿ ಅವರನ್ನು ಬಂಧಿಸಲು ಸರ್ಕಾರ ಹಿಂದುಮುಂದೆ ನೋಡಿದ್ದು ಯಾಕೆ? ಈ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡೆಸಬೇಕು. ಉಳಿದ ಯಾವುದೇ ತನಿಖಾ ಸಂಸ್ಥೆ ಮೇಲೆ ನಂಬಿಕೆ ಇಲ್ಲವಾಗಿದೆ’ ಎಂದರು.


