ಪಂಜಾಬ್ ಮುಖ್ಯಮಂತ್ರಿ ಚೆನ್ನಿ ಅವರು ತಮ್ಮ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಬೆನ್ನ ಹಿಂದೆಯೇ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜಿನಾಮೆ ನೀಡಿದ್ದಾರೆ. ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವುದು ಸಿಧು ರಾಜಿನಾಮೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
‘ರಾಜಿ ಮಾಡಿಕೊಂಡರೆ ವ್ಯಕ್ತಿತ್ವ ನಾಶವಾಗುತ್ತದೆ. ಪಂಜಾಬ್ ಕಲ್ಯಾಣದ ವಿಷಯದಲ್ಲಿ ನಾನು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದಿರುವ ರಾಜಿನಾಮೆ ಪತ್ರದಲ್ಲಿ ತಿಳಿಸಿದ್ಧಾರೆ.
ಮುಖ್ಯಮಂತ್ರಿಗಳಿಗೆ ಖಾತೆ ಹಂಚಿಕೆ ಅಧಿಕಾರವಿದೆ. ಹಾಗೆಂದು ರಾಂಧವ ಅವರಿಗೆ ಮುಖ್ಯಮಂತ್ರಿಗಳು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಖಾತೆ ನೀಡಿರುವುದು ಸಿಧು ಅಸಮಾಧಾನಕ್ಕೆ ಕಾರಣ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಈ ಹಿಂದೆ ಸುಖಜಿಂದರ್ ಸಿಂಗ್ ರಾಂಧವ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಸ್ತಾಪ ಮಾಡಲಾಗಿತ್ತು. ಇದಕ್ಕೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಂತರ ಚೆನ್ನಿ ಅವರನ್ನು ಸಿಎಂ ಸ್ಥಾನಕ್ಕೆ ತರಲಾಯಿತು.
ದೆಹಲಿಯಲ್ಲಿ ಸಿಧು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಆಯ್ಕೆ ಸಮಿತಿ ಅಧ್ಯಕ್ಷ ಹರೀಶ್ ರಾವತ್ ಜೊತೆ ಮಾತುಕತೆ ನಡೆಸಿ ಪಂಜಾಬ್ ಗೆ ಹಿಂದಿರುಗಿದ ನಂತರ ರಾಜಿನಾಮೆ ನೀಡಿದ್ದಾರೆ.
ಪಂಜಾಬ್ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿದ್ದ ರಾಣ ಗುರಜಿತ್ ಸಿಂಗ್ ಹಿಂದಿನ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಮುಖ್ಯಮಂತ್ರಿ ಚೆನ್ನಿ ಅವರು ತಮ್ಮ ಸಂಪುಟಕ್ಕೆ ರಾಣ ಗುರಜಿತ್ ಸಿಂಗ್, ಕುಲಜಿತ್ ನಗ್ರ ಅವರನ್ನು ಸೇರ್ಪಡೆ ಮಾಡಿಕೊಂಡಿರುವುದು ಮತ್ತು ವಿಜಯ ಇಂದರ್ ಸಿಗ್ಲಾ ಅವರಿಗೆ ಲೋಕೋಪಯೋಗಿ ಖಾತೆ ನೀಡಿರುವುದು ಸಿಧು ರಾಜಿನಾಮೆಗೆ ಕಾರಣ ಎಂದು ಮೂಲಗಳು ತಿಳಿಸಿವೆ.
ಸಚಿವರು ಪ್ರಮಾಣ ವಚನ ಸ್ವೀಕರಿಸಿ ಖಾತೆ ಹಂಚಿಕೆ ಮಾಡಿದ ಕೆಲವೇ ಗಂಟೆಗಳಲ್ಲಿ ತಮ್ಮ ನಿವಾಸಕ್ಕೆ ಹಿಂದಿರುಗಿದ ಸಿಧು ರಾಜಿನಾಮೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲ ಪಂಜಾಬ್ ಸರ್ಕಾರ ಎಎಸ್.ಪಿ ಡಿಯೋಲ್ ಅವರನ್ನು ಅಡ್ವೋಕೇಟ್ ಜನರಲ್ ನ್ನಾಗಿ ನೇಮಕ ಮಾಡಿರುವುದಕ್ಕೆ ಸಿಧು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿಧು ಆಪ್ರರ ಪ್ರಕಾರ “ಎಎಸ್.ಪಿ ಡಿಯೋಲ್ ನೇಮಕದ ಹಿಂದೆ ಯಾರಿದ್ದಾರೆ ಎಂಬುದು ಗೊತ್ತು. ಹಳಬರೇ ಎಲ್ಲವನ್ನು ನಿಯಂತ್ರಿಸುತ್ತಿದ್ದಾರೆ. ನಾನು ಭ್ರಷ್ಟಾಚಾರವನ್ನು ಒಪ್ಪುವುದಿಲ್ಲ. ರಾಣ ಸಚಿವರಾಗಿರುವುದರ ಹಿಂದೆ ಯಾರ ಕೈವಾಡವಿದೆ ಎಂದು ನನಗೆ ಗೊತ್ತು ಎಂದು ಸಿಧು ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.
ನಾನು ಕಾಂಗ್ರೆಸ್ ನಲ್ಲೇ ಇರುತ್ತೇನೆ. ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.