ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಚರಕ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಾರ್ಚ್ 1 ರಂದು ಬೆಳಗ್ಗೆ 10.30 ಗಂಟೆಗೆ ತುಮಕೂರು ನಗರದ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ವಿಚಾರಗೋಷ್ಟಿ ಮತ್ತು ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದೆ.
ಸಮಾರಂಭವನ್ನು ಮಾಜಿ ಸಚಿವ ಹಾಗೂ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಉದ್ಘಾಟಿಸುವರು. ಚರಕ ಆಸ್ಪತ್ರೆಯ ಮುಖ್ಯಸ್ಥ ಡಾ.ಬಸವರಾಜು ಅಧ್ಯಕ್ಷತೆ ವಹಿಸುವರು. ಉಪನ್ಯಾಸಕ ಎ.ರಾಮಚಂದ್ರಪ್ಪ ಪ್ರಾಸ್ತಾವಿಕ ಮಾತನಾಡುವರು.
ಉದ್ಘಾಟನಾ ಸಮಾರಂಭದ ನಂತರ ವಿಚಾರಗೋಷ್ಟಿ ನಡೆಯಲಿದ್ದು, ಜನಪರ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಸಮಕಾಲೀನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ತಲ್ಲಣಗಳು ವಿಷಯದ ಕುರಿತು ಮಾತನಾಡುವರು. ರವಿಕುಮಾರ್ ಬಾಗಿ ಅವರು ದಲಿತ ಚಳವಳಿಯ ಸವಾಲು ಮತ್ತು ಸಾಧ್ಯತೆಗಳ ಕುರಿತು, ವಿ.ಎಲ್.ನರಸಿಂಹಮೂರ್ತಿ ಅವರು, ಸಮಕಾಲೀನ ಕರ್ನಾಟಕ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ ವಿಷಯದ ಕುರಿತು ಮಾತನಾಡುವರು.
ನಂತರ ಅಭಿನಂದನಾ ಸಮಾರಂಭ ನಡೆಯಲಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಸಾಹಿತಿ ತುಂಬಾಡಿ ರಾಮಯ್ಯ, ಬಾಬು ಜಗಜೀವನ್ ರಾಮ್ ರಾಜ್ಯ ಪ್ರಶಸ್ತಿ ಪುರಸ್ಕೃತ ಹೋರಾಟಗಾರರಾದ ಕೆ.ದೊರೈರಾಜ್ ಮತ್ತು ಕುಂದೂರು ತಿಮ್ಮಯ್ಯ ಅವರನ್ನು ಸನ್ಮಾನಿಸಲಾಗುವುದು.
ಎಸಿ ನಾಹಿದಾ ಜಮ್ ಜಮ್, ಸಾಮಾಜಿಕ ಹೋರಾಟಗಾರ ಶ್ರೀಪಾದ ಭಟ್, ಕಲೇಸಂ ಜಿಲ್ಲಾಧ್ಯಕ್ಷೆ ಡಾ.ಆಶಾ ಬಗ್ಗನಡು ಭಾಗವಹಿಸುವರು. ಉಪನ್ಯಾಸಕ ಡಾ.ರವಿಕುಮಾರ್ ನೀ.ಹ ಅಭಿನಂದನಾ ನುಡಿಗಳನ್ನಾಡುವರು. ಡಾ.ಶಿವಣ್ಣ ತಿಮ್ಲಾಪುರ ನಿರೂಪಿಸುವರು.


