Saturday, February 28, 2026
Google search engine
Homeಮುಖಪುಟ‘ಅನುಭವದಿಂದ ಕಾವ್ಯ ಹುಟ್ಟುತ್ತದೆ’-ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದರಾಜ್

‘ಅನುಭವದಿಂದ ಕಾವ್ಯ ಹುಟ್ಟುತ್ತದೆ’-ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದರಾಜ್

ಕಾವ್ಯ ಹುಟ್ಟುವುದು ಬದುಕಿನ ಅನುಭವದಿಂದ. ಅದಕ್ಕೆ ಪ್ರತಿಭೆ ಮತ್ತು ಪರಿಶ್ರಮ ಎರಡು ಅಗತ್ಯ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಲ್.ಎನ್.ಮುಕುಂದರಾಜ್ ತಿಳಿಸಿದ್ದಾರೆ.

ತುಮಕೂರು ನಗರದ ಕನ್ನಡ ಭವನದಲ್ಲಿ ಶೈನಾ ಅಧ್ಯಯನ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಬಿ.ಸಿ.ಶೈಲಾನಾಗರಾಜು ಅವರ ಕವಿಸಮಯ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿ, ಕವಿ ತನ್ನ ಅನುಭವದ ಜೊತೆಗೆ, ಜಗತ್ತಿನ ಅನುಭವವನ್ನು ಕವಿತೆಗಳನ್ನು ಕಟ್ಟಿಕೊಟ್ಟಾಗ ಮಾತ್ರ ಜನಮಾನಸದಲ್ಲಿ ಗಟ್ಟಿಯಾಗಿ ನಿಲ್ಲಲು ಸಾಧ್ಯ ಎಂದರು.

ಕಾವ್ಯ ಎಂಬುವುದಕ್ಕೆ ಇದುವರೆಗೂ 20-30 ಸಾವಿರ ವ್ಯಾಖ್ಯಾನಗಳಿವೆ. ಕೆಲ ಕವಿಗಳು ತಮ್ಮ ಕವಿತೆಗಳೇನು ಏನನ್ನು ಹೇಳ ಬಯಸುತ್ತವೆ ಎಂಬುದನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಕವಿ ಏಕಾಂಗಿ, ಆದರೆ ಆತನ ಕವಿತೆಗಳು ಜನರಿಗಾಗಿ ರಚಿಸಲ್ಪಡುತ್ತವೆ. ಹಾಗಾಗಿ ಕವಿ ಸಾವಿಗೀಡಾದರೂ, ಕವಿತೆ ಮರು ಹುಟ್ಟು ಪಡೆಯುತ್ತಲೇ ಹೋಗುತ್ತದೆ ಎಂದು ಹೇಳಿದರು.

ಷೇಕ್ಸ್ಪಿಯರ್‌ಗಿಂತ ಕನ್ನಡದ ಕುಮಾರವ್ಯಾಸ ದೊಡ್ಡ ಕವಿ. ಇಂಗ್ಲೀಷರು ತಾವು ಹೋದೆಡೆಯೆಲ್ಲಾ ಷೇಕ್ಸಪಿಯರ್‌ನನ್ನು ಹೊತ್ತುಕೊಂಡು ಹೋದರು. ಆದರೆ ಕುಮಾರವ್ಯಾಸನನ್ನು ನಾವು ನಮ್ಮ ಅಡುಗೆ ಮನೆಗೂ ತಂದುಕೊಳ್ಳಲಿಲ್ಲ. ಕವಿಗಳಲ್ಲಿಯೇ ಭಿನ್ನತೆ ಇದೆ. ನವ್ಯ, ನವ್ಯೋದಯ, ಪ್ರಗತಿಶೀಲ, ದಲಿತ, ಬಂಡಾಯ ಹೀಗೆ ಹಲವು ಪ್ರಕಾರಗಳಿವೆ. ಅವರ ರಚನಾ ಕ್ರಮದಲ್ಲಿಯೇ ಭಿನ್ನತೆ ಇದೆ. ಆದರೆ ಎಲ್ಲರ ಹಾದಿ ಜನರಲ್ಲಿ ಜಾಗೃತಿ, ಅರಿವು ಮೂಡಿಸುವುದೇ ಆಗಿದೆ ಎಂದು ತಿಳಿಸಿದರು.

ಕವಿಸಮಯ ಕೃತಿ ಕುರಿತು ಮಾತನಾಡಿದ ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾಧ್ಯಕ್ಷೆ ಡಾ.ಆಶಾ ಬಗ್ಗನಡು, ಶೈಲಾ ನಾಗರಾಜು ಅವರ ಕವಿ ಸಮಯ ಕಾವ್ಯದಲ್ಲಿ ಕಾವ್ಯ ಎನ್ನುವುದು ಧ್ಯಾನ. ಅದನ್ನು ಸಿದ್ದಿಸಿಕೊಂಡರೆ ಕವಿಯಾಗಿ ಜನ ಮಾನಸದಲ್ಲಿ ಉಳಿಯಬಹುದಾಗಿದೆ. ಕಾವ್ಯವೆಂಬುದು ಕತ್ತಲೆಯ ನಡುವಿನ ಬೆಳಕು ಇದ್ದಂತೆ. ಇಂತಹ ಸಂದಿಗ್ಧ ಸಮಯದಲ್ಲಿ ಬೆಳಕಿನ ಕೊರತೆ ಎದ್ದು ಕಾಣುತ್ತಿದೆ. ಸುಳ್ಳೇ ಸಂಭ್ರಮಿಸುತ್ತಿರುವ ಈ ಕಾಲದಲ್ಲಿ ಸತ್ಯವೆಂಬ ಬೆಳಕು ಕವಿತೆಯ ಮೂಲಕ ಚೆಲ್ಲುವ ಕೆಲಸ ಆಗಬೇಕಿದೆ ಎಂದರು.

ಕವಿ ಸಮಯದ ಕೃತಿಕಾರ್ತಿ ಬಿ.ಸಿ.ಶೈಲಾ ನಾಗರಾಜು ಮಾತನಾಡಿ, ಕಾವ್ಯ ಮನಸ್ಸಿಗೆ ಸಂತೋಷ ಉಂಟು ಮಾಡುವುದಷ್ಟೇ ಅಲ್ಲ, ಸಾಂತ್ವನ ನೀಡುವುದಾಗಿದೆ. ಕಾವ್ಯದ ಮೂಲಕ ಎಲ್ಲರನ್ನು ತಲುಪಬಹುದು ಎಂಬುದಕ್ಕೆ ನನ್ನ ತಂಗಿ ಕೇಳುವ ಕವನ ಸಂಕಲನ. ಮಹಿಳಾ ಹೋರಾಟದ ಗೀತೆಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಳಸಿಕೊಂಡಿದೆ. ನನ್ನ ಕವಿ ಸಮಯ ಪುಸ್ತಕ ಹೊಸ ಬರಹಗಾರರಿಗೆ ಮಾರ್ಗದರ್ಶನ ಮಾಡುವಂತಹ ಕಾವ್ಯ ವಿಮಾಂಸೆಯಾಗಲಿದೆ ಎಂಬುದು ಹಿರಿಯರ ಅಭಿಪ್ರಾಯವಾಗಿದೆ. ಇದು ನನಗೆ ಬಹಳ ಸಂತೋಷದ ಸಮಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿದರು. ಶೈನಾ ಅಧ್ಯಯನ ಸಂಸ್ಥೆಯ ಅಧ್ಯಕ್ಷ ದೊಂಬರನಹಳ್ಳಿ ನಾಗರಾಜ್, ಸಂಚಾಲಕಿ ಎಂ.ಪ್ರವೀಣ, ಮಾಧುರ್ಯ, ಜಿ.ಯಶೋಧ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular