Saturday, February 28, 2026
Google search engine
Homeಮುಖಪುಟಮೀಸಲಾತಿ ಕಡಿತ: ಕಾಂಗ್ರೆಸ್ ವಿರುದ್ಧ ದಲಿತರ ಆಕ್ರೋಶ-ಮಾ.11ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ನಿರ್ಧಾರ

ಮೀಸಲಾತಿ ಕಡಿತ: ಕಾಂಗ್ರೆಸ್ ವಿರುದ್ಧ ದಲಿತರ ಆಕ್ರೋಶ-ಮಾ.11ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ನಿರ್ಧಾರ

ಮೀಸಲಾತಿಯನ್ನು ಕಡಿತಗೊಳಿಸಿ 56 ಸಾವಿರ ಉದ್ಯೋಗಗಳನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಮಾ.11ಕ್ಕೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ಕೈಗೊಳ್ಳಲು ನಿರ್ಧಾರ ಕೈಗೊಳ್ಳಲಾಯಿತು.

ತುಮಕೂರಿನಲ್ಲಿ ನಡೆದ ಚಿತ್ರದುರ್ಗ, ಬಳ್ಳಾರಿ, ರಾಯಚೂರು, ದಾವಣಗೆರೆ, ತುಮಕೂರು ಜಿಲ್ಲೆಯ ಮಾದಿಗ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಒಳಮೀಸಲಾತಿ ಹೋರಾಟ ಸಮಿತಿಯ ಬಸವರಾಜ ಕೌತಾಳ್, ಸರ್ಕಾರ ಪ್ರಾಮಾಣಿಕವಾಗಿ ಒಳಮೀಸಲಾತಿ ಜಾರಿಗೊಳಿಸಲು ವಿಫಲವಾಗಿದೆ ಎಂದು ಆರೋಪಿಸಿದರು.

ದಲಿತರ ಒಳಮೀಸಲಾತಿಯ ವಿಚಾರದಲ್ಲಿ ಸರ್ಕಾರ ಶಾಶ್ವತ ಪರಿಹಾರ ಹುಡುಕುವ ಕೆಲಸ ಮಾಡುತ್ತಿಲ್ಲ, ಒಳಮೀಸಲಾತಿ ಬದಿಗಿಟ್ಟು ನೇಮಕಾತಿ ಮಾಡಲ್ಲ ಎಂದು ಹೇಳುವ ಸಿದ್ದರಾಮಯ್ಯ ಅವರು ನಂತರದ ದಿನಗಳಲ್ಲಿ ಕೈತೊಳೆದುಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಸರ್ಕಾರದ ನಿರ್ಧಾರದ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

ನಮ್ಮ ಹೋರಾಟ ಇರುವುದು ಒಳ ಮೀಸಲಾತಿಗಾಗಿ ಹೊರತು ನೇಮಕಾತಿಗಲ್ಲ, ಒಳ ಮೀಸಲಾತಿ ಅನ್ವಯಿಸಿಯೇ ನೇಮಕಾತಿ ಆಗಬೇಕು. ಸರ್ಕಾರ ತೆಗೆದುಕೊಂಡಿರುವ ತೀರ್ಮಾನದ ವಿರುದ್ಧ ಸಹಿ ಸಂಗ್ರಹ ಆಂದೋಲನ ಪ್ರಾರಂಭವಾಗಬೇಕಿದೆ, ಕಾಂಗ್ರೆಸ್ ಸರ್ಕಾರ ಎಸ್ಟಿ ಸಮುದಾಯಕ್ಕೆ ಬಹುದೊಡ್ಡ ಅನ್ಯಾಯ ಮಾಡಿದ್ದು ಶೇ.7ರಿಂದ 3ಕ್ಕೆ ಇಳಿಸಿದೆ. ಇದರ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದರು.

ಚಿಂತಕ ದೊರೈರಾಜು ಮಾತನಾಡಿ, ಒಳ ಮೀಸಲಾತಿ ಸಮಾಜದ ಕುತ್ತಿಗೆಗೆ ಬಂದಿದೆ. ಸರ್ಕಾರ ಕಾನೂನು ಮೂಲಕವೇ ಮಹಾಮೋಸ ಮಾಡಿದೆ. ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದಲ್ಲಿಯೇ ಇದೆ. ವಿಶೇಷ ಪ್ರಕರಣಗಳಲ್ಲಿ ಮೀಸಲಾತಿ ಪ್ರಮಾಣ ಶೇ.50 ಮೀರಲು ಅವಕಾಶವಿದೆ. ಆದರೆ ಒಳ ಮೀಸಲಾತಿ ನೀಡಲು ಮನಸ್ಸಿಲ್ಲದ ಕಳ್ಳರು, ಮೋಸಗಾರರು ಸಮುದಾಯವನ್ನು ಗಿಲ್ಕಿ ಆಡಿಸಿದಂತೆ ಆಡುತ್ತಿದ್ದಾರೆ ಎಂದು ಆರೋಪಿಸಿದರು.

ನ್ಯಾಯಾಲಯದಲ್ಲಿರುವ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಕಾಲತ್ತು ಆಗುವ ಜವಾಬ್ದಾರಿ ಯಾರದ್ದು, ಒಳ ಮೀಸಲಾತಿ ವಿರೋಧಿಗಳು ಸಾರ್ವಜನಿಕರನ್ನು ಎತ್ತಿಕಟ್ಟಿ ಹಳೇ ಮೀಸಲಾತಿ ಜಾರಿಗೆ ತರುವ ಮಾತನಾಡಿದ್ದಾರೆ. ಅದರಲ್ಲಿ ಒಳ ಮೀಸಲಾತಿ ಇರುತ್ತದೆ ಎನ್ನುವ ನಂಬಿಕೆ ನಮಗಿಲ್ಲ, ಸರ್ಕಾರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುತ್ತಿಲ್ಲ. ಉದ್ಯೋಗ ಭರ್ತಿಗೆ ನಮ್ಮ ವಿರೋಧವಿಲ್ಲ. ಆದರೆ ಒಳ ಮೀಸಲಾತಿ ನೀಡದೇ ನಮ್ಮ ಪಾಲನ್ನು ನಮಗೆ ನೀಡದೇ ಭರ್ತಿ ಮಾಡುವುದಕ್ಕೆ ನಮ್ಮ ವಿರೋಧವಿದೆ ಎಂದರು.

ಒಳ ಮೀಸಲಾತಿಗೆ ಒಂದು ತಲೆಮಾರು, ಉದ್ಯೋಗಕ್ಕಾಗಿ ಇನ್ನೊಂದು ತಲೆಮಾರು ಹೋರಾಟ ಮಾಡಬೇಕೆ? ಶೀಘ್ರ ನೇಮಕಾತಿ ಮಾಡಬೇಕಿರುವುದು ತುರ್ತು, ಒಳ ಮೀಸಲಾತಿ ನಮ್ಮ ಅಗತ್ಯ, ಒಳ ಮೀಸಲಾತಿಗೆ ಇರುವ ಕಾನೂನು ಅಡಚಣೆಗಳ ಬಗ್ಗೆ ಶೀಘ್ರ ತೀರ್ಮಾನ ಕೈಗೊಂಡು ಪರಿಹರಿಸುವ ಕಾರ್ಯ ಮಾಡಬೇಕೆಂದು ಸಲಹೆ ನೀಡಿದರು.

ಒಳಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ ಅವಕಾಶವಂಚಿತ ಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕೆಂಬ ಕಳಕಳಿ ಯಾವ ಪಕ್ಷಕ್ಕೂ ಇಲ್ಲದಂತಾಗಿದೆ. 30 ವರ್ಷಗಳ ಹೋರಾಟಕ್ಕೆ ಅಂತಿಮ ರೂಪವನ್ನು ನೀಡಬೇಕಾದ ಸಮಯ ಬಂದಿದೆ ಎಂದು ಹೇಳಿದರು.

ವಕೀಲ ಪಾವಗಡ ಶ್ರೀರಾಮ್, ಜಿ.ಪಂ.ಮಾಜಿ ಸದಸ್ಯ ಕೆಂಚಮಾರಯ್ಯ, ದಲಿತ ಮುಖಂಡರಾದ ನರಸೀಯಪ್ಪ, ಶಿವನಂಜಪ್ಪ, ನರಸಿಂಹಯ್ಯ, ಜಯಮೂರ್ತಿ, ಡಾ.ಲಕ್ಷ್ಮೀಕಾಂತ್, ನೀಲಕುಮಾರ ಗುಡಿಮನಿ, ಡಿ.ಟಿ.ವೆಂಕಟೇಶ್, ಕೊಟ್ಟ ಶಂಕರ್, ಶಿವರಾಂ, ರಾಜು, ಎಂ.ಸಿ.ನರಸಿಂಹಮೂರ್ತಿ, ದಂಡಿನಶಿವರ ಕುಮಾರ್, ತಿಪಟೂರು ಕೃಷ್ಣ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular