ಚಿತ್ರದುರ್ಗದ ಮುಂದಕ್ಕೆ ಹೋದರೆ ಒಂದು ಸಮುದಾಯ ಅಧಿಕಾರ ಹಿಡಿದಿದೆ. ಸಾಲವನ್ನು ಅವರೆ ತೆಗೆದುಕೊಳ್ಳುತ್ತಾರೆ. ಸಾಲ ಮನ್ನಾ ಆದ್ರೂ ಅವರಿಗೆ ಆಗುತ್ತದೆ. ಬೇರೆಯವರಿಗೆ ಸಾಲನೂ ಕೊಡುವುದಿಲ್ಲ; ಮನ್ನಾನೂ ಮಾಡುವುದಿಲ್ಲ. ತುಮಕೂರಿನಿಂದ ಕೆಳಕ್ಕೆ ಹೋದರೆ ಇನ್ನೊಂದು ಜಾತಿಯವರು, ಪಟ್ಟಭದ್ರರು ಅಧಿಕಾರ ಹಿಡಿದಿದ್ದಾರೆ. ಹೀಗಾಗಿ ಎರಡು ದಶಕದ ಬಳಿಕ ನಮ್ಮ ಜಿಲ್ಲೆಯಲ್ಲೂ ಕೂಡ ಸಾಮಾಜಿಕ ನ್ಯಾಯವನ್ನು ಜಾರಿ ಮಾಡಲು ನಮ್ಮ ಸಂಸ್ಥೆಯಲ್ಲಿ ನಾನೂ ಪ್ರಯತ್ನ ಮಾಡಿದ್ದೇನೆ ಎಂದು ಮಾಜಿ ಸಚಿವ ಹಾಗೂ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಚರಕ ಚಾರಿಟಬಲ್ ಟ್ರಸ್ಟ್ ತುಮಕೂರು ವತಿಯಿಂದ ತುಮಕೂರಿನ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ವಿಚಾರಗೋಷ್ಟಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಸಹಕಾರ ಮಂತ್ರಿ ಇದ್ದಾಗ ಒಂದು ಆದೇಶ ಮಾಡಿದರು. ಆ ಆದೇಶವನ್ನು ಉಲ್ಲಂಘನೆ ಮಾಡಿದರೆ ಅಲ್ಲಿನ ಆಡಳಿತ ಮಂಡಳಿಯನ್ನು ಬರಕಾಸ್ತು ಮಾಡಬಹುದು, ಅಷ್ಟೊಂದು ಪವರ್ ಪುಲ್ ಆದೇಶ ಅದು, ಅದನ್ನು ನಮ್ಮ ಖರ್ಗೆ ಅವರು ಮಾಡಿದರು. ಸಾಲ ವಿತರಣೆಯಲ್ಲೂ ಮೀಸಲಾತಿ ಇತ್ತು. 100 ರೂ ಸಾಲ ನೀಡಿದರೆ ಅದರಲ್ಲಿ 25ರಷ್ಟು ಸಾಲ ಪರಿಶಿಷ್ಟರಿಗೆ ಇರಬೇಕಿತ್ತು. ಹೀಗಾಗಿ ಹಿಂದುಳಿದ ಜಾತಿಗಳಿಗೆ ಸಾಲ ನೀಡಬೇಕೆಂಬ ಆದೇಶ ಹಿಂದೆಯೇ ಇತ್ತು. ಆದರೆ ಅದು ಜಾರಿಯೇ ಆಗಲಿಲ್ಲ ಎಂದು ತಿಳಿಸಿದರು.
ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾದ ಮೇಲೆ ಅದನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಿದೆ. ಪತ್ರಿಕೆಗಳಲ್ಲಿ ಜಾಹಿರಾತು ನೀಡಿ, ಎಸ್.ಸಿಗಳಾಗಲಿ, ಎಸ್ಟಿಗಳಾಗಲಿ, ಮಹಿಳೆಯರಾಗಲಿ, 5-10 ಗುಂಟೆ ಜಮೀನು ಇದ್ದವರೆಲ್ಲರೂ ಅರ್ಜಿ ಹಾಕಿ ಸಾಲ ಪಡೆಯಿರಿ ಎಂದು ಹೇಳಿದೆ. ಇದು ನಮ್ಮ ಜಿಲ್ಲೆಯಲ್ಲಿ ಜಾರಿಯಾಯಿತು. ಇದು ರಾಜ್ಯದಲ್ಲಿಯೇ ಮೊದಲನೆಯದ್ದು ಎಂದು ತಿಳಿಸಿದರು.
ನಾನು ಸಚಿವನಾದ ಮೇಲೆ ಎಸ್.ಟಿ. ಎಸ್.ಸಿ ಮತ್ತು ಮಹಿಳೆಯರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು ಎಂದು ತೀರ್ಮಾನ ಮಾಡಿ ನಾಮಿನೇಶನ್ ರೀತಿ ಮಾಡಿದೆ. ಈ ನಿಯಮ ಒಂದು ಕಾಲದಲ್ಲಿ ಇದ್ದಂತಹದ್ದೇ. 80ರ ದಶಕದಲ್ಲಿ ಇದ್ದಂತಹ ಕಾನೂನನ್ನು ತೆಗೆದುಹಾಕಲಾಗಿತ್ತು. ನಾನು ಮತ್ತೆ ಆ ನಾಮಿನೇಶನ್ ಗಳನ್ನು ತರಬೇಕು ಎಂದು ಪ್ರಯತ್ನ ಪಟ್ಟೆ. ಮಾಹಿತಿಯ ಕೊರತೆ ಇರಬಾರದು ಎಂಬ ಕಾರಣಕ್ಕೆ ಇಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡುತ್ತಿದ್ದೇನೆ. ಈ ತಿದ್ದುಪಡಿಯಲ್ಲಿ ಒಂದು ಎಸ್.ಸಿ.ಗೆ, ಒಂದು ಎಸ್.ಟಿಗೆ ಮತ್ತು ಇತರರಿಗೆ ಎಂಬ ನಿಯಮ ಜಾರಿಗೆ ತಂದಿದ್ದೇನೆ. ಈ ಮೂರರಲ್ಲಿ ಒಬ್ಬರು ಒಬ್ಬ ಮಹಿಳೆ ಇರಬೇಕೆಂಬ ನಿಯಮವೂ ಸೇರಿಸಲಾಗಿದೆ ಎಂದರು.
ಈಗಾಗಲೇ ಗ್ರಾಮ ಪಂಚಾಯ್ತಿಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರಿಗೆ ಮೀಸಲಾತಿ ಇದೆ. ಅದೇ ಮಾದರಿಯಲ್ಲಿ ಹಾಲು ಉತ್ಪಾದಕರ ಸಂಘಗಳಿರಲಿ ಅಥವಾ ಸಹಕಾರ ಸಂಸ್ಥೆಗಳಿರಲಿ ಸರ್ಕಾರದ ಅನುಕೂಲಗಳನ್ನು ಪಡೆದಿರುತ್ತಾರೆ. ಅಲ್ಲಿ ಮೀಸಲಾತಿ ಪ್ರಕಾರ ಅಧ್ಯಕ್ಷರು, ಉಪಾಧ್ಯಕ್ಷರು ಎಸ್.ಸಿ, ಎಸ್.ಟಿ.ಗಳಿಗೆ ಮೀಸಲಾತಿ ಇರಬೇಕೆಂಬುದನ್ನು ಕಾಯ್ದೆಯಲ್ಲಿ ಉಲ್ಲೇಖಿಸಿದ್ದು ಇಂದು ಜಾರಿಯಲ್ಲಿದೆ. ಇದನ್ನು ಅನುಷ್ಠಾನಗೊಳಿಸುವುದು ಹೆಚ್ಚು ಹೆಚ್ಚು ಆಗಬೇಕು. ಇದು ಆದಾಗ ಸಣ್ಣ ಸಮುದಾಯಗಳಿಗೆ ಮತ್ತು ಸಹಕಾರ ಸಂಘಗಳ ಬಾಗಿಲ ಒಳಗೆ ಹೋಗದಂತ ಸಮುದಾಯಗಳಿಗೆ ಮೀಸಲಾತಿಯಿಂದ ಅನುಕೂಲವಾಗಲಿದೆ ಎಂದು ಹೇಳಿದರು.
ನಾವು ಕೆಳವರ್ಗ ಮತ್ತು ಮೇಲ್ವರ್ಗ ಅಂತ ಹೇಳಿಕೊಳ್ಳುವುದರ ಬದಲು ಹಿಂದುಳಿದವರು ಮತ್ತು ಮುಂದುವರೆದವರು ಅಂತ ಹೇಳಿಕೊಳ್ಳಬೇಕು. ನಮಗೆ ನಾವೇ ಕೆಳವರ್ಗ ಅಂತ ಯಾಕೆ ಹೇಳಿಕೊಳ್ಳಬೇಕು. ಈ ವಿಚಾರವನ್ನು ನಾನು ಒಪ್ಪುವುದಿಲ್ಲ. ಯಾರೆಲ್ಲ ಬಡವರು ಇರುತ್ತಾರೆ. ಅಸಹಾಯಕರು ಇರುತ್ತಾರೆ. ದನಿ ಇಲ್ಲದವರು ಇರುತ್ತಾರೆ. ಶೋಷಿತ ಸಮುದಾಯ ಇರುತ್ತದೆ, ಅವರು ಯಾವತ್ತೂ ಕೂಡ ಇನ್ನೊಬ್ಬರಿಗೆ ಮೋಸ, ಅನ್ಯಾಯ ಮಾಡುವಂತಹ, ಸುಳ್ಳು ಹೇಳುವಂತಹ ಕೆಲಸವನ್ನು ಮಾಡುವುದಿಲ್ಲ. ನಾವು ಬೇರೆಯವರಿಗಿಂತ ಬುದ್ದಿವಂತರಿದ್ದೇವೆ. ಹಾಗಾಗಿ ನಾವ್ಯಾಕೆ ಕೆಳವರ್ಗ ಅಂತ ಹೇಳಿಕೊಳ್ಳಬೇಕು ಇದು ಸರಿಯಾದ ಚಿಂತನೆಯಲ್ಲ. ಕೆಳವರ್ಗ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಮುಂದೆ ಇಂತಹ ಪದಗಳನ್ನು ಬಳಸಬಾರದು ಎಂದು ಕಿವಿಮಾತು ಹೇಳಿದರು.
ನಾವು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡೋಣ. ಬೇರೆಯವರಿಗೆ ತೊಂದರೆ ಕೊಡುವುದು ಬೇಡ. ನಮ್ಮ ಮೇಲೆ ಯಾರಾದರೂ ದಬ್ಬಾಳಿಕೆ, ದೌರ್ಜನ್ಯ ಮಾಡುವಂತಹ ಸಂದರ್ಭಗಳು ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡೋಣ. ಆದರೆ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವುದು ಬೇಡ. ದಲಿತ ಸಂಘಟನೆಯ ಯುವಕರೇ ಬೇರೆಯವರ ಪರ ಬಂದು ಬಿಡುತ್ತಾರೆ. ಸ್ವಾರ್ಥಕ್ಕೋಸ್ಕರ ಈ ರೀತಿ ಮಾಡುವುದು ಬೇಡ. ಇಂತಹ ಘಟನೆಗಳು ಆಗಬಾರದು. ಅಕ್ಷರ ಜ್ಞಾನದ ಆಧಾರದ ಮೇಲೆ ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸುವಂತಹ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.
ದಲಿತರಲ್ಲಿ ಹೋಮ-ಹವನ ಮಾಡಿಸುವುದು ಹೆಚ್ಚಾಗಿದೆ. ದೈವಭಕ್ತಿಯ ಜಾಸ್ತಿಯಾಗಿದೆ. ಬ್ರಾಹ್ಮಣರು ಇದರಿಂದ ಲಾಭ ಮಾಡಿಕೊಳ್ಳುತ್ತಾರೆ. ಇದು ಸರಿ-ತಪ್ಪು ಎಂದು ಹೇಳುವುದಲ್ಲ. ಹೋಮ ಮಾಡಿಸುವವರು ನಾವೇ. ಹವನ ಮಾಡಿಸುವವರು ನಾವೇ. ಕಾಣಿಕೆ ಕೊಡುವುದು ನಾವೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ವಾಸ್ತವ ಸತ್ಯವನ್ನು ಜನರಿಗೆ ಅರ್ಥ ಮಾಡಿಸಬೇಕು. ವಾಸ್ತವಿಕತೆಯಿಂದ ದೂರ ಹೋಗಬಾರದು. ವಾಸ್ತವದ ಸತ್ಯ ಸಂಗತಿಗಳನ್ನು ನಿರ್ಭೀತಿಯಿಂದ ಹೇಳಿ ಜನರಲ್ಲಿ ಅರಿವು ಮೂಡಿಸಬೇಕು. ಸತ್ಯ ಹೇಳುವುದನ್ನು ಎಲ್ಲ ಯುವಕರು ಕಲಿಯಬೇಕು. ಇತಿಹಾಸ ಅರಿಯದೆ ಇತಿಹಾಸ ನಿರ್ಮಾಣ ಸಾಧ್ಯವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ‘ಸಮಕಾಲೀನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ತಲ್ಲಣಗಳು’ ವಿಷಯದ ಕುರಿತು ಮಾತನಾಡಿದರು. ರವಿಕುಮಾರ್ ಬಾಗಿ ಅವರು ‘ದಲಿತ ಚಳವಳಿಯ ಸವಾಲು ಮತ್ತು ಸಾಧ್ಯತೆಗಳು ಕುರಿತು ಮತ್ತು ವಿ.ಎಲ್.ನರಸಿಂಹಮೂರ್ತಿ ಅವರು, ‘ಸಮಕಾಲೀನ ಕರ್ನಾಟಕ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ’ ವಿಷಯದ ಕುರಿತು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಚರಕ ಚಾರಿಟಬಲ್ ಮುಖ್ಯಸ್ಥ ಡಾ.ಬಸವರಾಜು ವಹಿಸಿ ಮಾತನಾಡಿದರು. ಎ.ರಾಮಚಂದ್ರ ಪ್ರಾಸ್ತಾವಿಕ ಮಾತನಾಡಿದರು. ಕುಂದೂರು ಮುರಳಿ ಸ್ವಾಗತಿಸಿದರು. ಅಧ್ಯಾಪಕ ಡಾ.ಶಿವಣ್ಣ ತಿಮ್ಲಾಪುರ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಸಾಹಿತಿ ತುಂಬಾಡಿ ರಾಮಯ್ಯ, ಬಾಬು ಜಗಜೀವನ್ ರಾಮ್ ರಾಜ್ಯ ಪ್ರಶಸ್ತಿ ಪುರಸ್ಕೃತ ಹೋರಾಟಗಾರರಾದ ಕುಂದೂರು ತಿಮ್ಮಯ್ಯ ಮತ್ತು ಕೆ.ದೊರೈರಾಜ್ ಅವರನ್ನು ಅಭಿನಂದಿಸಲಾಯಿತು. ಡಾ.ರವಿಕುಮಾರ್ ನೀ.ಹ ಅಭಿನಂದನಾ ನುಡಿಗಳನ್ನಾಡಿದರು.
ಇದೇ ವೇಳೆ ತುಮಕೂರು ಉಪ ವಿಭಾಗಾಧಿಕಾರಿ ನಾಹಿದಾ ಜಮ್ ಜಮ್, ಸಾಮಾಜಿಕ ಹೋರಾಟಗಾರ ಶ್ರೀಪಾದ ಭಟ್, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಆಶಾ ಬಗ್ಗನಡು, ಡಾ.ವೈ.ಕೆ.ಬಾಲಕೃಷ್ಣಪ್ಪ, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಡಾ.ಬಾಲಗುರುಮೂರ್ತಿ, ಕೆಂಚಮಾರಯ್ಯ, ಡಾ.ಮುರಳೀಧರ್, ನರಸೀಯಪ್ಪ, ಎಂ.ಸಿ.ನರಸಿಂಹಮೂರ್ತಿ ಭಾಗವಹಿಸಿದ್ದರು.


