Monday, February 23, 2026
Google search engine
Homeಚಳುವಳಿಸಂಪೂರ್ಣ ಒಳಮೀಸಲಾತಿಗೆ ಆಗ್ರಹಿಸಿ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ

ಸಂಪೂರ್ಣ ಒಳಮೀಸಲಾತಿಗೆ ಆಗ್ರಹಿಸಿ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ

ಮುಂಬರುವ ಕರ್ನಾಟಕ ರಾಜ್ಯದ ಬಜೆಟ್‌ ಅಧಿವೇಶನದಲ್ಲಿ ನೇರ ನೇಮಕಾತಿ, ಪದೊನ್ನತ್ತಿ, ಬ್ಯಾಕ್‌ಲಾಗ್, ಕೆಐಎಡಿಬಿ, ಬಿಡಿಎ ಹಾಗೂ ಸರಕಾರಿಗುತ್ತಿಗೆ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಸಂಪೂರ್ಣ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ತುಮಕೂರು ನಗರದ ಟೌನ್‌ಹಾಲ್‌ನಲ್ಲಿ ಸಮಾವೇಶಗೊಂಡ ಸಾವಿರಾರು ಒಳಮೀಸಲಾತಿ ಹೋರಾಟ ಸಮಿತಿಯ ಸದಸ್ಯರುಗಳು, ಅಶೋಕ ರಸ್ತೆಯ ಮೂಲಕ ಚರ್ಚ್ ಸರ್ಕಲ್, ಕೋಡಿ ಸರ್ಕಲ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ, ಜಿಲ್ಲಾಧಿಕಾರಿ ಶುಭಾ ಕಲ್ಯಾಣ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತುಮಕೂರು ಜಿಲ್ಲಾ ಒಳಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ, ರಾಜ್ಯ ಸರಕಾರ ನ್ಯಾ.ನಾಗಮೋಹನ್‌ ದಾಸ್‌ ಅವರ ಸಮಿತಿ ವರದಿಯನ್ನು ಆಧರಿಸಿ ಒಳಮೀಸಲಾತಿಯನ್ನು ಘೋಷಣೆ ಮಾಡಿದೆ. ನಾವು ಯಾರ ಪಾಲನ್ನು ಕೇಳುತ್ತಿಲ್ಲ. ನಮ್ಮ ಪಾಲಿನ ಹಕ್ಕನ್ನು ಎಲ್ಲಾ ರಂಗದಲ್ಲಿಯೂ ನೀಡಿ ಎಂದು ಕೇಳುತಿದ್ದೇವೆ. ಇದು ನಮ್ಮ ನ್ಯಾಯ ಸಮ್ಮತ ಬೇಡಿಕೆಯಾಗಿದೆ. ಮಾದಿಗರು ಮತ್ತು ಹೊಲೆಯರ ಮೇಲೆ ರಾಜ್ಯ ಸರಕಾರ ಪರಸ್ವರ ದೋಷಾರೋಪಣೆ ಮಾಡುವುದರನ್ನು ಬಿಟ್ಟು, ಯಾರಿಗೂ ಅನ್ಯಾಯವಾಗದ ರೀತಿ, ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಈ ಬಜೆಟ್‌ ಅಧಿವೇಶನದಲ್ಲಿ ಸಂಪೂರ್ಣ ಒಳಮೀಸಲಾತಿ ಜಾರಿ ಘೋಷಿಸಬೇಕು. ನಮ್ಮ ತಾಳ್ಮೆ ಪರೀಕ್ಷೆ ಮಾಡಲು ಸರಕಾರ ಹೋಗಬಾರದು ಎಂಬ ಎಚ್ಚರಿಕೆ ನೀಡಿದರು.

ಕರ್ನಾಟಕ ಮಾದಾರ ಮಹಾಸಭಾದ ಜಿಲ್ಲಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ, ಕೆಲವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಒಳಮೀಸಲಾತಿ ನಿಗಧಿಯಾಗಿರುವುದು ಜನಸಂಖ್ಯೆಯ ಜೊತೆಗೆ,ಅವರ ಸಾಮಾಜಿಕ, ಶೈಕ್ಷಣಿಕ, ಅರ್ಥಿಕ ಹಿಂದುಳಿದಿರುವ ಆಧಾರದಲ್ಲಿ, ಆದರೆ ಕೆಲವರು ತಪ್ಪು ಮಾಹಿತಿ ನೀಡಿ, ಇಷ್ಟು ದಿನದ ಹೋರಾಟವನ್ನು ಮಣ್ಣು ಪಾಲು ಮಾಡಲು ಹೊರಟಿದ್ದಾರೆ. ಇದಕ್ಕೆ ನಾವು ಎಂದಿಗೂ ಆಸ್ಪದ ನೀಡುವುದಿಲ್ಲ. ಇಲ್ಲಿ ಪಕ್ಷ ಮುಖ್ಯವಲ್ಲ, ಸಮುದಾಯ ಮುಖ್ಯ. ಹಾಗಾಗಿ ಯಾರ ವಿರುದ್ದ ಹೋರಾಟಕ್ಕೂ ನಾವು ಸಿದ್ದರಿದ್ದೇವೆ ಎಂಬುದನ್ನು ಸರಕಾರದ ಗಮನಕ್ಕೆ ತರಬಯಸುತ್ತೇನೆ ಎಂದರು.

ಹಿರಿಯ ಹೋರಾಟಗಾರ ಕೆ.ದೊರೆರಾಜು ಮಾತನಾಡಿ, ನ್ಯಾ.ನಾಗಮೋಹನ್‌ದಾಸ್ ಸಮಿತಿ ರಚಿಸಿ, ಅದರ ವರದಿಯನ್ನು ಪಡೆದುಕೊಂಡು, ಪರಿಶಿಷ್ಟ ಜಾತಿಗಳನ್ನು ಜನಸಂಖ್ಯೆ ಮತ್ತು ಹಿಂದುಳಿದಿರುವಿಕೆಯ ಆಧಾರದಲ್ಲಿ ಮಾಡಿದ ವರ್ಗೀಕರಣವನ್ನು ಒಪ್ಪಿಕೊಂಡಿರುವ ಸರಕಾರ ಅದನ್ನು ಜಾರಿಗೆ ತರಲು ಮೀನಾಮೇಷ ಎಣಿಸುತ್ತಿದೆ. ಬೊಮ್ಮಾಯಿ ಅವರ ಸರಕಾರ ಹೆಚ್ಚು ಮಾಡಿದ ಮೀಸಲಾತಿ ಪ್ರಮಾಣ ಹಾಗೂ ಒಳಮೀಸಲಾತಿಯನ್ನು ಸಂವಿಧಾನದ 9ನೇ ಷಡ್ಯುಲ್ ಗೆ ಸೇರಿಸುವುದು. ಶಾಶ್ವತ ಆಯೋಗ ರಚನೆ ಮುಂತಾದ ವಿಚಾರಗಳನ್ನು ಸರಕಾರ ಬಜೆಟ್‌ ಅಧಿವೇಶನದಲ್ಲಿ ಜಾರಿಗೆ ತರುವ ಭರವಸೆ ನೀಡಬೇಕು. ಒಳಮೀಸಲಾತಿ ವಿಷಯ ಇಟ್ಟುಕೊಂಡು 2028ರ ಚುನಾವಣೆಯ ಗೆಲುವಿನ ಕನಸು ಕಾಣುವುದನ್ನು ಬಿಟ್ಟು, ಸಾಮಾಜಿಕ ನ್ಯಾಯಕ್ಕಾಗಿ ಹಾತೊರೆಯುತ್ತಿರುವ ಸಮುದಾಯಕ್ಕೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿದರು.

ಜಿ.ಪಂ.ಮಾಜಿ ಸದಸ್ಯ ಕೆಂಚಮಾರಯ್ಯ ಮಾತನಾಡಿದರು. ಮಾಜಿ ಶಾಸಕ ಗಂಗಹನುಮಯ್ಯ, ಹೋರಾಟಗಾರ ಡಾ.ಅರುಂಧತಿ, ಪಾವಗಡ ಶ್ರೀರಾಮ, ವಾಲೆಚಂದ್ರಯ್ಯ, ಹನುಮಂತರಾಯಪ್ಪ, ಕೊಟ್ಟಶಂಕರ್, ದೊಡ್ಡೇರಿ ಕಣಿಮಯ್ಯ, ನರಸೀಯಪ್ಪ, ಕೊಡಿಯಾಲ ಮಹದೇವ್, ಉದ್ಯಮಿ ಡಿ.ಟಿ.ವೆಂಕಟೇಶ್, ಹೊಳಕಲ್ಲು ಅಂಜನಪ್ಪ, ಗಂಗರಾಜು, ನವೀನ್ ಪೂಜಾರಹಳ್ಳಿ, ಸಿರಾ ರಾಜಸಿಂಹ, ಕುಣಿಗಲ್ ಶಿವಶಂಕರ್ ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular