ತಮಿಳುನಾಡಿಗೆ ಕೆಆರ್.ಎಸ್ ನಿಂದ ತಕ್ಷಣವೇ ಬಾಕಿ ನೀರನ್ನು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕ ಸರ್ಕಾರಕ್ಕೆ ಹೇಳಿದೆ.
ನವದೆಹಲಿಯಲ್ಲಿ ಸೆಪ್ಟೆಂಬರ್ 27ರಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 14ನೇ ಸಭೆಯಲ್ಲಿ ಅಧ್ಯಕ್ಷ ಎಸ್.ಕೆ.ಹಲ್ದಾರ್ ಕೆಆರ್.ಎಸ್ ನಿಂದ ತಮಿಳುನಾಡಿಗೆ ನೀರು ಹರಿಸುವಂತೆ ಸೂಚನೆ ನೀಡಿದ್ದಾರೆ.
ಕರ್ನಾಟಕ ಸಭೆಯಲ್ಲಿ ಮೇಕೆದಾಟು ಯೋಜನೆಯನ್ನು ಪ್ರಸ್ತಾಪಿಸುತ್ತಿದ್ದಂತೆಯೇ ತಮಿಳುನಾಡು, ಕೇರಳ ಮತ್ತು ಪುದುಚರಿ ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಚರ್ಚೆಗೆ ಅವಕಾಶ ನೀಡದಂತೆ ಅಡ್ಡಿಪಡಿಸಿದವು ಎಂದು ವರದಿಯಾಗಿದೆ.
ಮೇಕೆದಾಟು ಯೋಜನೆಗೆ ಮೂರು ರಾಜ್ಯಗಳು ವಿರೋಧ ವ್ಯಕ್ತಪಡಿಸಿದಾಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಹಲ್ದಾರ್ ನಾಲ್ಕು ರಾಜ್ಯಗಳು ಈ ಬಗ್ಗೆ ಸಮ್ಮತಿಸಿದಾಗ ಚರ್ಚೆ ಮಾಡಬಹುದು ಎಂದು ಹೇಳಿದರು.
ಆದರೆ ಕರ್ನಾಟಕ ತಮಿಳುನಾಡಿಗೆ ಅಕ್ಬೋಬರ್ ತಿಂಗಳಲ್ಲಿ ಹರಿಸಬೇಕಾದ ನೀರನ್ನು ಕೂಡಲೇ ಬಿಡುವಂತೆ ಪ್ರಾಧಿಕಾರ ತಿಳಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ತಮಿಳುನಾಡು ಅಧಿಕಾರಿಗಳು ‘ಸೆ.26ರವರೆಗೆ 119.5 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ ಕರ್ನಾಟಕ ಕೇವಲ 85 ಟಿಎಂಸಿ ನೀರನ್ನು ಮಾತ್ರ ಹರಿಸಿದೆ. ಅಕ್ಟೋಬರ್ ಖೋಟ ನೀರನ್ನು ಹರಿಸಿಲ್ಲ. ಕಾವೇರಿ ನದಿ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ನೀರು ಅಗತ್ಯವಾಗಿದೆ. ಹಾಗಾಗಿ ಕೂಡಲೇ ನೀರು ಹರಿಸುವಂತೆ ಸೂಚಿಸಬೇಕೆಂದು ಆಗ್ರಹಿಸಿದರು.