ಅಕ್ಟೋಬರ್ 1 ರಿಂದ ಚಿತ್ರಮಂದಿರಗಳಲ್ಲಿ ನೂರಕ್ಕೆ 100ರಷ್ಟು ಮಂದಿ ಕುಳಿತು ಚಲನಚಿತ್ರ ವೀಕ್ಷಣೆಗೆ ಅವಕಾಶ ಮತ್ತು ಅಕ್ಟೋಬರ್ 3 ರಿಂದ ಎಲ್ಲಾ ಪಬ್ ಗಳ ಆರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಲು ತೀರ್ಮಾನಿಸಿದೆ.
ಬೆಂಗಳೂರಿನಲ್ಲಿ ಕೊವಿಡ್ ಪರಿಸ್ಥಿತಿ ಪುನರಾವಲೋಕನ ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಶೇ.0.66ರಷ್ಟು ಪಾಸಿಟಿವಿಟಿ ಇದೆ. ಹೆಚ್ಚು-ಕಡಿಮೆಯಾಗದೆ ಸ್ಥಿರವಾಗಿದೆ. ಹಾಗಾಗಿ ಚಿತ್ರಮಂದಿರಗಳಲ್ಲಿ ಭರ್ತಿ ಕುಳಿತು ಚಿತ್ರ ವೀಕ್ಷಣೆಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಅಕ್ಟೋಬರ್ 3ರಿಂದ ರಾಜ್ಯದಲ್ಲಿ ಪಬ್ ಗಳನ್ನು ಆರಂಭಿಸಲು ಅನುಮತಿ ನೀಡಿದೆ. ಕೆಲವು ಜಿಲ್ಲೆಗಳಲ್ಲಿ ಹೆಚ್ಚು ಪಾಸಿಟಿವಿಟಿ ಇದ್ದು ಶೇ.1ರಷ್ಟು ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಶೇಕಡ 50 ಜನರು ಚಿತ್ರಗಳನ್ನು ಥಿಯೇಟರ್ ಗಳಲ್ಲಿ ವೀಕ್ಷಣೆಗೆ ಅನುಮತಿ ನೀಡಿದೆ ಎಂದು ತಿಳಿಸಿದರು.
ರಾಜ್ಯದ ಯಾವ ಜಿಲ್ಲೆಗಳಲ್ಲಿ ಕೊರೊನ ಪಾಸಿಟಿವಿಟಿ 2ರಷ್ಟು ಇದೆಯೊ ಅಂತಹ ಜಿಲ್ಲೆಗಳಲ್ಲಿ ಚಿತ್ರಮಂದಿರಗಳು ಮತ್ತು ಪಬ್ ತೆರೆಯಲು ಅವಕಾಶವಿಲ್ಲ. ಸರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಗರ್ಭಿಣಿಯರು ಮತ್ತು ಮಕ್ಕಳು ಚಿತ್ರಮಂದಿರಗಳಿಗೆ ಹೋಗುವುದನ್ನು ನಿರ್ಬಂಧಿಸಲಾಗಿದೆ ಎಂದರು.
ರಾತ್ರಿ ಕರ್ಪ್ಯೂವನ್ನು ಸಡಿಲಿಕೆ ಮಾಡಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗಿಜಾವ 5 ಗಂಟೆಯವರೆಗೆ ಕರ್ಪ್ಯೂ ವಿಧಿಸಲಾಗಿದೆ. ಶಾಲೆಗಳನ್ನು 5 ದಿನ ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ನಡೆಸಲಾಗುವುದು. ಆಪ್ ಲೈನ್ ತರಗತಿಗಳನ್ನು 6 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಕೇರಳ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿ ಕಠಿಣ ನಿಯಮಗಳನ್ನು ಹೇರಲಾಗಿದೆ. ಕೊವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಮೈಸೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಿದರು.


