ತುಮಕೂರು ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ ಜೀಪು ಚಾಲಕ ದೇವರಾಜು ಶಿಕ್ಷಕಿಯರೊಂದಿಗೆ ಅನುಚಿತವಾಗಿ ನಡೆದುಕೊಳ್ಳುವುದೂ ಅಲ್ಲದೆ ಜಾತಿ ನಿಂದನೆ ಮಾಡಿ ಅವಮಾನ ಮಾಡುತ್ತಿದ್ದಾನೆಂದು ಆರೋಪ ಕೇಳಿಬಂದಿದೆ. ಈ ಸಂಬಂಧ ಶಿಕ್ಷಕಿಯರು ಪೊಲೀಸರಿಗೆ ದೂರು ನೀಡಿದರೂ ಎಫ್ಐಆರ್ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಎಸ್ಎಫ್ಐ ಮತ್ತು ದಲಿತ ಸಂಘಟನೆಗಳು ಆರೋಪಿಸಿವೆ.
ಚಾಲಕ ದೇವರಾಜ ಅವರ ವಿರುದ್ಧ ಶಿಕ್ಷಕಿಯರು ಬಿಇಓ ಹನುಮನಾಯ್ಕ್ ಅವರಿಗೆ ಮೂರು ಬಾರಿ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದರೂ ಬಿಇಒ ಚಾಲಕನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಆತನ ರಕ್ಷಣೆಗೆ ನಿಂತಿದ್ದಾರೆ. ಮಾಜಿ ಶಾಸಕರೊಬ್ಬರು ಕೂಡ ಬಿಇಒ ಬೆಂಬಲಕ್ಕೆ ನಿಂತಿದ್ದಾರೆ ಎಂದು ಸಂಘಟನೆಗಳು ದೂರಿವೆ.
ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕಿಯರು ಜಯನಗರದಲ್ಲಿರುವ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಎಫ್ಐಆರ್ ದಾಖಲಿಸಿಲ್ಲ. ಹಲವು ಬಾರಿ ಬಿಇಒ ಮತ್ತು ಪೊಲೀಸ್ ಠಾಣೆಗೆ ಅಲೆದು ಸಾಕಾಗಿದೆ ಎಂದು ಶಿಕ್ಷಕಿಯರು ಅಳಲು ತೋಡಿಕೊಂಡಿದ್ದಾರೆ.

ಬಿಇಓ ತುಮಕೂರು ತಾಲೂಕಿನ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದರು. ಆಗ ಚಾಲಕ ಆ ಇಬ್ಬರು ಶಿಕ್ಷಕಿಯರಿಗೆ ಗ್ರಾಮಸ್ಥರ ಏದುರೇ ಜಾತಿನಿಂದನೆ ಮಾಡಿ, ಏಕವಚನದಿಂದ ಬೈದು ಅವಮಾನ ಮಾಡಿದ್ದಾನೆ. ಈ ಸಂಬಂಧ ಬಿಇಓ ಹನುಮನಾಯ್ಕ್ ಅವರಿಗೆ ಮೂರು ದೂರುಗಳನ್ನು ನೀಡಲಾಗಿದೆ. ಆದರೂ ಚಾಲಕನ ಬಗ್ಗೆ ಕ್ರಮ ಕೈಗೊಳ್ಳದೆ ಶಿಕ್ಷಕಿಯರನ್ನೇ ಬೆದರಿಸಿ ಕಳಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಚಾಲಕನಿಂದ ಹಲವು ಶಿಕ್ಷಕಿಯರು ಕಿರುಕುಳಕ್ಕೆ ಒಳಗಾಗಿದ್ದರೂ ಹೇಳಿಕೊಳ್ಳಲು ಮುಂದೆ ಬರುತ್ತಿಲ್ಲ. ಹೇಳಿದರೆ ತಮ್ಮ ವಿರುದ್ಧವೇ ಕ್ರಮ ಕೈಗೊಳ್ಳಬಹುದು ಎಂಬ ಭಯ ಕಿರುಕುಳಕ್ಕೆ ಒಳಗಾಗಿರುವ ಶಿಕ್ಷಕಿಯರನ್ನು ಕಾಡುತ್ತಿದೆ. ಹೀಗಾಗಿ ಕೂಡಲೇ ಶಿಕ್ಷಕಿಯರಿಗೆ ಕಿರುಕುಳ ನೀಡುತ್ತಿರುವ ಬಿಇಒ ಚಾಲಕ ದೇವರಾಜನನ್ನು ಅಮಾನತು ಮಾಡಬೇಕು. ಆತನ ವಿರುದ್ಧ ದೂರು ದಾಖಲಿಸಿ ಬಂಧಿಸಬೇಕು ಎಂದು ಎಸ್ಎಫ್ಐ ಮತ್ತು ದಲಿತ ಸಂಘಟನೆಗಳು ಆಗ್ರಹಿಸಿವೆ.


