ದೆಹಲಿಯ ಕೋರ್ಟ್ ಆವರಣದಲ್ಲಿ ಗ್ಯಾಂಗ್ ವಾರ್ ನಡೆದಿದೆ. ಗ್ಯಾಂಗ್ ಸ್ಟಾರ್ ಗೋಗಿ ವಿರೋಧಿ ಗುಂಪು ಕೋರ್ಟ್ ಆವರಣದಲ್ಲಿ ಮನಬಂದಂತೆ ಗುಂಡಿನ ದಾಳಿ ನಡೆಸಿ ಜಿತೇಂದ್ರಮಾನ್ ಅಲಿಯಾಸ್ ಗೋಗಿಯನ್ನು ಹತ್ಯೆಗೈದಿದೆ. ಘಟನೆಯಲ್ಲಿ ಮತ್ತೆ ಇಬ್ಬರು ಮೃತಪಟ್ಟಿದ್ದು ದೆಹಲಿಯ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಜೀತೇಂದ್ರ ಗೋಗಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆತನ ವಿರೋಧಿ ಗುಂಪು ಗುಂಡಿನ ದಾಳಿ ನಡೆಸಿದೆ. ಆಗ ನ್ಯಾಯಾಧೀಶರು, ವಕೀಲರು ಮತ್ತು ಇತರರು ಕೋರ್ಟ್ ನ ಬೇರೆ ಭಾಗದಲ್ಲಿ ಬಚ್ಚಿಟ್ಟುಕೊಳ್ಳುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
ಭದ್ರತಾ ಸಿಬ್ಬಂದಿ ಗ್ಯಾಂಗ್ ಸ್ಟರ್ ಗೋಗಿ ರಕ್ಷಣೆಗೆ ನಿಂತರೂ ದಾಳಿಕೋರರ ಗುಂಪು ಗುಂಡಿನ ದಾಳಿ ನಡೆಸಿ ಆತನನ್ನು ಹತ್ಯೆ ಮಾಡಿದೆ. ಗೋಗಿ ದೇಹಕ್ಕೆ ಮೂರು ಗುಂಡುಗಳು ಹೊಕ್ಕಿವೆ ಎಂದು ವರದಿಗಳು ತಿಳಿಸಿವೆ. ಈ ಸಂದರ್ಭದಲ್ಲಿ ಭದ್ರತಾಸಿಬ್ಬಂದಿ ಕೂಡ ದಾಳಿಕೋರರ ಮೇಲೆ ಗುಂಡು ಹಾರಿಸಿದೆ. ಆಗ ಇಬ್ಬರು ಶಸ್ತ್ರಸಜ್ಜಿತ ದಾಳಿಕೋರರು ಹತ್ಯೆಯಾಗಿದ್ದಾರೆ ಎಂದು ಹೇಳಲಾಗಿದೆ.
ಗುಂಡಿನ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಕೋರರು ಗುಂಡಿನ ದಾಳಿ ನಡೆಸುತ್ತಿರುವ ವೇಳೆ ಇಬ್ಬರು ಮಕ್ಕಳು ಓಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ಮಹಿಳಾ ವಕೀಲರೊಬ್ಬರು ಬಚ್ಚಿಟ್ಟುಕೊಳ್ಳುವ ದೃಶ್ಯವೂ ಇದೆ.
ಗ್ಯಾಂಗ್ ಸ್ಟರ್ ಗೋಗಿಯನ್ನು ನ್ಯಾಯಾಲಯಕ್ಕೆ ಕರೆತರುವ ಸಂದರ್ಭದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆಯನ್ನು ಕೈಗೊಳ್ಳದೆ ಇರುವುದರಿಂದ ಭದ್ರತಾಲೋಪ ಉಂಟಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಟಿಲ್ಲು ಗ್ಯಾಂಗ್ ಈ ದಾಳಿಯನ್ನು ನಡೆಸಿದೆ. ಗ್ಯಾಂಗ್ ಸ್ಟರ್ ಗೋಗಿಯನ್ನು ನ್ಯಾಯಾಲಯಕ್ಕೆ ಕರೆತರುವ ವೇಳೆ ಹತ್ಯೆ ಮಾಡಲು ಟಿಲ್ಲು ಗ್ಯಾಂಗ್ ನಿರ್ಧರಿಸಿತ್ತು. ಈ ಹಿಂದೆ ಈ ಎರಡು ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದಾಗ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು ಎಂದು ವರದಿಗಳು ತಿಳಿಸಿವೆ.


