ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಪ್ಯಾರಲಿಸಿಸ್ ಗೆ ಒಳಗಾಗಿದ್ದು ಅವರನ್ನು ಬೆಂಗಳೂರಿಗೆ ಕರೆತಂದರೆ ನಿಮ್ಹಾನ್ಸ್ ನಲ್ಲಿ ವೆಂಟಿಲೇಟ್ ದೊರೆಯುತ್ತಿಲ್ಲ. ಸರ್ಕಾರದ ಬಳಿ ವೆಂಟಿಲೇಟರ್ ಗಳು ಇವೆಯೋ ಇಲ್ಲವೋ ಎಂಬುದನ್ನ ಸ್ಪಷ್ಟಪಡಿಸಬೇಕು ಎಂಬ ಬಿಜೆಪಿ ಸದಸ್ಯ ಹರತಾಳು ಹಾಲಪ್ಪ ಅವರ ಪ್ರಶ್ನೆಗೆ ಸರ್ಕಾರ ಮುಜುಗರಕ್ಕೆ ಒಳಗಾಗಬೇಕಾದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಹರತಾಳು ಹಾಲಪ್ಪ, ನನ್ನ ಕ್ಷೇತ್ರದ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಹಾಲಿ ಸದಸ್ಯರಿಗೆ ಪಾರ್ಶ್ವವಾಯಪೀಡಿತರು. ಶಿವಮೊಗ್ಗದಿಂದ ಬೆಂಗಳೂರಿಗೆ ಕರೆತರಲಾಯಿತು. ಆದರೆ ನಿಮ್ಹಾನ್ಸ್ ನಲ್ಲಿ ಅಡ್ಮಿಟ್ ಮಾಡಿಕೊಳ್ಳಲಿಲ್ಲ. ನಮ್ಮಂಥವರಿಗೆ ಹೀಗಾದರೆ ಇನ್ನು ಬೇರೆಯವರ ಪಾಡೇನು ಎಂದು ಪ್ರಶ್ನಿಸಿದರು.
ಹಾಲಪ್ಪ ಪ್ರಶ್ನೆಗೆ ಉತ್ತರಿಸಿದ ಸಚಿವ ಡಾ. ಸುಧಾಕರ್, ನಿಮ್ಹಾನ್ಸ್ ಗೆ ಒಳರೋಗಿಗಳು ದಕ್ಷಣಭಾರತದಿಂದ ಬರುತ್ತಾರೆ. ಹಾಗಾಗಿ ನಿಮ್ಹಾನ್ಸ್ ನಲ್ಲಿ ಬೆಡ್ ಗಳು ಭರ್ತಿಯಾಗಿವೆ. ವೆಂಟಿಲೇಟರ್ ಖಾಲಿ ಇಲ್ಲ. ಆದ್ದರಿಂದ ರೋಗಿಗೆ ಸೆಂಟ್ ಜಾನ್ ಆಸ್ಪತ್ರೆಗೆ ಮಾತನಾಡಿ ವ್ಯವಸ್ಥೆ ಮಾಡಿದ್ದೇನೆ. ನಿಮ್ಹಾನ್ಸ್ ನಲ್ಲಿ ವೆಂಟಿಲೇಟರ್ ಲೋಪ ಇದೆ ಎಂದು ಒಪ್ಪಿಕೊಂಡರು.
ಸಚಿವರ ಮಾತಿನಿಂದ ಮತ್ತಷ್ಟು ಕೆರಳಿದ ಹರತಾಳು ಹಾಲಪ್ಪ, ನಿಮ್ಹಾನ್ಸ್ ನಿರ್ದೇಶಕರು ಪೋನ್ ಎತ್ತುವುದಿಲ್ಲ. ನಿರ್ದೇಶಕರು ಯಾರು? ಕೇಂದ್ರ ಮತ್ತು ರಾಜ್ಯ ಸರ್ಕಾರ 10 ವೆಂಟಿಲೇಟರ್ ಒದಗಿಸಲು ಆಗುವುದಿಲ್ಲವೇ? ನಾನು ಈಗಾಗಲೇ ನನ್ನ ಅಕ್ಕನನ್ನು ಕಳೆದುಕೊಂಡಿದ್ದೇನೆ? ಸಮಸ್ಯೆ ಏನೆಂಬುದು ತಿಳಿದಿದೆ ಎಂದು ಅಸಮಾಧಾನ ಹೊರಹಾಕಿದರು.
ವೆಂಟಿಲೇಟರ್ ಇಲ್ಲವೇ ಎಂದು ಕೇಳಿದರೆ ಸುಮ್ಮನಿರಿಸಲು ಪ್ರಯತ್ನಿಸುತ್ತೀರ. ನಾನು ಸರ್ಕಾರದ ವಿರುದ್ಧ ಮಾತನಾಡುತ್ತಿಲ್ಲ. ಒಬ್ಬ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಚಿಕಿತ್ಸೆ ಕೊಡಿಸಲು ಆಗುತ್ತಿಲ್ಲ ಎಂಬ ನೋವು ನನ್ನ ಕಾಡುತ್ತಿದೆ ಎಂದು ಬೇಸರದಿಂದ ಹೇಳಿದರು.
ಆಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಮ್ಹಾನ್ಸ್ ನಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಇಷ್ಟಕ್ಕೆ ಸಮ್ಮನಾಗದ ಹರತಾಳು ಹಾಲಪ್ಪ, ವೆಂಟಿಲೇಟರ್ ಸಿಗುತ್ತಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಮತ್ತೆ ಕೆಲವು ಸದಸ್ಯರು ದನಿಗೂಡಿಸಿದರು. ನಿಮ್ಹಾನ್ಸ್ ನಿರ್ದೇಶಕರು ಫೋನ್ ರಿಸೀವ್ ಮಾಡುವುದಿಲ್ಲ ಎಂದು ಕೂಗಿ ಹೇಳಿದರು. ಅಷ್ಟರಲ್ಲಿ ಒಬ್ಬ ಸದಸ್ಯರು ಅಸೆಂಬ್ಲಿಗೆ ವೆಂಟಿಲೇಟರ್ ಹಾಕಿಸಿ ಎಂದು ವ್ಯಂಗ್ಯವಾಡಿದರು. ಹಾಲಪ್ಪ ಎತ್ತಿದ ಪ್ರಶ್ನೆಯಿಂದ ಸರ್ಕಾರ ತೀವ್ರ ಮುಜುಗರ ಎದುರಿಸುವಂತಹ ಸನ್ನಿವೇಶ ನಿರ್ಮಾಣವಾಗಿತ್ತು.


