ಪಶ್ಚಿಮ ಬಂಗಾಳದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಸೆಪ್ಟೆಂಬರ್ 30ರಂದು ಉಪಚುನಾವಣೆ ನಡೆಯಲಿದ್ದು, ಇಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು.
ಕೃಷಿ ಸಚಿವ ದೇಬದೇಶ್ ಭಟ್ಟಾಚಾರ್ಯ ರಾಜಿನಾಮೆಯಿಂದ ತೆರವಾಗಿದ್ದ ಭವಾನಿಪುರ ಕ್ಷೇತ್ರಕ್ಕೆ ಸೆಪ್ಟೆಂಬರ್ 30ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಮತ ಬ್ಯಾನರ್ಜಿ ಮುಖಂಡರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಬಿಜೆಪಿ ಮಹಾಭಾರತದ ದುರ್ಯೋಧನ ಮತ್ತು ದುಶ್ಯಾಸನನಿಂತ ಕೆಟ್ಟದ್ದಾಗಿದೆ. ಮೋದಿ, ಅಮಿತ್ ಶಾ 2021ರಲ್ಲಿ ನಡೆದ ನಂದಿಗ್ರಾಮ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಪಿತೂರಿ ಮಾಡಿದರು. ನನ್ನ ಮೇಲೆ ದಾಳಿ ನಡೆಯಿತು. ಹೊರಗಿನ ಗೂಂಡಾಗಳು ನನ್ನ ಮೇಲೆ ಹಲ್ಲೆ ನಡೆಸಿದರು” ಎಂದು ದೂರಿದ್ದಾರೆ.
ಮಮತಾ ಬ್ಯಾನರ್ಜಿ ನಾಮಪತ್ರ ಸಲ್ಲಿಸುವ ಕೆಲ ಗಂಟೆಗಳ ಮುನ್ನ ಬಿಜೆಪಿ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮಮತಾ ಬ್ಯಾನರ್ಜಿ ವಿರುದ್ಧ ಪಶ್ಚಿಮ ಬಂಗಾಳದ ಯುವ ಮೋರ್ಚಾದ ಉಪಾಧ್ಯಕ್ಷೆ ಪ್ರಿಯಾಂಕ ತಿಬ್ರೆವಾಲ್ ಅವರನ್ನು ಕಣಕ್ಕಿಳಿಸಿದೆ. ಪ್ರಿಯಾಂಕ ವಕೀಲೆಯೂ ಕೂಡ ಆಗಿದ್ದಾರೆ.
ಬಿಜೆಪಿ ಉಳಿದ ಎರಡು ಕ್ಷೇತ್ರಗಳಾದ ಸಂಸರ್ಗಂಜ್ ಕ್ಷೇತ್ರಕ್ಕೆ ಮಿಲನ್ ಘೋಷ್, ಜಂಗೀಪುರ ಕ್ಷೇತ್ರಕ್ಕೆ ಸುಜಿತ್ ದಾಸ್ ಅವರನ್ನು ಸ್ಪರ್ಧೆಗೆ ಇಳಿಸಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಭವಾನಿಪುರ ಕ್ಷೇತ್ರಕ್ಕೆ ಸಿಪಿಎಂನಿಂದ ಶ್ರೀಜಿತ್ ಬಿಸ್ವಾಸ್ ಅವರನ್ನು ಕಣಕ್ಕೆ ಇಳಿಸಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ಈ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇರಲು ನಿರ್ಧರಿಸಿದೆ.