ಕಾಂಗ್ರೆಸ್ ನಾಯಕತ್ವವನ್ನು ಹಳೆಯ ಜಮೀನ್ದಾರರಿಗೆ ಹೋಲಿಸಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(NCP)ದ ಮುಖ್ಯಸ್ಥ ಶರದ್ ಪವಾರ್ 2024ರ ಲೋಕಸಭಾ ಚುನಾವಣೆಯನ್ನು ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಎದುರಿಸಬೇಕೆಂಬ ಮಮತಾ ಬ್ಯಾನರ್ಜಿ ಹೇಳಿಕೆಯನ್ನು ಸಮರ್ಥಿಸಿದ್ದಾರೆ.
ಕಾಂಗ್ರೆಸ್ ನಾಯಕತ್ವ ದುರ್ಬಲವಾಗಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದು ನಾವು “ಮಮತಾ ಬ್ಯಾನರ್ಜಿ ಲೋಕಸಭಾ ಚುನಾವಣೆ ಒಗ್ಗಟ್ಟಿನಿಂದ ಎದುರಿಸಬೇಕೆಂದು ಹೇಳಿದರೆ, ಕಾಂಗ್ರೆಸ್ ರಾಹುಲ್ ಗಾಂಧಿ ನಾಯಕತ್ವವನ್ನು ಪ್ರತಿಪಾದಿಸುತ್ತಿದೆ” ಎಂದು ಹೇಳಿದ್ದಾರೆ.
ಹಿಂದೆ ಕಾಂಗ್ರೆಸ್ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಇತ್ತು. ಎಲ್ಲೆಲ್ಲಿಯೂ ತಾನೇ ಎಂದು ಹೇಳಿಕೊಳ್ಳುತ್ತಿತ್ತು. ಈಗ ಅಂತಹ ಸನ್ನಿವೇಶ ಇಲ್ಲ. ಈ ಬಗ್ಗೆ ಕಾಂಗ್ರೆಸ್ ರಿಯಾಲಿಟಿ ಚೆಕ್ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಒಂದು ಕಾಲಕ್ಕೆ ಕಾಂಗ್ರೆಸ್ ಪಕ್ಷ ದೇಶದ ಎಲ್ಲೆಡೆ ಇತ್ತು. ಕಾಲ ಬದಲಾದಂತೆ ಕಾಂಗ್ರೆಸ್ ತನ್ನ ಶಕ್ತಿ ಕಳೆದುಕೊಂಡಿದೆ. ಇದನ್ನು ಕಾಂಗ್ರೆಸ್ ಒಪ್ಪಿಕೊಳ್ಳಬೇಕು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಗೆ ಕಿವಿಮಾತು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಜಮೀನ್ದಾರನಿಗೆ ಸಾವಿರಾರು ಎಕರೆ ಜಮೀನು ಇತ್ತು. ಭೂಮಿತಿ ಕಾಯ್ದೆ ಬಂದ ನಂತರ ಆ ಭೂಮಿ ಗೇಣಿದಾರರ ಪಾಲಾಯಿತು. ಹಾಗಾಗಿ ಜಮೀನ್ದಾರನಿಗೆ 15-20 ಎಕರೆ ಜಮೀನು ಇದೆ. ರಾತ್ರಿ ಮಲಗಿದ ಜಮೀನ್ದಾರ್ ಬೆಳಗ್ಗೆ ಎದ್ದು ನೋಡಿದರು. ಸುತ್ತುಮುತ್ತಲಿನ ಪ್ರದೇಶ ಅಚ್ಚಹಸಿರಾಗಿತ್ತು. ಇದನ್ನು ನೋಡಿದ ಜಮೀನ್ದಾರ ಹೇಳಿದನಂತೆ ಈ ಭೂಮಿ ಎಲ್ಲವೂ ನನ್ನದೇ” ಎಂದು. ಅದು ಒಂದು ಕಾಲಕ್ಕೆ ಆದರೆ ಈಗ ಆತನದಾಗಿರಲಿಲ್ಲ ಎಂದು ಕಾಂಗ್ರೆಸ್ ಪರಿಸ್ಥಿತಿಯನ್ನು ವಿವರಿಸಿದರು.
ಇತ್ತೀಚೆಗ ಕಾಂಗ್ರೆಸ್, ಬಿಜೆಪಿ ಮತ್ತು ಎಡಪಕ್ಷಗಳನ್ನು ಹೊರತುಪಡಿಸಿದ ಪಕ್ಷಗಳ ಮುಖಂಡರು ಎರಡು-ಮೂರು ಸುತ್ತಿನ ಮಾತುಕತೆ ನಡೆಸಿದ್ದರು. ಮಮತಾ ಬ್ಯಾನರ್ಜಿ ಅವರು ಶರದ್ ಪವಾರ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು. ಈ ಹಿನ್ನೆಲೆಯಲ್ಲಿ ಶರದ್ ಪವಾರ್ ನೀಡಿರುವ ಹೇಳಿಕೆ ಹೆಚ್ಚು ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ.