ದೇಶದಲ್ಲಿ ಸೆಪ್ಟೆಂಬರ್ 9ರಂದು 34,973 ಹೊಸ ಕೊರೊನ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು 260 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದೆ.
ಕೇರಳದಲ್ಲಿ ಕೊರೊನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಸೆಪ್ಟೆಂಬರ್ 9ರಂದು ಒಂದೇ ದಿನ 26,200 ಹೊಸ ಪ್ರಕರಣಗಳು ದೃಢಪಟ್ಟಿವೆ. ಸಾವಿನ ಪ್ರಮಾಣವೂ ಅಧಿಕವಾಗಿದೆ. ಮಹಾರಾಷ್ಟ್ರದಲ್ಲಿ 4,912 ಹೊಸ ಪ್ರಕರಣಗಳು ಕಂಡುಬಂದಿವೆ.
ಕೊರೊನ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎರಡನೇ ವರ್ಷವೂ ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿಯನ್ನು ಸ್ಥಗಿತ ಗೊಳಿಸಿದೆ. ಮುಂಬೈ ನಗರದಲ್ಲಿ ಪೊಲೀಸರು ನಿಷೇಧಾಜ್ಞೆ ಹೇರಿದ್ದಾರೆ. 4 ಮಂದಿಗಿಂತ ಹೆಚ್ಚಿನ ಜನರು ಗುಂಪು ಸೇರದಂತೆ ನಿರ್ಬಂಧ ವಿಧಿಸಲಾಗಿದೆ.
ಗಣಪತಿ ಪೆಂಡಾಲ್ ಗಳಿಗೆ ಜನರು ತೆರಳದೆ ವರ್ಚುಯಲ್ ಮಾದರಿಯಲ್ಲಿ ಗಣೇಶ ದರ್ಶನ ಮತ್ತು ಪೂಜೆ ಮಾಡಿಸಬೇಕು.ಕೊರೊನ ಮೂರನೇ ಅಲೆ ಭೀತಿಯಿಂದಾಗಿ ಜನರು ಗಣೇಶ್ ಪೆಂಡಾಲ್ ಗಳಿಗೆ ಹೋಗಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಕೊರೊನ ಸೋಂಕು ಇಳಿಕೆಯಾಗಿದೆ. ನಿನ್ನೆಯ ವರದಿಯಂತೆ ಕೇವಲ 36 ಹೊಸ ಪ್ರಕರಣಗಳು ದಾಖಲಾಗಿದ್ದು, ಸಾವಿನ ಪ್ರಕರಣಗಳು ವರದಿಯಾಗಿಲ್ಲ.
ಕೇರಳದಲ್ಲಿ ಇದುವರೆಗೆ 43 ಲಕ್ಷ ಜನರಿಗೆ ಕೊರೊನ ಪ್ರಕರಣಗಳು ದೃಢಪಟ್ಟಿದ್ದು 22,126 ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 65 ಲಕ್ಷ ಕೊರೊನ ಸೋಂಕು ಪ್ರಕರಣಗಳು ವರದಿಯಾಗಿದ್ದು 1.38 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ 29.6ಲಕ್ಷ ಕೊರೊನ ಪ್ರಕರಣಗಳು ಪತ್ತೆಯಾಗಿದ್ದು 37,462 ಮಂದಿ ಮರಣಹೊಂದಿದ್ದಾರೆ. ತಮಿಳುನಾಡಿನಲ್ಲಿ 26.3 ಲಕ್ಷ ಪ್ರಕರಣಗಳು ವರದಿಯಾಗಿದ್ದು 35,094 ಮಂದಿ ಬಲಿಯಾಗಿದ್ದಾರೆ. ಆಂಧ್ರಪ್ರದೇಶದಲ್ಲಿ 20.3 ಲಕ್ಷ ಕೊರೊನ ಪ್ರಕರಣಗಳು ಕಂಡು ಬಂದಿದ್ದು 13,964 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.