ಕನ್ನಡ ಸಾಹಿತ್ಯ ವಲಯದಲ್ಲಿ ಅಸಹನೆ, ವರ್ಗ ತಾರತಮ್ಯ, ಅಸೂಯೆ, ಗುಂಪುಗಾರಿಕೆ, ಅಧಿಕಾರದ ಓಲೈಸುವಿಕೆ ರಾಜಕಾರಣ, ಪ್ರಶಸ್ತಿ ಪುರಸ್ಕಾರದ ವಾಂಛೆ ಸಾಹಿತ್ಯ ವಲಯದ ವಾತಾವರಣವನ್ನು ಅಸಹನೀಯಗೊಳಿಸಿವೆ. ಸಾಹಿತ್ಯ ವಲಯ ಎಡಪಂಥ, ಬಲಪಂಥ ಎಂದು ಎರಡು ವಿಭಿನ್ನ ವರ್ಗಗಳಲ್ಲಿ ಗುರುತಿಸಿಕೊಂಡಿದೆ. ಒಬ್ಬ ಬರಹಗಾರ ಈ ಯಾವುದಾದರೂ ಗುಂಪಿನೊಂದಿಗೆ ಗುರುತಿಸಿಕೊಂಡಲ್ಲಿ ಮಾತ್ರ ತನ್ನದೇ ಆದ ಐಡೆಂಟಿಟಿ ಹೊಂದಲು ಸಾಧ್ಯ ಎನ್ನುವ ವಾತಾವರಣ ಸಾಹಿತ್ಯ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಡಿ.ಎನ್.ಯೋಗೀಶ್ವರಪ್ಪ ತಿಳಿಸಿದ್ದಾರೆ.
ತುಮಕೂರು ನಗರದ ಸಿದ್ಧಗಂಗಾ ಬಿಇಡಿ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಪ್ರೊ. ಬಿ.ವೀರಭದ್ರಯ್ಯ ಮಂಗಳಮ್ಮ ಮತ್ತು ವಿಶ್ವಸ್ತ ದತ್ತಿ ಉಪನ್ಯಾಸದಲ್ಲಿ ಇಂದಿನ ಸಾಹಿತ್ಯವಲಯ ಕುರಿತು ಮಾತನಾಡಿದರು.
ಪ್ರತಿ ಗುಂಪಿಗೂ ಬರೆಯಲು ಅವರದೇ ಆದ ಅಜೆಂಡಾಗಳಿವೆ. ಅಂಥದ್ದೊಂದು ಸ್ಥಾಪಿತ ಅಜೆಂಡಾದ ಚೌಕಟ್ಟಿನಲ್ಲೇ ಬರೆಯಬೇಕಾದ ಅನಿವಾರ್ಯತೆ ಬರಹಗಾರನದು. ಒಂದು ಗುಂಪಿನ ಬರಹಗಾರನ ವಿರುದ್ಧ ಇನ್ನೊಂದು ಗುಂಪಿನವರು ಕತ್ತಿ ಮಸೆಯುತ್ತಾರೆ. ಇಂತಹ ವಾತಾವರಣದಲ್ಲಿ ಪರಭಾಷೆಗಳ ಪೈಪೋಟಿ ಶಿಕ್ಷಣದ ಮಾಧ್ಯಮವಾಗಿ ಬೇರೂರಿರುವ ಇಂಗ್ಲೀಷ್ ಭಾಷೆ ಕನ್ನಡ ಪುಸ್ತಕಗಳನ್ನು ಖರೀದಿಸಿ ಓದುವ ಓದುಗರ ಕೊರತೆ, ರಾಜಕಾರಣಿಗಳ ಸ್ವಹಿತಾಸಕ್ತಿ ಎಲ್ಲ ಸಮಸ್ಯೆಗಳ ನಡುವೆ ಕನ್ನಡ ಭಾಷೆ ತನ್ನ ನೆಲದಲ್ಲೇ ಅಪರಿಚಿತವಾಗುತ್ತದೆ ಎಂದು ವಿಷಾದಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಇಂದು ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿವೆ. ಜಾಗತೀಕರಣದ ಪರಿಣಾಮವಾಗಿ ಇಂಗ್ಲೀಷ್ ಭಾಷೆ ಮಹತ್ವ ಪಡೆದಿರುವುದರಿಂದ ಅದನ್ನು ಭಾಷೆ ಮಾತ್ರವಾಗಿ ಕಲಿಯದೆ ಅದನ್ನೇ ಕಲಿಕೆಯ ಮಾಧ್ಯಮವಾಗಿ ಮಾಡಿಕೊಳ್ಳಲಾಗಿದೆ. ಇಂತಹ ದಿನಮಾನದಲ್ಲಿ ಈ ನಾಡ ಭಾಷೆಯಾದ ಕನ್ನಡವನ್ನು ಎರಡನೇ ಭಾಷೆಯಾಗಿ ಶಾಲೆಗಳಲ್ಲಿ ಕಲಿಸುವ ದುರಂತ ಎದುರಾಗಿದೆ ಎಂದರು.
ದಿನದಿಂದ ದಿನಕ್ಕೆ ಇಂದಿನ ಬದುಕು ತೀವ್ರಗತಿಯಲ್ಲಿ ಬದಲಾಗುತ್ತಿದೆ. ಪರಿಸರ ಬದಲಾದಂತೆ ಸಾಹಿತ್ಯಾಭಿವ್ಯಕ್ತಿಯಲ್ಲೂ ಬದಲಾವಣೆಗಳಾಗಿವೆ. ಪ್ರಾಚೀನ ಕಾಲದಲ್ಲಿ ಶತಮಾನಗಳಿಗೊಮ್ಮೆ ಬದಲಾಗಿದ್ದರೆ ಇಂದು ಒಂದೇ ಶತಮಾನದಲ್ಲಿ ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯಗಳೆಂಬ ನಾಲ್ಕು ತಿರುವುಗಳನ್ನು ಕಂಡಿದೆ. ಇಂದಿನ ಸಾಹಿತಿಗಳಿಗೆ ನೇರವಾಗಿ ಜನತೆಯೊಂದಿಗೆ ಬೆಸೆದುಕೊಳ್ಳುವ ಕಾಲ ಒದಗಿದೆ ಎಂದರು.
ಪ್ರಾಂಶುಪಾಲ ಡಾ. ಬಿ.ಜ್ಯೋತಿ ಪಂತ್, ಪ್ರಾಧ್ಯಾಪಕ ಡಾ ಎಂ.ಗೋವಿಂದರಾಯ, ಡಾ. ಸಣ್ಣಹೊನ್ನಯ್ಯ ಕಂಟಲಗೆರೆ,ಬೆಳ್ಳಾವಿ ಶಿವಕುಮಾರ್ ಇದ್ದರು.


