ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಉಲ್ ಫಿತರ್ ರಂಜಾನ್ ಹಬ್ಬವನ್ನು ತುಮಕೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸೇರಿದ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಶುಭಾಶಯ ಕೋರಿ ಮಾತನಾಡಿದ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್, ಪ್ರಪಂಚದಾದ್ಯಂತ ರಂಜಾನ್ ಹಬ್ಬದಲ್ಲಿ 30 ವ್ರತಗಳನ್ನು ಆಚರಿಸಿ, ನಾವೆಲ್ಲರೂ ಅನ್ನ, ಆಹಾರ ಬಿಟ್ಟು, ಕೆಡುಕನ್ನು ಬಿಟ್ಟು ಸಹೋದರತ್ವ, ಸಹಬಾಳ್ವೆಯಿಂದ 30 ದಿನಗಳನ್ನು ಕಳೆದಿದ್ದೇವೆ ಎಂದು ಹೇಳಿದರು.

ನಾವೆಲ್ಲರೂ 30 ದಿನಗಳ ಉಪವಾಸ ಇದ್ದು, ಜಕಾತ್ನ್ನು ಕೂಡ ಆಚರಿಸಿದ್ದೇವೆ. ಜಕಾತ್ ಎಂದರೆ ಪ್ರಪಂಚದ ಮಾನವರಲ್ಲಿ ಅಸಮತೋಲನ ಇದೆ, ಬಡವರು, ವಿಧವೆಯವರು, ಸಂಪತ್ತು ಉಳ್ಳವರು ಎಂದು. ಉಳ್ಳವರು ಬಡವರಿಗೆ ತಮ್ಮ ದುಡಿಮೆಯ ಒಂದಷ್ಟು ಭಾಗವನ್ನು ಜಕಾತ್ ನೀಡಿ ಅವರಿಗೂ ಕೂಡ ನಮ್ಮ ಜತೆ ಸಮಪಾಲು-ಸಮಬಾಳು ಒದಗಿಸಿಕೊಡುವುದು ರಂಜಾನ್ ಧ್ಯೇಯ ಎಂದು ತಿಳಿಸಿದರು.
ಪ್ರಪಂಚದಲ್ಲಿ ನಡೆಯುತ್ತಿರುವ ಯುದ್ಧಗಳು ನಿಲ್ಲಲಿ, ಮಾನವೀಯತೆಯ ಸಂದೇಶ ಎಲ್ಲರಿಗೂ ಹೋಗಲಿ. ಶಾಂತಿ ನೆಲೆಸಲಿ, ಮಳೆ-ಬೆಳೆಯಾಗಲಿ. ಯಾರು ಮೇಲಲ್ಲ, ಯಾರೂ ಕೀಳಲ್ಲ, ನಾವೆಲ್ಲರೂ ಒಂದೇ ಎಂಬುದು ರಂಜಾನ್ ಸಂದೇಶವಾಗಿದೆ ಎಂದು ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಅಸ್ಲಾಂಪಾಷ ಮಾತನಾಡಿ, ಹಿಂದೂ-ಮುಸ್ಲಿಂ ಬಾಂಧವರು ಎಲ್ಲರೂ ಒಂದೇ ಎಂಬ ಭಾವೈಕ್ಯತೆಯನ್ನು ಸಾರಿದ್ದೇವೆ ಎಂದು ಹೇಳಿದರು.
ಹಬ್ಬದ ಪ್ರಯುಕ್ತ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಈದ್ಗಾ ಮೈದಾನಕ್ಕೆ ಮಾಜಿ ಶಾಸಕ ಡಾ. ರಫೀಕ್ ಅಹಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಡಿವೈಎಸ್ಪಿ ಚಂದ್ರಶೇಖರ್, ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ, ಮುಖಂಡರಾದ ಇಕ್ಬಾಲ್ ಅಹಮದ್, ಅಸ್ಲಾಂಪಾಷ, ನಯಾಜ್ ಅಹಮದ್, ರೇವಣಸಿದ್ದಯ್ಯ, ನಯಾಜ್, ಸೇವಾ ದಳದ ಶಿವಪ್ರಸಾದ್, ಗುರುಪ್ರಸಾದ್, ನಟರಾಜಶೆಟ್ಟಿ, ಮಹಮದ್ ಸೈಫ್, ತೋಸಿಫ್, ಫಯಾಜ್ ಅಹಮದ್, ಇರ್ಫಾನ್ ಭೇಟಿ ನೀಡಿ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯ ಕೋರಿದರು.


