Wednesday, March 25, 2026
Google search engine
Homeಮುಖಪುಟನಿವೃತ್ತಿ ವೇತನ, ಪಿಂಚಣಿ ಪರಿಷ್ಕರಣೆಗೆ ಆಗ್ರಹ-ನಿವೃತ್ತ ನೌಕರರ ಪ್ರತಿಭಟನೆ

ನಿವೃತ್ತಿ ವೇತನ, ಪಿಂಚಣಿ ಪರಿಷ್ಕರಣೆಗೆ ಆಗ್ರಹ-ನಿವೃತ್ತ ನೌಕರರ ಪ್ರತಿಭಟನೆ

ಕಳೆದ ವರ್ಷದ ಕೇಂದ್ರ ಬಜೆಟ್ ಮೂಲಕ ಜಾರಿಗೆ ತರುತ್ತಿರುವ ಕಾಯ್ದೆಯ ಪ್ರಕಾರ ನಿವೃತ್ತ ನೌಕರರಿಗೆ ಕರಾಳ ಶಾಸನವಾಗಿದ್ದು, ಇದರ ವಿರುದ್ಧ ತುಮಕೂರು ಜಿಲ್ಲಾ ನಿವೃತ್ತ ಸರ್ಕಾರಿ ನೌಕರರು ಪ್ರತಿಭಟಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬುಧವಾರ ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ನಿವೃತ್ತ ನೌಕರರು ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಊರ್ಜಿತ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಘದ ಅಧ್ಯಕ್ಷೆ ಬಾ.ಹ. ರಮಾಕುಮಾರಿ, ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಕಳೆದ ಬಜೆಟ್‌ನಲ್ಲಿ ಊರ್ಜಿತ ಕಾಯ್ದೆಯನ್ನು ಮಂಡಿಸಿದ್ದರು. ಇದರ ಪ್ರಕಾರ ನಿವೃತ್ತರಿಗೆ ಡಿ.ಎ. ಮತ್ತು ಪಿಂಚಣಿ ಪರಿಷ್ಕರಣೆ ಇಲ್ಲವಾಗುತ್ತದೆ. ಇದನ್ನೇ ನಂಬಿ ಬದುಕುವ ನಿವೃತ್ತರು ಸಂಕಷ್ಟಕ್ಕೆ ಈಡಾಗುತ್ತಾರೆ. ಆದಕಾರಣ ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ದೇಶಾದ್ಯಂತ ಕರಾಳ ದಿನವಾಗಿ ಆಚರಿಸಲಾಗುತ್ತಿದ್ದು, ಇದರನ್ವಯ ತುಮಕೂರಿನಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಜೀವನದ ಕೊನೆಯ ಘಟ್ಟದಲ್ಲಿ ಬದುಕುವ ನಿವೃತ್ತ ನೌಕರರು ಹೆಚ್ಚು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಇದರಿಂದಾಗಿ ಹೆಚ್ಚು ಖರ್ಚುಗಳು ಬರುತ್ತವೆ. ಕಾಲ ಕಾಲಕ್ಕೆ ಡಿ.ಎ., ಸಿಗಬೇಕು. ಇದರಿಂದ ಕನಿಷ್ಠ ಮಟ್ಟದ ಜೀವನ ನಿರ್ವಹಣೆಗೆ ಅವಕಾಶವಾಗುತ್ತದೆ. ನಿವೃತ್ತಿ ವೇತನ ಹಾಗೂ ಪಿಂಚಣಿ ಪರಿಷ್ಕರಣೆ ಮಾಡುವುದಿಲ್ಲ ಎಂದು ಹೇಳಿರುವುದು ನಿವೃತ್ತ ನೌಕರರ ಬದುಕಿನ ಮೇಲೆ ಗಾಢ ಪರಿಣಾಮ ಉಂಟು ಮಾಡುತ್ತದೆ. ಆದಕಾರಣ ಕೇಂದ್ರ ಸರ್ಕಾರ ಇದರ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿ ಕೇಂದ್ರ ಸರ್ಕಾರಕ್ಕೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಕಳುಹಿಸಿಕೊಡುವಂತೆ ನಿವೃತ್ತ ನೌಕರರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟನರಸಯ್ಯ, ಉಪಾಧ್ಯಕ್ಷ ಅನಂತರಾಮಯ್ಯ, ಖಜಾಂಚಿ ನರಸಿಂಹರೆಡ್ಡಿ, ಮಂಜುಳ ದೇವಿ, ಭವಾನಮ್ಮ, ಅಕ್ಕಮ್ಮ ಮಾತನಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular