ಆಗ್ನೇಯ ಪದವಿಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ತುಮಕೂರು ನಗರದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದರು. ಪಕ್ಷದ ಮುಖಂಡರು, ಬೆಂಬಲಿಗರೊಂದಿಗೆ ನಗರದ ವಿವಿಧೆಡೆ ಪದವೀಧರ ಮತದಾರರನ್ನು ಭೇಟಿಯಾಗಿ ಮತಯಾಚನೆ ಮಾಡಿದರು.
ತುಮಕೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ತಮ್ಮ ಪತ್ನಿ ಅಮೂಲ್ಯ ಹಾಗೂ ಹಲವು ಕಾಂಗ್ರೆಸ್ ಮುಖಂಡರೊಂದಿಗೆ ಶಶಿ ಹುಲಿಕುಂಟೆಮಠ್ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಮುಖಂಡರು ಪಕ್ಷದ ಅಭ್ಯರ್ಥಿ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೇಮಠ್, ಅಭ್ಯರ್ಥಿಯಾದ ನಂತರ ಆಗ್ನೇಯ ಪದವಿಧರ ಕ್ಷೇತ್ರದಾದ್ಯಂತ ಸಾಕಷ್ಟು ಬಾರಿ ಪ್ರವಾಸ ಮಾಡಿ ಸಚಿವರು, ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರು ಹಾಗೂ ಪದವೀಧರ ಮತದಾರರನ್ನು ಭೇಟಿ ಮಾಡಿ ತಮಗೆ ಬೆಂಬಲ ನೀಡುವಂತೆ ಕೋರಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಾರಿ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಉತ್ತಮ ಅವಕಾಶವಿದೆ ಎಂದು ಹೇಳಿದರು.
ತಮ್ಮ ಬೆಂಬಲದ ಅನೇಕ ತಂಡಗಳು ಹೆಚ್ಚು ಮಂದಿ ಪದವೀಧರ ಮತದಾರರ ನೋಂದಣೆ ಮಾಡಿಸಿ ಸಹಕಾರಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಜನರ ಯೋಜನೆಗಳು, ಪಕ್ಷ ಕೊಟ್ಟ ಭರವಸೆಗಳನ್ನು ಈಡೇರಿಸುತ್ತಾ ಜನರ ವಿಶ್ವಾಸ ಗಳಿಸಿರುವುದು ತಮ್ಮ ಗೆಲುವಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ಶಶಿ ಹುಲಿಕುಂಟೆಮಠ್ ಅವರ ಗೆಲುವಿಗೆ ಪಕದ ಎಲ್ಲಾ ಮುಖಂಡರು ಒಟ್ಟಾಗಿ ಕೆಲಸ ಮಾಡುತ್ತೇವೆ. ಸರ್ಕಾರ ಕಾರ್ಯಕ್ರಮಗಳೂ ಇವರ ಗೆಲುವಿಗೆ ಸಹಕಾರಿಯಾಗಲಿವೆ ಎಂದು ತಿಳಿಸಿದರು.
ಮಾಜಿ ಶಾಸಕ ಡಾ.ಎಸ್.ರಫೀಕ್ ಅಹ್ಮದ್ ಮಾತನಾಡಿ, ಶಶಿ ಹುಲಿಕುಂಟೇಮಠ್ ಅವರಿಗೆ ಶುಭ ಕೋರಿ ಗೆಲುವಿಗೆ ಎಲ್ಲಾ ರೀತಿಯ ಸಹಕಾರ ನಿಡುವುದಾಗಿ ಹೇಳಿದರು. ಬೇರೆ ಪಕ್ಷಗಳಿಗಿಂಥಾ ಕಾಂಗ್ರೆಸ್ ಪಕ್ಷವು ಅಭ್ಯರ್ಥಿಯನ್ನು ಮೊದಲು ಘೋಷಣೆ ಮಾಡಿರುವುದು ಪ್ರಚಾರ ಮಾಡಲು ಕಾಲಾವಕಾಶ ದೊರಕಿದೆ ಎಂದರು.
ಮುಖಂಡ ಇಕ್ಬಾಲ್ ಅಹ್ಮದ್ ಮಾತನಾಡಿ, ಆಗ್ನೇಯ ಪದವಿಧರರ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಆರಂಭಿಸಿರುವ ಶಶಿ ಹುಲಿಕುಂಟೆಮಠ್, ಮತದಾರರ ಒಲವು ಗಳಿಸುವಲ್ಲಿ ಯಶಸ್ವಿ ಹಾದಿಯಲ್ಲಿದ್ದಾರೆ. ಇವರ ಗೆಲುವಿಗೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು ಒಟ್ಟಾಗಿ ಕೆಲಸ ಮಾಡುವುದಾಗಿ ಹೇಳಿದರು.
ತುಮಕೂರು ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಟಿ.ಎಂ.ಮಹೇಶ್, ಸೈಯದ್ ನಯಾಜ್, ಎನ್.ಮಹೇಶ್, ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷ ಟಿ.ಹೆಚ್.ಅನಿಲ್ಕುಮಾರ್, ಮುಖಂಡರಾದ ಗುರುಪ್ರಸಾದ್, ನಟರಾಜಶೆಟ್ಟಿ, ಫಯಾಜ್ ಅಹ್ಮದ್, ಟಿ.ಆರ್.ಬಸವರಾಜು, ಶಿವಪ್ರಕಾಶ್, ಸಿ.ಎನ್.ಸುಗುಣಾದೇವಿ, ಕೆ.ಟಿ.ಮಂಜುನಾಥ್, ಪ್ರದೀಪ್ಕುಮಾರ್ ದಾಸೋಹ ಶಿವಣ್ಣ, ಅಂಬರೀಶ್, ಹೆಬ್ಬೂರು ಶ್ರೀನಿವಾಸಮೂರ್ತಿ, ಸುಜಾತ, ಜಯಶಂಕರ್, ಸಂತೋಷ್ಕುಮಾರ್, ಅನಿಲ್ಕುಮಾರ್, ಚರಣ್ರಾಜ್, ಮೋಹನ್ ಹಾಜರಿದ್ದರು.


