ಒಳಮೀಸಲಾತಿ ಮಸೂದೆಗೆ ಅನುಮೋದನೆ ನೀಡುವಂತೆ ಒತ್ತಾಯಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್ ಮುನಿಯಪ್ಪ ನೇತೃತ್ವದ ನಿಯೋಗ ಮಂಗಳವಾರ ಮನವಿ ಸಲ್ಲಿಕೆ ಮಾಡಿತು.
ಒಳ ಮೀಸಲಾತಿ ಮಸೂದೆ ಅಂಗೀಕರಸಿ, ಅನುಮೋದನೆ ನೀಡುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಹೆಚ್ ಮುನಿಯಪ್ಪ, ಅಬಕಾರಿ ಸಚಿವ ತಿಮ್ಮಾಪುರ, ಶಾಸಕರು ಹಾಗೂ ಸಮುದಾಯ ಮುಖಂಡರ ನಿಯೋಗವು ಲೋಕ ಭವನಕ್ಕೆ ಭೇಟಿ ನೀಡಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ವಿಧಾನಸಭೆ ಮತ್ತು ವಿಧಾನ ಪರಿಷತ್ತು ಅಂಗೀಕರಿಸಿದ ಒಳ ಮೀಸಲಾತಿ ಮಸೂದೆಗೆ ನಿಮ್ಮಿಂದ ಆದಷ್ಟು ಬೇಗ ಅನುಮೋದನೆ ನೀಡಬೇಕೆಂದು ನಾವು, ಸಚಿವರು, ಶಾಸಕರು, ಎಂಎಲ್ಸಿಗಳು ಮತ್ತು ಹಿರಿಯ ನಾಯಕರು ಗೌರವದಿಂದ ವಿನಂತಿಸುತ್ತೇವೆ ಎಂದು ಮುನಿಯಪ್ಪ ತಿಳಿಸಿದರು.
ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಬೆಂಬಲದೊಂದಿಗೆ ಎರಡೂ ಸದನಗಳು ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದೆ.
ಸಂವಿಧಾನದ ಅಡಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ತತ್ವಗಳಿಗೆ ಅನುಗುಣವಾಗಿ ಪರಿಶಿಷ್ಟ ಜಾತಿಯ 101 ಒಳ ಸಮುದಾಯಗಳಲ್ಲಿ ಮೀಸಲಾತಿ ಕಲ್ಪಿಸಲು ಈ ಮಸೂದೆ ಸಹಾಯವಾಗಲಿದ್ದು, ಮಸೂದೆಗೆ ಆದಷ್ಟು ಬೇಗ ಒಪ್ಪಿಗೆ ನೀಡಬೇಕೆಂದು ಪತ್ರದ ಮುಖೇನ ನಿಯೋಗದ ಸದಸ್ಯರು ರಾಜ್ಯಪಾಲರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಲ್. ಹನುಮಂತಯ್ಯ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹಾಜರಿದ್ದರು.


